ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದ ಸ್ಟಾರ್ ಆಲ್ರೌಂಡರ್, ಸೂರ್ಯಕುಮಾರ್ ಆಡುವ ಸಾಧ್ಯತೆ

ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದಾರೆ. ರವೀಂದ್ರ ಜಡೇಜಾ ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಏಕದಿನ ಸರಣಿಯಿಂದ ಹೊರಗುಳಿದಿದ್ದ ಅವರು ಟೆಸ್ಟ್ ಸರಣಿಯಿಂದಲೂ ಹೊರಗುಳಿಯಲಿದ್ದಾರೆ.
ಜನವರಿಯಲ್ಲಿ ನಡೆಯಲಿರುವ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ರವೀಂದ್ರ ಜಡೇಜಾ ಆಡುವ ವಿಶ್ವಾಸವಿದೆ. ಬಾಂಗ್ಲಾದೇಶದ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಜಡೇಜಾ ಬದಲಿಗೆ ಸೂರ್ಯಕುಮಾರ್ ಯಾದವ್ ಮತ್ತು ಸೌರಭ್ ಕುಮಾರ್ ಸ್ಟಾಂಡ್ಬೈ ಆಟಗಾರರನ್ನಾಗಿ ಹೆಸರಿಸಲಾಗಿದೆ.
ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಗೆ ಆಯ್ಕೆದಾರರು ಜಡೇಜಾರನ್ನು ಆಯ್ಕೆ ಮಾಡಿದ್ದರು, ಟೆಸ್ಟ್ ತಂಡಕ್ಕೆ ಸೇರಲು ಜಡೇಜಾ ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಿತ್ತು, ಆದರೆ ಮೊಣಕಾಲು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಅವರು ಸರಣಿಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ.
ಸದ್ಯ ವೈದ್ಯರ ಸಲಹೆಯಂತೆ ರವೀಂದ್ರ ಜಡೇಜಾ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೊಣಕಾಲು ಗಾಯ ಪೂರ್ಣವಾಗಿ ಗುಣಮುಖವಾಗಲು ಸಮಯ ನೀಡಲು ನಿರ್ಧರಿಸಿದ್ದು, ಇನ್ನೂ ಪೂರ್ಣ ಪ್ರಮಾಣದ ತರಬೇತಿಯನ್ನು ಆರಂಭಿಸಿಲ್ಲ.
"ಟೆಸ್ಟ್ ಸರಣಿ ಆರಂಭದ ವೇಳೆಗೆ ಜಡೇಜಾ ಗುಣಮುಖರಾಗುವ ಸಾಧ್ಯತೆ ಇಲ್ಲ. ಆತ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ಬೇಕಿದೆ. ವೈದ್ಯಕೀಯ ತಂಡ ಕೂಡ ಇದೇ ಸಲಹೆ ನೀಡಿದೆ. ಅವರು ಈ ಹಿಂದೆ ಕೂಡ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಆದ್ದರಿಂದ ಅವರನ್ನು ಅವಸರದಲ್ಲಿ ಟೆಸ್ಟ್ ಪಂದ್ಯಕ್ಕೆ ಬರಲು ನಾವು ಬಯಸುವುದಿಲ್ಲ" ಎಂದು ಆಯ್ಕೆ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಜಡೇಜಾ ಭಾಗಿ
ಸದ್ಯ ವಿಶ್ರಾಂತಿಯಲ್ಲಿರುವ ರವೀಂದ್ರ ಜಡೇಜಾ ತಮ್ಮ ಬಿಡುವಿನ ಸಮಯದಲ್ಲಿ ಪತ್ನಿಗಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಜಡೇಜಾ ಪತ್ನಿ ರಿವಾಬಾ ಗುಜರಾತ್ನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಜಾಮ್ನಗರ (ಉತ್ತರ) ಕ್ಷೇತ್ರದಲ್ಲಿ ಅವರು ಸ್ಪರ್ಧೆ ಮಾಡಿದ್ದು, ರವೀಂದ್ರ ಜಡೇಜಾ ಪತ್ನಿಯ ಪರವಾಗಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ರವೀಂದ್ರ ಜಡೇಜಾ ಸಹೋದರಿ ಕೂಡ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಸೂರ್ಯಕುಮಾರ್ ಆಯ್ಕೆ ಸಾಧ್ಯತೆ?
