
ಬೆಂಗಳೂರು, ಮಾರ್ಚ್ 12: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಸ್ಟೇಟ್ ಪ್ಯಾರಾ ಗೇಮ್ಸ್ 2020 ಕ್ರೀಡಾಕೂಟದಲ್ಲಿ ಬೆಂಗಳೂರಿನ ವಾಟಾಳ್ ಎನ್ ಬಸವರಾಜುಗೆ ಬಂಗಾರದ ಪದಕ ಲಭಿಸಿದೆ. ಪುರುಷರ ವಿಭಾಗದ ಜಾವೆಲಿನ್ ಥ್ರೋನಲ್ಲಿ ಸ್ಪರ್ಧಿಸಿದ್ದ ಬಸವರಾಜು ಪ್ರಥಮ ಸ್ಥಾನದೊಂದಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸದ್ಯ ಬೆಂಗಳೂರಿನ ಜಲಮಂಡಳಿಯ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್ ಬಸವರಾಜುಗೆ ಕ್ರೀಡೆಯ ಬಗ್ಗೆ ಅಪಾರ ಪ್ರೀತಿಯಿದೆ. ಕ್ರೀಡಾಕ್ಷೇತ್ರದಲ್ಲಿ ಸಾಧಿಸಬೇಕನ್ನೋ ಹಿರಿದಾಸೆಯೂ ಇದೆ. ಐದು ವರ್ಷದ ಮಗುವಿದ್ದಾಗಲೇ ಪೋಲಿಯೋ ಖಾಯಿಲೆಗೆ ತುತ್ತಾಗಿ ಬಲಗಾಲಿನ ಸ್ವಾಧೀನ ಕಳೆದುಕೊಂಡಿರುವ ಬಸವರಾಜು ಅವರೊಳಗೊಬ್ಬ ಅಪ್ಪಟ ಛಲಗಾರನಿದ್ದಾನೆ ಎನ್ನುವುದಕ್ಕೆ ಅವರ ಕ್ರೀಡಾ ಸಾಧನೆಯೇ ಸಾಕ್ಷಿ.

ರಾಜ್ಯದಿಂದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಬಸವರಾಜು, ಮೈಸೂರಿನಲ್ಲೇ ಪ್ಯಾರಾಲಂಪಿಕ್ ಕಮಿಟಿ ಆಫ್ ಇಂಡಿಯಾವು (ಪಿಸಿಐ) ಮಾರ್ಚ್ 26-28ರವರೆಗೆ ಆಯೋಜಿಸುತ್ತಿರುವ ರಾಷ್ಟ್ರೀಯ ಮಟ್ಟದ ಪ್ಯಾರಾಲಂಪಿಕ್ ಗೇಮ್ಸ್ನಲ್ಲಿ ಸ್ಪರ್ಧಿಸಲಿದ್ದಾರೆ. ಅಲ್ಲೂ ಪದಕ ಗೆಲ್ಲುವ ಭರವಸೆ ಬಸವರಾಜು ಅವರಿಗಿದೆ.
2018ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದಿದ್ದ ಪ್ಯಾರಾಲಂಪಿಕ್ ಗೇಮ್ಸ್ನಲ್ಲೂ ವಾಟಾಳ್ ಬಸವರಾಜು ಜಾವೆಲಿನ್ ಥ್ರೋ ಮತ್ತು ಡಿಸ್ಕಸ್ ಥ್ರೋನಲ್ಲಿ ಸ್ಪರ್ಧಿಸಿ ಒಂದು ಚಿನ್ನ, ಒಂದು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಕ್ರೀಡಾಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸುವಾಸೆ ಹೊಂದಿರುವ, ಬದುಕಿನ ಬಗ್ಗೆ ಬಣ್ಣದ ಕನಸುಗಳನ್ನು ಕಟ್ಟಿಕೊಂಡಿರುವ ಬಸವರಾಜು ಇಲಾಖೆಯಿಂದ, ಸಮಾಜದಿಂದ ಮತ್ತಷ್ಟು ನೈತಿಕ ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದಾರೆ.