ಗೋವಾ, ಮಾರ್ಚ್ 14: ಜೇವಿಯರ್ ಹೆರ್ನಾಂಡೀಸ್ (10 ಮತ್ತು 90ನೇ ನಿಮಿಷ) ಹಾಗೂ ಎಡು ಗಾರ್ಸಿಯಾ (48ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಚೆನ್ನೈಯಿನ್ ಎಫ್ ಸಿ ತಂಡವನ್ನು 3-1 ಗೋಲಿನಿಂದ ಮಣಿಸಿದ ಎಟಿಕೆ ತಂಡ ಮೂರನೇ ಬಾರಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. 2014, 2016 ಹಾಗು 2020ರಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಎಟಿಕೆ ಮೂರನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ರಾಯ್ ಕೃಷ್ಣ ಹಾಗೂ ನಿರಿಜುಸ್ ವಾಸ್ಕಿಸ್ ತಲಾ 15 ಗೋಲುಗಳನ್ನು ಗಳಿಸಿದ್ದು, ಗೋಲ್ಟನ್ ಬೂಟ್ ಪ್ರಶಸ್ತಿಯಲ್ಲಿ ಸಮಬಲ ಸಾಧಿಸಿದ್ದಾರೆ. ಚೆನ್ನೈಯಿನ್ ಎಫ್ ಸಿ ಪರ ನಿರಿಜುಸ್ ವಾಸ್ಕಿಸ್ 69ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.
ಎಟಿಕೆ ಮುನ್ನಡೆ
ಜೇವಿಯರ್ ಹೆರ್ನಾಂಡೀಸ್ (10ನೇ ನಿಮಿಷ) ಗಳಿಸಿ ಗೋಲಿನಿಂದ ಎಟಿಕೆ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ಪಂದ್ಯದಲ್ಲಿ ಚೆನ್ನೈಯಿನ್ ಎಫ್ಸಿ ವಿರುದ್ಧ 1-0 ಗೋಲಿನ ಅಂತರದಲ್ಲಿ ಮೇಲುಗೈ ಸಾಧಿಸಿದೆ. ಮೊದಲಾರ್ಧದಲ್ಲಿ ಚೆನ್ನೈಯಿನ್ ತಂಡಕ್ಕೆ ಅದೃಷ್ಟ ಇದ್ದಂತೆ ಕಾಣುತ್ತಿಲ್ಲ. ಮೂರು ಗೋಲ್ ಬಾಕ್ಸಿಗೆ ಗುರಿ ಇಟ್ಟರೂ ಧೀರಜ್ ಸಿಂಗ್ ಅವರ ಅದ್ಭುತ ಗೋಲ್ ಕೀಪಿಂಗ್ ನಿಂದ ಅದು ಸಾಧ್ಯವಾಗಲಿಲ್ಲ.
ಹೊಸ ಇತಿಹಾಸಕ್ಕೆ ವೇದಿಕೆ ಸಜ್ಜು
ಹೀರೋ ಇಂಡಿಯನ್ ಸೂಪರ್ ಲೀಗ್ ಫೈನಲ್ ಹಂತ ತಲುಪಿದೆ. ಎಟಿಕೆ ಹಾಗೂ ಚೆನ್ನೈಯಿನ್ ಎಫ್ ಸಿಯಲ್ಲಿ ಯಾವುದೇ ತಂಡ ಗೆದ್ದರೂ ಅಲ್ಲಿ ಇಇತಹಾಸವೊಂದು ನಿರ್ಮಾಣವಾಗುತ್ತದೆ. ಇತ್ತಂಡಗಳಲ್ಲಿ ಯಾವುದೇ ಗೆದ್ದರೂ ಮೂರನೇ ಬಾರಿಗೆ ಇಂಡಿಯನ್ ಸೂಪರ್ ಲೀಗ್ ಗೆದ್ದಂತಾಗುತ್ತದೆ. ಬೇಸರದ ಸಂಗತಿಯೆಂದರೆ ಪಂದ್ಯ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯುತ್ತದೆ. ಕೊರೋನಾ ವೈರಸ್ ಜಗತ್ತನ್ನು ಆವರಿಸಿದ ಕಾರಣ ಈ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಎರಡೂ ತಂಡಗಳು ಈಗಾಗಲೇ ತಲಾ ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿವೆ.
