ಬೆಂಗಳೂರು, ಆಗಸ್ಟ್ 20: ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್ಸಿಎ) ಆಯೋಜನೆಯ ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) 2015ರ ಟ್ರೋಫಿಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಸಂಗೀತಗಾರ ರಿಕ್ಕಿ ಕೇಜ್ ಅವರು ಬುಧವಾರ ಸಂಜೆ ಅನಾವರಣಗೊಳಿಸಿದರು.
ಕಾರ್ಬನ್ ಸ್ಮಾರ್ಟ್ ಕರ್ನಾಟಕ ಪ್ರೀಮಿಯರ್ ಲೀಗ್ನ ನಾಲ್ಕನೆ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಗಳು ಸೆಪ್ಟಂಬರ್ನಲ್ಲಿ ನಡೆಯಲಿದೆ. ಮೈಸೂರು ರಾಜವಂಶಸ್ಥ ಹಾಗೂ ಕೆಎಸ್ಸಿಎ ಮಾಜಿ ಅಧ್ಯಕ್ಷ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ಗೆ ಅರ್ಪಿಸಲಾಗುತ್ತಿದೆ .
ಕೆಪಿಎಲ್ ಟೂರ್ನಿಯ ಟ್ರೋಫಿಯನ್ನು ಅನಾವರಣಗೊಳಿಸಿದ್ದು ಖುಷಿಕೊಟ್ಟಿದೆ. 2009ರಿಂದ ಕೆಪಿಎಲ್ ಜೊತೆ ನನ್ನ ಒಡನಾಟವಿದೆ. ಉದ್ಘಾಟನಾ ವರ್ಷದಲ್ಲಿ ಕೆಪಿಎಲ್ ಆಶಯ ಗೀತೆಗೆ ಟ್ಯೂನ್ ಸಂಯೋಜಿಸಿದ್ದೆ ಎಂದು ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕ್ಕಿ ಹೇಳಿದರು. [ಕೆಪಿಎಲ್ 2015 ವೇಳಾಪಟ್ಟಿ: ಸೆ. 2 ರಿಂದ 19 ರ ತನಕ]
ಕೆಪಿಎಲ್ ನಾಲ್ಕನೆ ಆವೃತ್ತಿಯ ಪಂದ್ಯಾವಳಿ ಆರಂಭಕ್ಕೆ ಕೇವಲ ಎರಡು ವಾರಗಳು ಮಾತ್ರ ಬಾಕಿಯಿವೆ. ಈ ಟ್ರೋಫಿಯನ್ನು ಜಯಿಸಲು ಎಂಟು ತಂಡಗಳು ಕಣದಲ್ಲಿ ಹೋರಾಟ ನಡೆಸಲಿವೆ.
ಪ್ರಸಕ್ತ ಸಾಲಿನಲ್ಲಿ ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಪಂದ್ಯಗಳನ್ನು ನಡೆಸಲಾಗುವುದು. ಈ ಪಂದ್ಯಾವಳಿಗೂ ರಾಜ್ಯದ ಜನತೆ ಕಳೆದ ಮೂರು ಆವೃತ್ತಿಗಳಲ್ಲಿ ತೋರಿದಂತಹ ಬೆಂಬಲವನ್ನು ಸೂಚಿಸಲಿದ್ದಾರೆ ಎಂದು ಕೆಎಸ್ಸಿಎ ಅಧ್ಯಕ್ಷ ಪಿ.ಆರ್.ಅಶೋಕ್ ಆನಂದ್ ತಿಳಿಸಿದರು.
ಕಾರ್ಬನ್ ಮೊಬೈಲ್ಸ್ ಮುಖ್ಯಸ್ಥ ಸುಧೀರ್ ಹಸೀಜಾ ಮಾತನಾಡಿ, ಕೆಪಿಎಲ್ ಪಂದ್ಯಾವಳಿಯ ಪ್ರಾಯೋಜಕತ್ವವನ್ನು ಎರಡನೆ ಬಾರಿ ಪಡೆಯುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ. ರಾಜ್ಯದ ಯುವ ಕ್ರಿಕೆಟಿಗರಿಗೆ ತಮ್ಮ ಸಾಮರ್ಥ್ಯವನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಕೆಪಿಎಲ್ ಉತ್ತಮ ವೇದಿಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಫಿಝಾ ಗ್ರೂಪ್ನ ಎಂ.ಡಿ ಬಿ.ಎಂ. ಫಾರೂಕ್, ಗ್ರಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್, ಕೆಎಸ್ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.