ಜವಾಬ್ದಾರಿ ಹೊರುವುದನ್ನು ನಾನು ಆನಂದಿಸುತ್ತೇನೆ : ಖಲೀಲ್ ಅಹ್ಮದ್

ಲಖನೌ, ನವೆಂಬರ್ 07 : "ನಾನು ಚಿಕ್ಕವನಿದ್ದಾಗ ಭಾರತದ ಪರ ಕ್ರಿಕೆಟ್ ಆಡಬೇಕೆಂಬ ಕನಸು ಕಂಡಿದ್ದೆ. ಆ ಕನಸೀಗ ನನಸಾಗಿದೆ. ನೀವು ಆಟವನ್ನು ಆನಂದಿಸುತ್ತಿದ್ದರೆ, ಇನ್ನೂ ಚೆನ್ನಾಗಿ ಆಡಬೇಕೆಂಬ ಆಕಾಂಕ್ಷೆ ಹುಟ್ಟುತ್ತದೆ. ಜವಾಬ್ದಾರಿ ಹೊರುವುದೆಂದರೆ ನನಗೆ ತುಂಬಾ ಸಂತೋಷ."
ಲಖನೌನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾಗಿಂತಲೂ ಮೊದಲೇ ಬೌಲಿಂಗ್ ಮಾಡಲು ಅವಕಾಶ ಪಡೆದ, ಪುಟಿಯುವ ಉತ್ಸಾಹದ ನೂತನ ಆಟಗಾರ, ಎಡಗೈ ವೇಗಿ ಖಲೀಲ್ ಅಹ್ಮದ್ ಅವರ ಮಾತುಗಳಿವು. ನಾಯಕ ತಮ್ಮ ಮೇಲಿಟ್ಟ ವಿಶ್ವಾಸಕ್ಕೆ ತಕ್ಕಂತೆ ಆಡುವುದು ಅವರ ಗುರಿ.
ಇಬ್ಬರು ಆರಂಭಿಕ ಬ್ಯಾಟ್ಸ್ ಮನ್ ಗಳಾದ ಶೈ ಹೋಪ್ ಮತ್ತು ಶಿಮ್ರಾನ್ ಹೆತ್ಮೇಯರ್ ವಿಕೆಟ್ ಕಬಳಿಸುವುದರ ಜೊತೆ, 196 ರನ್ ಗುರಿ ಬೆನ್ನತ್ತಿದ್ದ ವಿಂಡೀಸ್ ಬ್ಯಾಟಿಂಗ್ ಬೆನ್ನೆಲುಬನ್ನೇ ಖಲೀಲ್ ಅಹ್ಮದ್ ಅವರು ಮುರಿದರಲ್ಲದೆ, ತಮ್ಮ ಮೇಲೆ ವಿಶ್ವಾಸ ಇಡಬಹುದು ಎಂಬುದನ್ನು ತೋರಿಸಿಕೊಟ್ಟರು.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ತುಂಬಾ ಒತ್ತಡದಲ್ಲಿದ್ದರೆ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುವುದು ಕಷ್ಟವಾಗುತ್ತದೆ. ನನ್ನ ಗುರಿ ಒಂದೇ ಭಾರತದ ಪರ ಸಾಧ್ಯವಾದಷ್ಟು ಆಡುವುದು ಮತ್ತು ಆಟವನ್ನು ಎಂಜಾಯ್ ಮಾಡುವುದು ಎಂದರು.

ರೋಹಿತ್ ಶರ್ಮಾ ಅಜೇಯ ಶತಕದ ಆಸರೆ
ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ನಿರಾಯಾಸದ ಶತಕ(61 ಚೆಂಡುಗಳಲ್ಲಿ 111 ನಾಟೌಟ್)ದ ಮೂಲಕ 195 ರನ್ ಪೇರಿಸಿದ ಭಾರತ, 196ರ ಬೃಹತ್ ಗುರಿಯನ್ನು ವೆಸ್ಟ್ ಇಂಡೀಸ್ ಗೆ ನೀಡಿತ್ತು. ಅದನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 124 ರನ್ ಮಾಡಲು ಮಾತ್ರ ಶಕ್ತ್ಯವಾಯಿತು. ರೋಹಿತ್ ಶರ್ಮಾ ಅವರಿಗೆ ಶಿಖರ್ ಧವನ್ (43) ಮತ್ತು ಕೆಎಲ್ ರಾಹುಲ್ (ಅಜೇಯ 26) ಉತ್ತಮ ನೆರವು ನೀಡಿದರು. ಕಡೆಗೆ, 71 ರನ್ ಗಳಿಂದ ಭಾರತ ವಿಜಯಿಯಾಯಿತು ಮತ್ತು ಸರಣಿಯನ್ನೂ ಗೆದ್ದುಕೊಂಡಿತು.
ಟಿ20 ಶತಕಗಳಲ್ಲಿ ದಾಖಲೆ ನಿರ್ಮಿಸಿದ 'ಹಿಟ್ ಮ್ಯಾನ್' ರೋಹಿತ್ ಶರ್ಮಾ