ಪ್ಲೇ ಆಫ್ ನಲ್ಲಿ ಚೆನ್ನೈಯಿನ್ ತಂಡ ಉತ್ತಮ ಪ್ರದರ್ಶನ ತೋರಿ 6-5 ಗೋಲುಗಳ ಅಂತರದಲ್ಲಿ ಗೋವಾ ತಂಡವನ್ನು ಮಣಿಸಿದ್ದರೆ ಎಟಿಕೆ 3-2 ಸರಾಸರಿಯಲ್ಲಿ ಬೆಂಗಳೂರು ತಂಡಕ್ಕೆ ಸೋಲುಣಿಸಿತ್ತು. ಇದೇ ಮೊದಲ ಬಾರಿ ಈ ಎರಡು ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ, ವಿಶೇಷವೆಂದರೆ ಇತ್ತಂಡಡಗಳು ಇದುವರೆಗೂ ಫೈನಲ್ ನಲ್ಲಿ ಸೋತಿಲ್ಲ.
ಶನಿವಾರ ಒಂದು ತಂಡ ಫೈನಲ್ ನಲ್ಲಿ ಸೋಲಲೇಬೇಕಾಗುತ್ತದೆ. ಈ ಋತುವಿನಲ್ಲಿ ಎಟಿಕೆ ತಂಡ ಸ್ಥಿರ ಪ್ರದರ್ಶನ ತೋರಿದ ತಂಡವೆನಿಸಿದೆ. ಚೆನ್ನೈಯಿನ್ ತಂಡ ಅಚ್ಚರಿಯ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಿತ್ತು. ಓವೆನ್ ಕೊಯ್ಲ್ ಆಗಮನದ ನಂತರ ಚೆನ್ನೈಯಿನ್ ತಂಡದ ಅದೃಷ್ಟವೇ ಬದಲಾಯಿತು. ಕೊಯ್ಲ್ ಬರುವುದಕ್ಕೆ ಮುನ್ನ ಚೆನ್ನೈಯಿನ್ ತಂಡ ತಾನು ಆಡಿರುವ ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಒಂದು ಪಂದ್ಯ. ಗಳಿಸಿರುವುದು ಕೇವಲ ನಾಲ್ಕು ಗೋಲುಗಳು. ನೂತನ ಕೋಚ್ ಆಗಮನದ ನಂತರ ಮಾಜಿ ಚಾಂಪಿಯನ್ ಎಂಟು ಪಂದ್ಯಗಳನ್ನು ಗೆದ್ದಿತ್ತು.
ಇನ್ನು ಒಂದು ಪಂದ್ಯ ಗೆದ್ದರೆ ಚೆನ್ನೈಯಿನ್ ತಂಡ ಇತಿಹಾಸ ನಿರ್ಮಿಸಲಿದೆ. 14 ಗೋಲುಗಳನ್ನು ಗಳಿಸಿರುವ ನೆರಿಜುಸ್ ವಾಸ್ಕಿಸ್ ಅತಿ ಹೆಚ್ಚು ಗೋಲು ಗಳಿಸಿದ ಗೌರವಕ್ಕೆ ಪಾತ್ರರಾಗಲು ಹೋರಾಟ ನಡೆಸಲಿದ್ದಾರೆ. ತಂಡದ ಇನ್ನೋರ್ವ ಸ್ಟ್ರೈಕರ್ ರಫಾಯಲ್ ಕ್ರಿವೆಲ್ಲೆರೊ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಲಾಲ್ ರಯಾನ್ಜುವಾಲಾ ಚಾಂಗ್ಟೆ ಎರಡೂ ಪ್ಲೇ ಆಫ್ ಪಂದ್ಯಗಳಲ್ಲಿ ಗೋಲು ಗಳಿಸಿದ ಭಾರತದ ಮೊದಲ ಆಟಗಾರರೆನಸಿದ್ದಾರೆ.
ಎಟಿಕೆ ತಂಡ ರಾಯ್ ಕೃಷ್ಣ ಹಾಗೂ ಡೇವಿಡ್ ವಿಲಿಯಮ್ಸ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. 15 ಗೋಲುಗಳನ್ನು ಗಳಿಸಿರುವ ಕೃಷ್ಣ ಗೋಲ್ಟನ್ ಬೂಟು ಧರಿಸಲು ಸಜ್ಜಾಗಿದ್ದಾರೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟ ಡೇವಿಡ್ ವಿಲಿಯಮ್ಸ್ ಕೂಡ ಜಯದ ರೂವಾರಿ.