ಬೆಂಗಳೂರು, ಜುಲೈ 14: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಆರನೇ ಆವೃತ್ತಿಯ ಕಳ್ಳಾಟದ ಬಗ್ಗೆ ತನಿಖೆ, ವಿಚಾರಣೆ, ಪರಿಶೀಲನೆ ನಡೆಸಿದ ನಿವೃತ್ತ ನ್ಯಾ. ಲೋಧಾ ನೇತೃತ್ವದ ಸಮಿತಿ ಮಹತ್ವದ ತೀರ್ಪು ನೀಡಿದೆ. 2013 ರಿಂದ 2015ರ ತನಕದ ಹಗರಣದ ಪ್ರಮುಖ ಘಟನಾವಳಿಗಳನ್ನು ಕಾಲಾನುಕ್ರಮದಲ್ಲಿ ಇಲ್ಲಿ ನೀಡಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಎರಡು ವರ್ಷ ನಿಷೇಧ ಹಾಗೂ ತಂಡದ ಮಾಲೀಕರಾದ ಗುರುನಾಥ್ ಮೇಯಪ್ಪನ್ ಹಾಗೂ ರಾಜ್ ಕುಂದ್ರಾಗೆ ಆಜೀವ ನಿಷೇಧ ಹೇರಲಾಗಿದೆ.
ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ, ಅಶೋಕ್ ಭಾನ್ ಮತ್ತು ಆರ್.ವಿ. ರವೀಂದ್ರನ್ ಅವರಿದ್ದ ತ್ರಿಸದಸ್ಯ ಸಮಿತಿಯನ್ನು ಸುಪ್ರೀಂಕೋರ್ಟ್ ನೇಮಿಸಿತ್ತು. [ಅಮಾನತುಗೊಂಡರೂ ಚೆನ್ನೈ, ರಾಜಸ್ಥಾನ ಐಪಿಎಲ್ ನಲ್ಲಿ ಆಡ್ಬಹುದು!]
ರಾಜ್ ಕುಂದ್ರಾ ಹಾಗೂ ಮೇಯಪ್ಪನ್ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡೆಸುವ ಕ್ರಿಕೆಟ್ ಸಂಬಂಧಿಸಿದ ಯಾವುದೇ ಚಟುವಟಿಕೆಯಲ್ಲೂ ಪಾಲ್ಗೊಳ್ಳುವಂತಿಲ್ಲ. [ಒಂದೇ ಸೈಕಲ್ ನಲ್ಲಿ ಧೋನಿ, ಜಡೇಜಾ, ರೈನಾ ಪ್ರಯಾಣ!]
ಇದಕ್ಕೂ ಮುನ್ನ ಶ್ರೀಶಾಂತ್, ಅಜಿತ್ ಚಾಂಡಿಲ ಹಾಗೂ ಅಂಕಿತ್ ಚೌಹಾಣ್ ಅವರು ಬಂಧನಕ್ಕೊಳಗಾಗಿದ್ದರು. ನಂತರ ಜಾಮೀನಿನ ಮೇಲೆ ಹೊರ ಬಂದರೂ ಆಜೀವ ನಿಷೇಧಕ್ಕೆ ಒಳಗಾಗಿದ್ದಾರೆ. [ರಾಜ್ ಕುಂದ್ರಾ, ಮೇಯಪ್ಪನ್ ಗೆ ಕ್ರಿಕೆಟ್ ನಿಂದ ಆಜೀವ ನಿಷೇಧ]
ಐಪಿಎಲ್ ಹಗರಣ ಕಾಲಾನುಕ್ರಮದಲ್ಲಿ ಹೀಗಿದೆ:
ಮೇ 16, 2013: ಕ್ರಿಕೆಟರ್ ಶ್ರೀಶಾಂತ್, ಅಂಕಿತ್ ಚೌಹಾಣ್, ಅಜಿತ್ ಚಾಂಡಿಲ ಹಾಗೂ ಶ್ರೀಶಾಂತ್ ಗೆಳೆಯ ಬುಕ್ಕಿ ಜಿಜು ಜನಾರ್ದನ್ ಸೇರಿದಂತೆ 10 ಜನರನ್ನು ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ದೆಹಲಿ ಪೊಲೀಸರು ಬಂಧಿಸಿದರು.
ಮೇ 17, 2013: ರಾಜಸ್ಥಾನ್ ರಾಯಲ್ಸ್ ಆಟಗಾರ ಅಮಿತ್ ಸಿಂಗ್ ಅವರನ್ನು ಬಿಸಿಸಿಐ ಅಮಾನತು ಮಾಡಿತು.
ಮೇ 18, 2013: ಸ್ಪಾಟ್ ಫಿಕ್ಸಿಂಗ್ ಗೆ ಸಂಬಂಧಿಸಿದಂತೆ ದಾಖಲೆಗಳಿಗಾಗಿ ಅಜಿತ್ ಚಾಂಡಿಲ ಮನೆಯ ಮೇಲೆ ದೆಹಲಿ ಪೊಲೀಸರು ದಾಳಿ ಮಾಡಿ ಹುಡುಕಾಟ ನಡೆಸಿದರು.
ಮೇ 20, 2013: ಆರೋಪಿಗಳಾದ ಮೂವರು ರಾಜಸ್ಥಾನ ರಾಯಲ್ಸ್ ಆಟಗಾರರನ್ನು ತಂಡದಿಂದ ಕೈಬಿಟ್ಟ ಫ್ರಾಂಚೈಸಿ.
ಮೇ 21, 2013: ಬುಕ್ಕಿಗಳ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ನಟ ವಿನೂ ದಾರಾ ಸಿಂಗ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದರು.
ಮೇ 23, 2013: ಚೆನ್ನೈ ತಂಡದ ಮಾಲೀಕ ಗುರುನಾಥ್ ಮೇಯಪ್ಪನ್ ಮನೆ ಮೇಲೆ ದಾಳಿ ನಡೆಸಿದ ಮುಂಬೈ ಪೊಲೀಸರು.
ಮೇ 24, 2013: ಬೆಟ್ಟಿಂಗ್, ವಂಚನೆ, ಸಂಚು ಮುಂತಾದ ಆರೋಪಗಳನ್ನು ಹೊರೆಸಿ ಗುರುನಾಥ್ ಬಂಧಿಸಿದ ಮುಂಬೈ ಪೊಲೀಸರು.
* ಗುರುನಾಥ್ ಅವರು ಚೆನ್ನೈ ತಂಡದ ಮಾಲೀಕರಲ್ಲ, ಸಿಇಒ/ತಂಡದ ಪ್ರಿನ್ಸಿಪಾಲ್ ಸದಸ್ಯರಲ್ಲ, ಕ್ರಿಕೆಟ್ ಉತ್ಸಾಹಿ ಅಷ್ಟೇ ಎಂದು ಇಂಡಿಯಾ ಸಿಮೆಂಟ್ಸ್ ಕಾರ್ಯಕಾರಿ ಅಧ್ಯಕ್ಷ ಟಿಎಸ್ ರಘುಪತಿ ಹೇಳಿಕೆ
ಮೇ 26, 2013: ನ್ಯಾ. ಟಿ ಜಯರಾಮ್, ನ್ಯಾ ಆರ್ ಬಾಲಸುಬ್ರಮಣ್ಯ ಹಾಗೂ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಅವರಿದ್ದ ತ್ರಿಸದಸ್ಯ ಆಯೋಗವನ್ನು ರಚಿಸಿದ ಬಿಸಿಸಿಐ. ಮೇಯಪ್ಪನ್ ವಿರುದ್ಧದ ಬೆಟ್ಟಿಂಗ್ ಪ್ರಕರಣದ ತನಿಖೆ ಆರಂಭಿಸಿತು.
ಮೇ 28, 2013: ರಾಜಸ್ಥಾನ್ ರಾಯಲ್ಸ್ ನ ಶ್ರೀಶಾಂತ್, ಅಜಿತ್ ಚಾಂಡಿಲ ಹಾಗೂ ಅಂಕಿತ್ ಚೌಹಾಣ್ ಗೆ ನ್ಯಾಯಾಂಗ ಬಂಧನ, ದೆಹಲಿಯ ತಿಹಾರ್ ಜೈಲಿಗೆ ರವಾನೆ. ಅಂಕಿತ್ ಗೆ ಮದುವೆಯಾಗಲು ಜೂನ್ 6ರ ತನಕ ಜಾಮೀನು ಮಂಜೂರು.