ರವೀಂದ್ರ ಜಡೇಜಾ ಅನುಪಸ್ಥಿತಿ ಹಿನ್ನೆಲೆಯಲ್ಲಿ ಆಯ್ಕೆಗಾರರು ಸೂರ್ಯಕುಮಾರ್ ಯಾದವ್ ಮತ್ತು ಸೌರಭ್ ಕುಮಾರ್ ಅವರನ್ನು ಸ್ಟಾಂಡ್ಬೈ ಆಟಗಾರರಾಗಿ ಹೆಸರಿಸಿದ್ದಾರೆ. ಆದರೆ, ಇವರಿಬ್ಬರಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎನ್ನುವುದು ಶೀಘ್ರದಲ್ಲೇ ತಿಳಿಯಲಿದೆ.
ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಬಾಂಗ್ಲಾದೇಶದಲ್ಲಿ ಭಾರತ ಎ ತಂಡದೊಂದಿಗೆ ಇರಲಿದ್ದಾರೆ. ಸೂರ್ಯಕುಮಾರ್ ಯಾದವ್ ಪ್ರಸ್ತುತ ಏಕದಿನ ಸರಣಿಗಾಗಿ ನ್ಯೂಜಿಲೆಂಡ್ನಲ್ಲಿದ್ದಾರೆ. ನ್ಯೂಜಿಲೆಂಡ್ ಪ್ರವಾಸದ ನಂತರ ಅವರು ವಿಶ್ರಾಂತಿ ಪಡೆಯಲಿದ್ದಾರೆ.
"ಸೂರ್ಯ ಮತ್ತು ಸೌರಭ್ ಸ್ಟ್ಯಾಂಡ್ಬೈನಲ್ಲಿದ್ದಾರೆ. ಆದರೆ ಭಾರತ ಎ ಸರಣಿಯ ನಂತರ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಕ್ಷರ್ ಪಟೇಲ್ ತಂಡದೊಂದಿಗೆ ಇರುತ್ತಾರೆ ಮತ್ತು ಏಷ್ಯಾಖಂಡದಲ್ಲಿ ಅತ್ಯುತ್ತಮ ಟೆಸ್ಟ್ ದಾಖಲೆಯನ್ನು ಹೊಂದಿದ್ದಾರೆ. ಸೂರ್ಯಕುಮಾರ್ ಯಾದವ್ ಸೀಮಿತ ಓವರ್ ಕ್ರಿಕೆಟ್ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ, ಅವರನ್ನು ಟೆಸ್ಟ್ ಕ್ರಿಕಟ್ ಆಡಿಸುವ ಬಗ್ಗೆ ನಾವು ಚಿಂತಿಸಬೇಕಿದೆ" ಎಂದು ಆಯ್ಕೆ ಸಮಿತಿಯ ಸದಸ್ಯರು ಹೇಳಿದರು.
ಆದರೆ, ಜಡೇಜಾ ಅನುಪಸ್ಥಿತಿಯಲ್ಲಿ ಭಾರತಕ್ಕೆ ಹೆಚ್ಚಿನ ತೊಂದರೆ ಎದುರಾಗುವುದಿಲ್ಲ. ಅಕ್ಷರ್ ಪಟೇಲ್ ಬಾಂಗ್ಲಾದೇಶದಲ್ಲಿ ತಂಡದೊಂದಿಗೆ ಇರುತ್ತಾರೆ ಮತ್ತು ಅವರು ಎರಡೂ ಟೆಸ್ಟ್ಗಳಲ್ಲಿ ಅವಕಾಶ ಪಡೆಯುವುದು ಖಚಿತವಾಗಿದೆ.

ಬಾಂಗ್ಲಾದೇಶ ಟೆಸ್ಟ್ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ , ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications