
ನವದೆಹಲಿ, ಸೆಪ್ಟೆಂಬರ್ 25: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಬಗ್ಗೆ ಕ್ರಿಕೆಟ್ ವಲಯದಲ್ಲಿ ಹೆಚ್ಚಿನ ಚರ್ಚೆಗಳಾಗುತ್ತಿವೆ. ಆದರೆ ಧೋನಿಗೆ ಇಂಥ ಸಂದರ್ಭ ಎದುರಾಗಿದ್ದು ನಿಜಕ್ಕೂ ಅನ್ಯಾಯ ಎಂದು ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್, ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ಗೆ ಧೋನಿ ಕೊಡುಗೆ ಸಾಕಷ್ಟಿದೆ. ಹೀಗಾಗಿ ತನ್ನ ವೃತ್ತಿ ಬದುಕಿನ ಬಗ್ಗೆ ಧೋನಿಯೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಯುವಿ ನುಡಿದಿದ್ದಾರೆ. ಐಸಿಸಿ ಕ್ರಿಕೆಟ್ ವಿಶ್ವಕಪ್ ಬಳಿಕ ನಡೆದ ವೆಸ್ಟ್ ಇಂಡೀಸ್ ಪ್ರವಾಸ, ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ ಸರಣಿಗಳಲ್ಲಿ ಧೋನಿ ಆಡಿರಲಿಲ್ಲ. ಹೀಗಾಗಿ ಧೋನಿ ನಿವೃತ್ತಿ ಬಗ್ಗೆ ಗಾಳಿ ಸುದ್ದಿಗಳು ಹಬ್ಬುತ್ತಲೇ ಇವೆ.
'ಧೋನಿ ನಿವೃತ್ತಿ ಬಗ್ಗೆ ಚರ್ಚೆಗಳಾಗುತ್ತಿರುವುದು ನಿಜಕ್ಕೂ ಅನ್ಯಾಯ. ಭಾರತದ ಕ್ರಿಕೆಟ್ಗೆ ಧೋನಿ ಬಹಳಷ್ಟು ಕೊಡುಗೆಯಿತ್ತಿದ್ದಾರೆ. ಭಾರತದ ಅತ್ಯಂತ ಯಶಸ್ವಿ ನಾಯಕ ಧೋನಿ. ಹೀಗಾಗಿ ನೀವು ಆತನಿಗೊಂದಿಷ್ಟು ಕಾಲಾವಕಾಶ ನೀಡಬೇಕಿದೆ,' ಎಂದು 'ಕೆಚ್ಚೆದೆಯ ಮಹಾರಾಜ' ಯುವಿ ಹೇಳಿದ್ದಾರೆ.
ಮಾತು ಮುಂದುವರೆಸಿದ ಸಿಕ್ಸರ್ ಕಿಂಗ್, 'ತಾನು ಯಾವತ್ತು ಕ್ರಿಕೆಟ್ ಅಂಗಳದಿಂದ ಹೊರ ನಡೆಯಬೇಕು ಅನ್ನೋದನ್ನು ಆತನೇ ನಿರ್ಧರಿಸಬೇಕಿದೆ. ನಿವೃತ್ತಿ ಕುರಿತು ಧೋನಿಯೇ ಮಾತನಾಡಬೇಕಿದೆ. ಇನ್ನೂ ಧೋನಿ ಆಡಲು ಬಯಸಿದರೆ ನಾವದನ್ನು ಗೌರವಿಸಲೇಬೇಕು,' ಎಂದರು.
ವೆಸ್ಟ್ ಇಂಡೀಸ್ ಪ್ರವಾಸ ಸರಣಿ, ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಸರಣಿಯಿಂದ ತಾನೇ ಹೊರಗಿರುವ ನಿರ್ಧಾರ ತಾಳಿದ್ದ ಧೋನಿ ಮುಂಬರಲಿರುವ ಬಾಂಗ್ಲಾ ವಿರುದ್ಧದ ಸರಣಿಯಿಂದಲೂ ಹೊರಗಿರಬಯಸಿದ್ದಾರೆ ಎನ್ನಲಾಗುತ್ತಿದೆ. ಭಾರತ-ಬಾಂಗ್ಲಾ ಸರಣಿ 3 ಟಿ20, 2 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿದ್ದು, ನವೆಂಬರ್ 3ರಿಂದ ಆರಂಭವಾಗಲಿದೆ.