ಮೇ 31, 2013: ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಹಾಗೂ ಖಜಾಂಚಿ ಅಜಯ್ ಶಿರ್ಕೆ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದರು.
ಜೂನ್ 1, 2013: ಐಪಿಎಲ್ ರಾಜೀವ್ ಶುಕ್ಲಾ ರಾಜೀನಾಮೆ.
ಜೂನ್ 5, 2013: ರಾಜಸ್ಥಾನ್ ಆಟಗಾರರ ಬಗ್ಗೆ ಮಾಲೀಕ ರಾಜ್ ಕುಂದ್ರಾರನ್ನು ವಿಚಾರಣೆಗೊಳಪಡಿಸಿದ ದೆಹಲಿ ಪೊಲೀಸರು.
ಜೂನ್ 10, 2013: ಶ್ರೀಶಾಂತ್ ಹಾಗೂ ಇನ್ನಿಬ್ಬರು ಆರೋಪಿಗಳಿಗೆ ಕೋರ್ಟಿನಿಂದ ಜಾಮೀನು ಮಂಜೂರು. ರಾಜ್ ಕುಂದ್ರಾ ಅವರು ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಿಸಿಸಿಐನಿಂದ ಅಮಾನತು.
ಜೂನ್ 28, 2013: ರಾಜ್ ಕುಂದ್ರಾ, ಮೇಯಪ್ಪನ್, ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ತಂಡಕ್ಕೆ ಕ್ಲೀನ್ ಚಿಟ್ ನೀಡಿದ ದ್ವಿಸದಸ್ಯ ತನಿಖಾ ತಂಡ.
ಜೂನ್ 30, 2013: ಬಿಸಿಸಿಐನ ದ್ವಿಸದಸ್ಯ ತನಿಖಾ ತಂಡವೇ ಅಕ್ರಮ ಎಂದು ಬಾಂಬೆ ಹೈಕೋರ್ಟ್ ತೀರ್ಪು. ಪೊಲೀಸರ ನೆರವು ಪಡೆಯದೇ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ ಕೋರ್ಟ್.
ಆಗಸ್ಟ್ 1, 2013: ಬಿಸಿಸಿಐ ನೇಮಿಸಿದ್ದ ತನಿಖಾ ಸಮಿತಿಯನ್ನು ರದ್ದು ಮಾಡಿದ ಬಾಂಬೆ ಹೈಕೋರ್ಟ್, ಮೇಯಪ್ಪನ್ ಹಾಗೂ ಕುಂದ್ರಾ ಅವರಿಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿದ್ದ ಬಿಹಾರ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಆದಿತ್ಯಾ ವರ್ಮ.
ಆಗಸ್ಟ್ 5, 2013: ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಿಸಿಸಿಐ.
ಆಗಸ್ಟ್ 31, 2013: ಬಿಸಿಸಿಐಗೆ ನೋಟಿಸ್ ನೀಡಿದ ಸುಪ್ರೀಂಕೋರ್ಟ್, ಎನ್ ಶ್ರೀನಿವಾಸನ್, ರಾಜಸ್ಥಾನ್ ರಾಯಲ್ಸ್ ಗೂ ನೋಟಿಸ್ ಜಾರಿ, ಐಪಿಎಲ್ ಹಗರಣ ಕುರಿತಂತೆ ಹೊಸ ಸಮಿತಿ ರಚಿಸಲಿಲ್ಲ ಏಕೆ ಎಂದು ಪ್ರಶ್ನೆ.
ಸೆಪ್ಟೆಂಬರ್ 13, 2013: ಶ್ರೀಶಾಂತ್ ಹಾಗೂ ಚೌಹಾಣ್ ಅವರಿಗೆ ಆಜೀವ ನಿಷೇಧ ಹೇರಿದ ಬಿಸಿಸಿಐ, ಅಮಿತ್ ಸಿಂಗ್ ಗೆ 5 ವರ್ಷ ಕಾಲ ನಿಷೇಧ.
