ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಹರಿಣಗಳ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಭಾಗವಹಿಸಿ ಎರಡೂ ಸರಣಿಗಳಲ್ಲಿಯೂ ಕೂಡ ಹೀನಾಯವಾಗಿ ಸೋತು ಮುಖಭಂಗಕ್ಕೆ ಒಳಗಾಗಿರುವ ಟೀಮ್ ಇಂಡಿಯಾ ಇದೀಗ ತನ್ನ ಮುಂದಿನ ಸೆಣಸಾಟವನ್ನು ವೆಸ್ಟ್ ಇಂಡೀಸ್ ವಿರುದ್ಧ ನಡೆಸಲಿದೆ. ಹೌದು, ಕೆರಿಬಿಯನ್ನರು ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳು ನಡೆಯಲಿವೆ. ಮೊದಲಿಗೆ ಫೆಬ್ರವರಿ 6ರಿಂದ ಇತ್ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಆರಂಭವಾದರೆ, ಫೆಬ್ರವರಿ 16ರಿಂದ ಟಿ ಟ್ವೆಂಟಿ ಸರಣಿ ಆರಂಭವಾಗಲಿದೆ.
ಇನ್ನು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಮೊದಲಿಗೆ ಏಕದಿನ ಸರಣಿ ನಡೆಯಲಿದ್ದು, ಇತ್ತಂಡಗಳು ಕೂಡ ತಂಡಗಳನ್ನು ಪ್ರಕಟಿಸಿವೆ. ಈ ಮೂಲಕ ರೋಹಿತ್ ಶರ್ಮಾ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಅಧಿಕಾರ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದ್ದು, ಇದೇ ಫೆಬ್ರವರಿ 6ರ ಭಾನುವಾರದಂದು ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಹೀಗೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿ ಮೊದಲು ಘೋಷಿಸಿದಂತೆ ಭಾರತದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಬೇಕಿತ್ತು. ಆದರೆ ಕೊರೋನಾ ವೈರಸ್ ಹಾವಳಿಯಿಂದ ಇದೀಗ ಏಕದಿನ ಸರಣಿಯ ಎಲ್ಲಾ ಪಂದ್ಯಗಳನ್ನು ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಏಷ್ಯಾದ ಜನಪ್ರಿಯ ಕ್ರಿಕೆಟ್ ತಂಡ ಎಂದು ದಾಖಲೆ ಬರೆದ ಐಪಿಎಲ್ ತಂಡವಿದು, ವಿಶ್ವದಲ್ಲೂ ಇವರಿಗಿಲ್ಲ ಸಾಟಿ!
ಕೊರೋನಾವೈರಸ್ ಭೀತಿಯಿಂದ ಕೇವಲ ಒಂದೇ ಒಂದು ಕ್ರೀಡಾಂಗಣದಲ್ಲಿ ಸಂಪೂರ್ಣ ಏಕದಿನ ಸರಣಿಯನ್ನು ಆಯೋಜಿಸಲು ತೀರ್ಮಾನಿಸಿದ್ದ ಬಿಸಿಸಿಐಗೆ ಇದೀಗ ಕೊರೋನಾ ವೈರಸ್ ಶಾಕ್ ನೀಡಿದೆ ಎಂದು ಹೇಳಬಹುದು. ಹೌದು, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾದ 4 ಕ್ರಿಕೆಟಿಗರು ಸೇರಿದಂತೆ ಒಟ್ಟು 8 ಮಂದಿಗೆ ಕೊರೊನಾವೈರಸ್ ದೃಢಪಟ್ಟಿದೆ ಎಂದು ವರದಿಯಾಯಿತು. ಕೊರೊನಾವೈರಸ್ ದೃಢಪಟ್ಟ ಆಟಗಾರರ ಪೈಕಿ ಅನುಭವಿ ಆಟಗಾರ ಶಿಖರ್ ಧವನ್, ಯುವ ಕ್ರಿಕೆಟಿಗ ಋತುರಾಜ್ ಗಾಯಕ್ವಾಡ್, ನವದೀಪ್ ಸೈನಿ ಹಾಗೂ ಶ್ರೇಯಸ್ ಐಯ್ಯರ್ ಕೂಡ ಸೇರಿದ್ದಾರೆ ಎನ್ನಲಾಗಿತ್ತು. ಹೀಗೆ ಇಷ್ಟು ಆಟಗಾರರಿಗೆ ಕೊರೋನಾ ವೈರಸ್ ದೃಢಪಟ್ಟಿದೆ ಎಂಬುದನ್ನು ಕಳೆದ ಬುಧವಾರದಂದು ಸ್ಪಷ್ಟಪಡಿಸಲಾಗಿತ್ತು.
ಇದಾದ ಬೆನ್ನಲ್ಲೇ ಇದೀಗ ಭಾರತ ತಂಡದ ಮತ್ತೋರ್ವ ಪ್ರಮುಖ ಆಟಗಾರನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೌದು ಭಾರತದ ಪ್ರಮುಖ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸವನ್ನು ಗಾಯದ ಸಮಸ್ಯೆಯಿಂದ ತಪ್ಪಿಸಿಕೊಂಡಿದ್ದ ಅಕ್ಷರ್ ಪಟೇಲ್ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಸಹ ಆಯ್ಕೆಯಾಗಿಲ್ಲ. ಆದರೆ ನಂತರ ನಡೆಯಲಿರುವ ವಿಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಅಕ್ಷರ್ ಪಟೇಲ್ ಕಣಕ್ಕಿಳಿಯಲಿದ್ದು, ಟೀಮ್ ಇಂಡಿಯಾದ ಬಯೋ ಬಬಲ್ ಸೇರುವ ಮುನ್ನವೇ ಅಕ್ಷರ್ ಪಟೇಲ್ ಕೊರೋನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡದ ಆಟಗಾರರ ಪೈಕಿ ಅಕ್ಷರ್ ಪಟೇಲ್ ಕೊರೋನಾವೈರಸ್ ಸೋಂಕಿಗೆ ಒಳಗಾಗಿರುವ ಐದನೇ ಕ್ರಿಕೆಟಿಗನಾಗಿದ್ದಾರೆ.
ಶ್ರೀಲಂಕಾ ವಿರುದ್ಧ ಟೆಸ್ಟ್: ಕೊಹ್ಲಿ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಕೊಟ್ಟ ಗಂಗೂಲಿ!
ಹೀಗೆ ಆದರೆ ಪಂದ್ಯದ ಗತಿ ಏನು?
ಟೀಮ್ ಇಂಡಿಯಾದ ಕೆಲ ಆಟಗಾರರಲ್ಲಿ ಕೊರೋನಾವೈರಸ್ ಕಾಣಿಸಿಕೊಂಡ ನಂತರ ಮಾತನಾಡಿರುವ ಬಿಸಿಸಿಐ ಅಧಿಕಾರಿಯೋರ್ವರು ಈಗಲೂ ಕೂಡ ಸರಣಿ ನಿಗದಿಪಡಿಸಿದ ದಿನಾಂಕಗಳಂದು ನಡೆಯಲಿದೆ ಎಂದಿದ್ದಾರೆ. ಆದರೆ, ನಾಳೆ ಅಥವಾ ನಾಡಿದ್ದು ಟೀಮ್ ಇಂಡಿಯಾದ ಇತರೆ ಯಾವುದೇ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ ಸರಣಿ ಆರಂಭವಾಗುವುದರಲ್ಲಿ ಒಂದೆರಡು ದಿನಗಳ ವಿಳಂಬವಾಗಬಹುದು ಎಂದು ಮಾಹಿತಿ ನೀಡಿದ್ದಾರೆ.