ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಗಾಯದ ಸಮಸ್ಯೆಯಿಂದಾಗಿ BWF ವರ್ಲ್ಡ್ ಟೂರ್ ಫೈನಲ್ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ಗೆ ತಿಳಿಸಿದ್ದಾರೆ.
ಆಗಸ್ಟ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಸಮಯದಲ್ಲಿ ಮೂಳೆ ಮುರಿತ ಅನುಭವಿಸಿದ್ದ ಸಿಂಧು, 2023ರಲ್ಲಿ ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಬೇಕಾಗಿರುವುದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ನೀಡುವತ್ತ ಗಮನ ಹರಿಸಿದ್ದಾರೆ.
BWF ವರ್ಲ್ಡ್ ಟೂರ್ ಫೈನಲ್ಸ್ನಲ್ಲಿ ಅಗ್ರ ಎಂಟು ಶಟ್ಲರ್ಗಳು ಮತ್ತು ಜೋಡಿಗಳು ಬಹುಮಾನಕ್ಕಾಗಿ ಸ್ಪರ್ಧೆ ನಡೆಸುತ್ತವೆ. ಡಿಸೆಂಬರ್ 14ರಂದು ಚೀನಾದ ಗುವಾಂಗ್ಝೌನಲ್ಲಿ ಟೂರ್ನಿಗೆ ಚಾಲನೆ ದೊರೆಯಲಿದೆ. ಕೋವಿಡ್-19 ಮಿತಿಗಳ ನಡುವೆಯೂ ಪಿವಿ ಸಿಂಧು ಈ ಸ್ಪರ್ಧೆಗೆ ಅರ್ಹತೆ ಪಡೆದಿದ್ದರು.
Eng vs Pak: ಫೈನಲ್ ಸೋಲಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿವಿ ಸಿಂಧುರವರ ತಂದೆ ಪಿವಿ ರಮಣ, ಮಗಳ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಬ್ಯಾಡ್ಮಿಂಟನ್ ಅಸೋಸಿಯೇಷನ್ಗೆ ಪತ್ರ ಬರೆಯುವ ಮೊದಲು ಪಿವಿ ಸಿಂಧು ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಯೋಚನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕಳೆದ ವರ್ಷ ಕೂಡ ಸಿಂಧು BWF ವಿಶ್ವ ಚಾಂಪಿಯನ್ಶಿಪ್ನಿಂದ ಹೊರಗುಳಿದಿದ್ದರು.
ವೈದ್ಯರ ಸಲಹೆ ಮೇರೆಗೆ ಸಿಂಧು ನಿರ್ಧಾರ
"ಆಕೆ ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಸಾಧಕ-ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಲಾಗಿದೆ. ಗುವಾಂಗ್ಝೌನಲ್ಲಿ ಹಲವು ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಋತುವಿನಲ್ಲಿ ನಡೆಯಲಿರುವ ಪಂದ್ಯಾವಳಿಗಳ ಬಗ್ಗೆ ಗಮನಿಸಿ ಪಿವಿ ಸಿಂಧು ಈ ನಿರ್ಧಾರ ತೆಗೆದುಕೊಂಡಿರುವುದಾಗಿ" ಪಿವಿ ರಮಣ ತಿಳಿಸಿದ್ದಾರೆ.
2023ರಲ್ಲಿ ಪಿವಿ ಸಿಂಧು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. 2024ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಇದು ಸಹಕಾರಿಯಾಗಲಿದೆ. ಕೋವಿಡ್ -19 ಕಾರಣದಿಂದ ಮುಂದೂಡಲ್ಪಟ್ಟಿದ್ದ ಏಷ್ಯನ್ ಗೇಮ್ಸ್ 2023ರಲ್ಲಿ ನಡೆಯಲಿದೆ.
"ಸಿಂಧು ಮುಂದಿನ ವರ್ಷ ಏಷ್ಯನ್ ಗೇಮ್ಸ್ ಮತ್ತು 2024 ರ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಪಡೆಯಲು ಉತ್ತಮವಾಗಿ ಆಡಬೇಕು, ಸುಮಾರು 22 ಪಂದ್ಯಾವಳಿಗಳನ್ನು ಆಡುಬೇಕಾಗಿರುವುದರಿಂದ ಅವರ ಫಿಟ್ನೆಸ್ ಮುಖ್ಯವಾಗುತ್ತದೆ. ಆದ್ದರಿಂದ ಅವರು ಚೇತರಿಸಿಕೊಳ್ಳುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ" ಎಂದು ರಮಣ ಹೇಳಿದರು.
ಸಿಂಧು ಹೊರತಾಗಿ ಎಚ್ಎಸ್ ಪ್ರಣಯ್ ಮಾತ್ರ ವಿಶ್ವ ಟೂರ್ ಫೈನಲ್ನಲ್ಲಿ ಆಡಲಿದ್ದಾರೆ. ಅಗ್ರ ಶ್ರೇಯಾಂಕಿತ ಆಟಗಾರ ಲಕ್ಷ್ಯ ಸೇನ್ ಕೂಡ BWF ವರ್ಲ್ಡ್ ಟೂರ್ ಫೈನಲ್ನಿಂದ ಹಿಂದೆ ಸರಿದಿದ್ದಾರೆ.