ಅಕ್ಟೋಬರ್ 8, 2013: ಪ್ರಕರಣದ ತನಿಖೆ ನಡೆಸಲು ಜಡ್ಜ್ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ ನೇಮಿಸಿದ ಸುಪ್ರೀಂಕೋರ್ಟ್.
ಫೆಬ್ರವರಿ 10, 2014: ಐಪಿಎಲ್ 2013ರ ಹಗರಣದಲ್ಲಿ ಮೇಯಪ್ಪನ್ ದೋಷಿ ಎಂದು ಮುದ್ಗಲ್ ಸಮಿತಿಯಿಂದ ವರದಿ. ಮೇಯಪ್ಪನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ನ ಅಧಿಕಾರಿ ಎಂದು ಘೋಷಿಸಿದ ಸಮಿತಿ. ಮಾರ್ಚ್ 28, 2014: ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಎನ್. ಶ್ರೀನಿವಾಸನ್ ಗೆ ಸೂಚಿಸಿದ ಸುಪ್ರೀಂಕೋರ್ಟ್. ಮಧ್ಯಂತರ ಅಧ್ಯಕ್ಷರಾಗಿ ಸುನಿಲ್ ಗವಾಸ್ಕರ್ ನೇಮಕ.
ಏಪ್ರಿಲ್ 16, 2014: ಮುದ್ಗಲ್ ಸಮಿತಿ ವರದಿಯಲ್ಲಿ ಶ್ರೀನಿವಾಸನ್ ಹೆಸರು ಪ್ರಸ್ತಾಪಿಸಿರುವುದರಿಂದ ಶ್ರೀನಿವಾಸನ್ ಮಾಡಿದ್ದ ಪುನರ್ ಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್.
ಏಪ್ರಿಲ್ 29, 2014: ಮೂವರು ಸದಸ್ಯರ ಸಮಿತಿ ರಚಿಸಿ ಸುಪ್ರೀಂಕೋರ್ಟಿಗೆ ನೀಡಿದ ಬಿಸಿಸಿಐ.
ಏಪ್ರಿಲ್ 29, 2014: ಮುದ್ಗಲ್ ಸಮಿತಿಯಿಂದಲೇ ಭ್ರಷ್ಟಾಚಾರ ಪ್ರಕರಣದ ತನಿಖೆ ಎಂದ ಸುಪ್ರೀಂಕೋರ್ಟ್.
ಮೇ 22,2014 : ಐಪಿಎಲ್ ಹೊರತುಪಡಿಸಿ ಬಿಸಿಸಿಐ ಅಧಿಕಾರ ವಾಪಸ್ ನೀಡುವಂತೆ ಶ್ರೀನಿವಾಸನ್ ರಿಂದ ಸುಪ್ರೀಂಗೆ ಕೋರಿಕೆ. ಅರ್ಜಿ ತಿರಸ್ಕಾರ.
ಜೂನ್ 12, 2014 : ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಶ್ರೀನಿವಾಸನ್ ಗೆ ಕೋರ್ಟಿನಿಂದ ಅನುಮತಿ.
ಜುಲೈ 18, 2014: ಬಿಸಿಸಿಐನ ಐಪಿಎಲ್ ಟೂರ್ನಿ ನಿರ್ವಹಣೆ, ಮಧ್ಯಂತರ ಅಧ್ಯಕ್ಷರಾಗಿ ಸುನಿಲ್ ಗವಾಸ್ಕರ್ ಮುಂದುವರಿಕೆ. ಶಿವಲಾಲ್ ಯಾದವ್ ರಿಂದ ಇತರೆ ವ್ಯವಹಾರ ನಿರ್ವಹಣೆ.
ನವೆಂಬರ್ 03,2014 : ಮುದ್ಗಲ್ ಸಮಿತಿ ತನ್ನ ಅಂತಿಮ ವರದಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿತು.
ನವೆಂಬರ್ 10,2014 : ಮುದ್ಗಲ್ ಸಮಿತಿ ನೀಡಿದ ವಿವಿಧ ವರ್ದಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ನವೆಂಬರ್ 14 ಕ್ಕೆ ಮುಂದೂಡಿತು.
ನವೆಂಬರ್ 11,2014 : ಎನ್ ಶ್ರೀನಿವಾಸನ್ ವಿರುದ್ಧ ಬಿಹಾರ ಕ್ರಿಕೆಟ್ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್.
ನವೆಂಬರ್ 21,2014 : ಬಿಸಿಸಿಐ ಅಧ್ಯಕ್ಷ ಸ್ಥಾನ ಬಯಸಿ ಮತ್ತೆ ಅರ್ಜಿ ಹಾಕಿದ ಶ್ರೀನಿವಾಸನ್.
ನವೆಂಬರ್ 27,2014 : ಮುದ್ಗಲ್ ಸಮಿತಿ ವರದಿ ಬಹಿರಂಗಗೊಳಿಸದ ಬಿಸಿಸಿಐ, ಸಿಎಸ್ ಕೆ ಅಳಿವು ಉಳಿವಿನ ಬಗ್ಗೆ ಕುತೂಹಲ ಮುಂದುವರಿಕೆ.
ಡಿಸೆಂಬರ್ 01,2014 : ಶ್ರೀನಿವಾಸನ್ ವಿರುದ್ಧ ಲಾಭದಾಯಕ ಹುದ್ದೆ ಹಾಗೂ ದುರುದ್ದೇಶದ ಆರೋಪದ ಪರಿಶೀಲನೆ.
ಡಿಸೆಂಬರ್ 09,2014 : ಕ್ರಿಕೆಟ್ ಕಳ್ಳಾಟ ಸರಿಪಡಿಸಲು ಉನ್ನತ ಮಟ್ಟದ ಸಮಿತಿ ರಚಿಸಿದ ಸುಪ್ರೀಂಕೋರ್ಟ್.
ಡಿಸೆಂಬರ್ 10, 2014 : ಐಪಿಎಲ್ ನಿಂದ ದೂರವುಳಿಯುತ್ತೇನೆ ಬಿಸಿಸಿಐ ಅಧ್ಯಕ್ಷ ಸ್ಥಾನ ಕೊಡಿಸಿ ಎಂದು ಮತ್ತೆ ಶ್ರೀನಿವಾಸನ್ ಅರ್ಜಿ.
ಡಿಸೆಂಬರ್ 17,2014 : ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಕುರಿತ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್.
ಜನವರಿ 22, 2015 : ಬಿಸಿಸಿಐನ ಯಾವುದೇ ಹುದ್ದೆಗೆ ಸ್ಪರ್ಧಿಸದಂತೆ ಶ್ರೀನಿವಾಸನ್ ಗೆ ಸುಪ್ರೀಂಕೋರ್ಟಿನಿಂದ ನಿರ್ಬಂಧ.
* ನ್ಯಾ. ಲೋಧಾ ನೇತೃತ್ವದ ತ್ರಿಸದಸ್ಯ ಸಮಿತಿ ನೇಮಿಸಿದ ಸುಪ್ರೀಂಕೋರ್ಟ್.
ಜುಲೈ 11, 2015 : ಜುಲೈ 14 ರಂದು ಐಪಿಎಲ್ ಹಗರಣದ ಅಂತಿಮ ತೀರ್ಪು ಪ್ರಕಟಿಸುವುದಾಗಿ ಸಮಿತಿಯಿಂದ ಘೋಷಣೆ.
ಜುಲೈ 14, 2015: ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಗೆ 2 ವರ್ಷ ಅಮಾನತು, ಸಿಎಸ್ ಕೆ ಬಾಸ್ ಗುರುನಾಥ್ ಮೇಯಪ್ಪನ್, ಆರ್ ಆರ್ ಬಾಸ್ ರಾಜ್ ಕುಂದ್ರಾಗೆ ಆಜೀವ ನಿಷೇಧ ಶಿಕ್ಷೆ ಪ್ರಕಟಿಸಿದ ಲೋಧಾ ಸಮಿತಿ. (ಐಎಎನ್ಎಸ್)