ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ 2022 ಮರೆಯಲಾಗದ ವರ್ಷವಾಗಿದೆ. ಪಾಂಡ್ಯ ಕ್ರಿಕೆಟ್ ಜೀವನವೇ ಮುಗಿಯಿತು ಎಂದವರಿಗೆ ಅವರು ಕೊಟ್ಟ ಉತ್ತರ ಮಾತ್ರ ಅದ್ಭುತವಾಗಿತ್ತು. 2022 ರ ವರ್ಷದಲ್ಲಿ ಅವರು ಹಲವು ಸಾಧನೆಯ ಮೆಟ್ಟಿಲುಗಳನ್ನು ಏರಿದರು.
ಬೆನ್ನುನೋವಿನ ನಂತರ ಮೈದಾನಕ್ಕೆ ಮರಳಿದ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಒತ್ತಡಕ್ಕೆ ಸಿಲುಕಿದರು. ಆದರೆ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಮುನ್ನೆಲೆಗೆ ಬಂದರು.
2021 ರಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ, ಹಾರ್ದಿಕ್ ಪಾಂಡ್ಯ ಗಾಯಗೊಂಡರು ಮತ್ತು ತಂಡದಿಂದ ಹೊರಗುಳಿದರು. ಹಾರ್ದಿಕ್ ಪಾಂಡ್ಯಗೆ ಪರ್ಯಾಯವಾಗಿ, ತಂಡದ ಆಡಳಿತ ಮಂಡಳಿ ಶಿವಂ ದುಬೆ ಮತ್ತು ವೆಂಕಟೇಶ್ ಅಯ್ಯರ್ ಅವರಂತಹ ಆಟಗಾರರಿಗೆ ಅವಕಾಶ ನೀಡಲು ಆರಂಭಿಸಿತು.
IND W vs AUS W: 54 ರನ್ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ, 4-1 ರಲ್ಲಿ ಸರಣಿ ವಶಕ್ಕೆ
ಹಾರ್ದಿಕ್ ಪಾಂಡ್ಯ ವೃತ್ತಿಜೀವನವು ಕೊನೆಗೊಳ್ಳಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಪಾಂಡ್ಯ ಎಲ್ಲರ ನಿರೀಕ್ಷೆಗಳನ್ನು ಸುಳ್ಳು ಮಾಡಿದರು. ತಂಡಕ್ಕೆ ವಾಪಸಾದ ನಂತರ ಅವರು ಆಡಿದ ಇನ್ನಿಂಗ್ಸ್ಗಳು ಅವರನ್ನು ತಂಡದ ಪ್ರಮುಖ ಆಲ್ರೌಂಡರ್ ಎನ್ನುವಲ್ಲಿಂದ ತಂಡದ ನಾಯಕನಾಗುವವರೆಗೆ ಮುಂದುವರೆದಿದೆ.
ಗುಜರಾತ್ ತಂಡಕ್ಕೆ ನಾಯಕ
ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ ಅವರ ಫಾರ್ಮ್ ಮತ್ತು ಫಿಟ್ನೆಸ್ ನೋಡಿ ಬಿಡುಗಡೆ ಮಾಡಿತ್ತು. ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಂದ ನಂತರ ಮೊದಲ ಬಾರಿಗೆ ಐಪಿಎಲ್ನಲ್ಲಿ ಭಾಗವಹಿಸಿದ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಿಕೊಂಡರು. ಫಾರ್ಮ್ನಲ್ಲಿ ಇಲ್ಲದ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಮಾತ್ರವಲ್ಲದೆ ನಾಯಕನ ಸ್ಥಾನ ನೀಡಿದ್ದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು, ಆದರೆ ಪಾಂಡ್ಯ ಮಾತ್ರ ಯಾರೂ ಊಹಿಸದ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದರು.
15 ಕೋಟಿ ರುಪಾಯಿ ನೀಡಿ ಗುಜರಾತ್ ಟೈಟನ್ಸ್ ತಂಡ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಹಾರ್ದಿಕ್ ಕೂಡ ತಂಡವನ್ನು ನಿರಾಸೆಗೊಳಿಸದೆ ದಿಟ್ಟ ಪ್ರದರ್ಶನ ನೀಡುವ ಮೂಲಕ ತಂಡವನ್ನು ಚಾಂಪಿಯನ್ ಮಾಡಿದರು. ಈ ಗೆಲುವಿನ ನಂತರ ಪಾಂಡ್ಯ ನಾಯಕತ್ವದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ಪಾಂಡ್ಯ ಅವರನ್ನು ಭಾರತ ತಂಡದ ನೂತನ ನಾಯಕನನ್ನಾಗಿ ಮಾಡುವಂತೆ ತಂಡದ ಬೆಂಬಲಿಗರು ಕೂಡ ಒತ್ತಾಯ ಮಾಡುತ್ತಿದ್ದಾರೆ. ಡಿಸೆಂಬರ್ 21ರಂದು ನಡೆಯುವ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ಟಿ20 ತಂಡದ ನಾಯಕರಾಗಿ ಘೋಷಿಸುವ ಸಾಧ್ಯತೆ ಇದೆ.
ಬ್ಯಾಟಿಂಗ್ನಲ್ಲಿ ಕೂಡ ಮಿಂಚಿದ ಪಾಂಡ್ಯ
ಐಪಿಎಲ್ನಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ ನಂತರ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ವಾಪಸಾದರು. ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 34 ರನ್ ಸಿಡಿಸಿ ಭಾರತ ತಂಡದ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದ್ದರು. ನಂತರ ಟಿ20 ವಿಶ್ವಕಪ್ನಲ್ಲಿ ಕೂಡ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 37 ಎಸೆತಗಳಲ್ಲಿ 40 ರನ್ ಗಳಿಸಿ ಮಿಂಚಿದ್ದರು.
ಟಿ20 ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ಪಂದ್ಯಗಳು ಮಳೆಯಿಂದ ರದ್ದಾದರೆ, ಒಂದು ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿತ್ತು.