ವಿವಾದದ ಕಿಡಿ
ಐಸಿಸಿ ಮಹಿಳಾ ವಿಶ್ವ ಟಿ20 ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ನಲ್ಲಿ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರಿಗೆ ಆಡಲು ಅವಕಾಶ ನೀಡಿರಲಿಲ್ಲ. ಈ ಪಂದ್ಯದಲ್ಲಿ ಭಾರತ ಹೀನಾಯ ಸೋಲನುಭವಿಸಿತ್ತು. ಇದು ವಿವಾದದ ಹುಟ್ಟಿಗೆ ಕಾರಣವಾಗಿತ್ತು. ಈಗ ಕೌರ್ ಮತ್ತು ಮಂಧಾನ ರಮೇಶ್ ಪೊವಾರ್ ಬೆಂಬಲಕ್ಕೆ ನಿಂತಿರುವುದು ಮತ್ತೆ ವಿವಾದವನ್ನು ಕೆದಕಿದೆ.
ರಮೇಶ್ ನಮಗೆ ಸ್ಫೂರ್ತಿ
ಬಿಸಿಸಿಐಗೆ ಇ-ಮೇಲ್ ಕಳಿಸಿರುವ ನಾಯಕಿ ಕೌರ್ ಮತ್ತು ಉಪನಾಯಕಿ ಮಂಧಾನ, 'ರಮೇಶ್ ನಮ್ಮ ಆಟವನ್ನು ಸುಧಾರಿಸಿರುವುದು ಮಾತ್ರವಲ್ಲ ನಮಗವರು ಸ್ಫೂರ್ತಿಯಾಗಿದ್ದಾರೆ. ಅವರನ್ನು ಕೋಚ್ ಜವಾಬ್ದಾರಿಯಿಂದ ಕೆಳಗಿಳಿಸುವ ನಿರ್ಧಾರವನ್ನು ಕೈ ಬಿಡಬೇಕು' ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಬಿಸಿಸಿಐಗೆ ಪೊವಾರ್ ಜವಾಬ್ದಾರಿಯನ್ನು ಒಂದು ವರ್ಷಗಳ ಕಾಲ ವಿಸ್ತರಿಸುವ ಅವಕಾಶವಿದೆ. ಇದನ್ನು ಅರಿತಿರುವ ಇಬ್ಬರೂ ಆಟಗಾರ್ತಿಯರು ಬಿಸಿಸಿಐಯನ್ನು ಕೋರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪೊವಾರ್ ಬೇಕೇಬೇಕು
'ಪೊವಾರ್ ಅವರು ಇಡೀ ಭಾರತ ವನಿತಾ ಕ್ರಿಕೆಟ್ ತಂಡದ ಚಿತ್ರಣವನ್ನೇ ಬದಲಿಸಿದ್ದಾರೆ. ಅದು ತಾಂತ್ರಿಕವಾಗಿ ಮತ್ತು ತಾರ್ಕಿಕವಾಗಿಯೂ ಹೌದು. ಗೆಲ್ಲುವ ಮನಸ್ಥಿತಿಯನ್ನು ನಮ್ಮೊಳಗೆ ತುಂಬಿದವರು ಅವರೇ. ಅವರು ಕೋಚ್ ಆಗಿ ಮುಂದುವರೆಯಬೇಕು' ಎಂದು ಬಿಸಿಸಿಐಗೆ ಕಳಿಸಿರುವ ಇ ಮೇಲ್ನಲ್ಲಿ ಕೌರ್-ಮಂಧಾನ ಬರೆದಿದ್ದಾರೆ ಎನ್ನಲಾಗಿದೆ.
ಮಿಥಾಲಿಯನ್ನೇಕೇ ಆಡಿಸಿಲ್ಲ?
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಮಿಥಾಲಿಯನ್ನು ಆಡಿಸದಿರುವುದಕ್ಕೆ ಕಾರಣ ನೀಡಿದ್ದ ಪೊವಾರ್, ಮಿಥಾಲಿ ಸ್ವ ಹಿತಾಸಕ್ತಿಗಾಗಿ ಆಡುತ್ತಾರೆ. ನಮ್ಮ ಮೇಲೆ ಒತ್ತಡ ಹೇರುತ್ತಾರೆ, ನಮಗೆ ಬೆದರಿಕೆ ಒಡ್ಡುತ್ತಾರೆ ಎಂದು ದೂರಿದ್ದರು. ಆದರೆ ಇದಕ್ಕೆ ತಿರುಗೇಟು ನೀಡಿದ್ದ ಮಿಥಾಲಿ, ನಾನು ಅಭ್ಯಾಸ ಮಾಡುವಾಗ ಕೋಚ್ ನನ್ನ ಜೊತೆ ಬೇಕೆಂದೇ ಮಾತನಾಡದೆ ನನ್ನನ್ನು ಅವಮಾನಿಸಿದ್ದರು' ಎಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಬಿಸಿಸಿಐ, ಕೋಚ್ ಹುದ್ದೆಗೆ ಆಸಕ್ತರು ಅರ್ಜಿ ಸಲ್ಲಿಸಲು ಕರೆ ನೀಡಿತ್ತು. ಆದರೆ ಈಗ ಕೌರ್-ಮಂಧಾನ ಬಿಸಿಸಿಐಗೆ ಕಳುಹಿಸಿರುವ ಮೇಲ್ ಪರಿಣಾಮವೇನಾದೀತೋ ಗೊತ್ತಿಲ್ಲ.