ಚೆನ್ನೈ, ಸೆ. 22: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿ ಹಣಕಾಸು ಅವ್ಯವಹಾರದಲ್ಲಿ ಸಿಲುಕಿ ಅಮಾನತುಗೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ಪರ ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಬ್ಯಾಟಿಂಗ್ ಆರಂಭಿಸಿದ್ದಾರೆ.
ನ್ಯಾಯಮೂರ್ತಿ ಆರ್ಎಂ ಲೋಧಾ ಅವರಿದ್ದ ಸಮಿತಿ ಈ ಎರಡು ತಂಡಗಳಿಗೆ ಐಪಿಎಲ್ನಿಂದ 2 ವರ್ಷಗಳ ಕಾಲ ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಸ್ವಾಮಿ ಅವರು ಮದ್ರಾಸ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಒಳಗೊಂಡ ನ್ಯಾಯಪೀಠ, ಈ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ನಿಗದಿಪಡಿಸಿದೆ. ಸಿಎಸ್ಕೆ ತಂಡ ಅಮಾನತು ಪ್ರಶ್ನಿಸಿ ಈ ಮುನ್ನ ಸಲ್ಲಿಸಿದ್ದ ವಿಚಾರಣೆಯೂ ಇದೇ ವೇಳೆ ನಡೆಯಲಿದೆ.[ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]
ಈ ಎರಡು ತಂಡಗಳಿಗೆ ಅನ್ಯಾಯವಾಗಿದೆ: . ಬಾಂಬೆ ಹೈಕೋರ್ಟ್, ಸುಪ್ರೀಂ ಕೋರ್ಟ್, ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಸಮಿತಿ ಮತ್ತು ಆರ್ಎಂ ಲೋಧಾ ಸಮಿತಿಯ ಮುಂದೆ ನಡೆದ ಎಲ್ಲ ವಿಚಾರಣೆಗಳು ವ್ಯರ್ಥವಾಗಿದೆ. ಬಿಹಾರ ಕ್ರಿಕೆಟ್ ಸಂಸ್ಥೆ ಪಟ್ಟಭದ್ರ ಹಿತಾಸಕ್ತಿಯಿಂದ ಈ ವ್ಯಾಜ್ಯ ಹೂಡಿತ್ತು. ಐಪಿಎಲ್ನ 2 ಸ್ಟಾರ್ ತಂಡಗಳ ಅಮಾನತು ಶಿಕ್ಷೆಯನ್ನು ಕೂಡಲೇ ರದ್ದುಗೊಳಿಸಬೇಕೆಂದು ಸ್ವಾಮಿ ಅರ್ಜಿಯಲ್ಲಿ ತಿಳಿಸಿದ್ದಾರೆ. [ಅಮಾನತುಗೊಂಡರೂ ಚೆನ್ನೈ, ರಾಜಸ್ಥಾನ ಐಪಿಎಲ್ ನಲ್ಲಿ ಆಡ್ಬಹುದು!]
ಮುದ್ಗಲ್ ಸಮಿತಿಗೆ ಪ್ರಕರಣದ ತನಿಖೆ ವೇಳೆ ಲಲಿತ್ ಮೋದಿ ಆಪ್ತರಿಂದ ಕೆಲ ತಪ್ಪಾದ ಮಾಹಿತಿಗಳನ್ನು ಪೂರೈಸಲಾಗಿದೆ. ಇವೆರಡು ಸ್ಟಾರ್ ತಂಡಗಳನ್ನು ಐಪಿಎಲ್ನಿಂದ ಹೊರಗಿಡುವುದೇ ಇದರ ಹಿಂದಿನ ಉದ್ದೇಶವಾಗಿತ್ತು. ಲಲಿತ್ ಮೋದಿ ಅವರ ನೆರವಿನಿಂದ ಈ ಎರಡು ತಂಡಗಳು ಈಗ ಹೊರಗುಳಿಯಬೇಕಾಗಿದೆ ಎಂದು ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.[ರಾಜೀವ್ ಶುಕ್ಲಾ ಕೈಯಲ್ಲಿ ಚೆನ್ನೈ, ರಾಜಸ್ಥಾನ ಭವಿಷ್ಯ]
ಐಪಿಎಲ್ ನಲ್ಲಿ ಸತತವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಟಾರ್ಗೆಟ್ ಮಾಡಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ. ಅಮಾನತಿನಿಂದ ಅನೇಕ ಯುವ ಪ್ರತಿಭೆಗಳಿಗೆ ಸೂಕ್ತ ಅವಕಾಶ ಇಲ್ಲದ್ದಂತಾಗುತ್ತದೆ. ಸಿಎಸ್ ಕೆ ತಂಡಕ್ಕಿರುವ ಜನಪ್ರಿಯತೆ ಹಾಗೂ ಗೌರವವನ್ನು ಉಳಿಸುವ ಉದ್ದೇಶದಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಲಾಗಿದೆ ಎಂದು ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ. (ಐಎಎನ್ ಎಸ್)