ಬ್ಯಾಟಿಂಗ್ ಗೆ ಅನುಕೂಲವಾಗಿದ್ದ ಪಿಚ್
"ಪಿಚ್ ಬೌಲರ್ ಗಳಿಗೆ ಅಷ್ಟು ಸಹಾಯಕವಾಗಿರಲಿಲ್ಲ. ಬ್ಯಾಟಿಂಗ್ ಮಾಡಲು ಪಿಚ್ ಅನುಕೂಲಕರವಾಗಿತ್ತು. ಉತ್ತಮ ಲೈನ್ ಮತ್ತು ಲೆಂಗ್ತ್ ಕಾಪಾಡಿಕೊಳ್ಳುವುದು ಮತ್ತು ಹೆಚ್ಚು ರನ್ ನೀಡದಂತೆ ಅವರನ್ನು ಕಟ್ಟಿಹಾಕುವುದು ನಮ್ಮ ಪ್ಲಾನ್ ಆಗಿತ್ತು. ನಾನು ಆರಂಭದಲ್ಲಿಯೇ ಹೋಪ್ ಮತ್ತು ಹೆತ್ಮೇಯರ್ ವಿಕೆಟ್ ಪಡೆದ ನಂತರ ಪಂದ್ಯ ನಮ್ಮ ನಿಯಂತ್ರಣದಲ್ಲಿದೆ ಎಂಬುದು ಮನವರಿಕೆಯಾಯಿತು" ಎಂದು ಖಲೀಲ್ ಅನಿಸಿಕೆ ಹಂಚಿಕೊಂಡರು. ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬುಮ್ರಾ, ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.

ಮಾಡಿರುವ ತಪ್ಪುಗಳಿಂದ ಕಲಿಯಬೇಕು
ವೆಸ್ಟ್ ಇಂಡಿಸ್ ಕೋಚ್ ಆಗಿರುವ ಸ್ಟಾರ್ಟ್ ಲಾ ಅವರು, ನಾವು ಮಾಡಿರುವ ತಪ್ಪುಗಳಿಂದ ಕಲಿಯಬೇಕು ಮತ್ತು ಆಟ ಉತ್ತಮಪಡಿಸಿಕೊಳ್ಳಬೇಕು. ನಮ್ಮ ಬಳಿ ಅತ್ಯುತ್ತಮ ಟಿ20 ಆಟಗಾರರಿದ್ದಾರೆ. ನಮ್ಮ ದೇಶದ ಹೆಮ್ಮೆಗಾಗಿ ಅವರು ಆಡಬೇಕು ಮತ್ತು ಪ್ರತಿ ಆಟದಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ನಾವು ವಿಶ್ವದಲ್ಲಿ ಯಾವುದೇ ತಂಡವನ್ನೂ ಸೋಲಿಸಬಲ್ಲೆವು. ಆದರೆ, ಆ ಹಂತಕ್ಕೆ ಹೋಗಬೇಕಾದರೆ ಸಾಕಷ್ಟು ಇಂಪ್ರೂವ್ ಆಗಬೇಕು ಎಂದು ತಮ್ಮ ತಂಡದ ವಿಮರ್ಶೆ ಮಾಡಿಕೊಂಡರು.
ಟಿ20: ಗೆದ್ದೆವೆಂದು ಬೀಗುವಂತಿಲ್ಲ, ವಿಂಡೀಸ್ ತಿರುಗಿ ಬಿದ್ದರೂ ಅಚ್ಚರಿಯಿಲ್ಲ!

ಕೋಚ್ ಹೇಳಿದ ಮಾತುಗಳಿಗೆ ಕಿವಿಯಾಗಬೇಕು
ಆಸ್ಟ್ರೇಲಿಯಾದ ಮಾಜಿ ಆಟಗಾರರಾಗಿರುವ ಸ್ಟಾರ್ಟ್ ಲಾ ಅವರು ವೆಸ್ಟ್ ಇಂಡೀಸ್ ತಂಡದ ಕೋಚ್ ಆಗಿ ಮುಂದುವರಿಯುತ್ತಿಲ್ಲ. ಆದರೆ, ಕೆರಿಬಿಯನ್ನರು ತಂಡವನ್ನು ಮರುಕಟ್ಟಬೇಕು, ಪ್ರತಿ ಪಂದ್ಯದಲ್ಲೂ ಆಟವನ್ನು ಉತ್ತಮಪಡಿಸಿಕೊಳ್ಳಬೇಕು. ಹೆಚ್ಚು ಶ್ರಮಪಟ್ಟು ಉತ್ತಮ ಕ್ರಿಕೆಟ್ ಆಡುವುದು ಬಿಡುವುದು ಅವರ ಕೈಯಲ್ಲಿದೆ. ಅದಕ್ಕಾಗಿ ಕೋಚ್ ಮತ್ತು ಹಿರಿಯ ಆಟಗಾರರ ಮಾತಿಗೆ ಕಿವಿಯಾಗಬೇಕು. ಅವರನ್ನು ಅದನ್ನು ಮಾಡಿದರೆ ಇಡೀ ವಿಶ್ವವೇ ಅವರ ಕಾಲಬಳಿಯಲ್ಲಿ ಇರುತ್ತದೆ ಎಂದು ಸ್ಟಾರ್ಟ್ ಲಾ ವೆಸ್ಟ್ ಇಂಡೀಸ್ ತಂಡದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications