ಭಾರತದ ಹೊಸ ಚಿಯರ್ ಲೀಡರ್
ಕ್ಯಾಮೆರಾಮನ್ ಅಭಿಮಾನಿಗಳ ಗ್ಯಾಲರಿಯತ್ತ ಕ್ಯಾಮೆರಾ ತಿರುಗಿಸಿದ್ದಾಗ ಈ ಅಜ್ಜಿಯ ಕ್ರಿಕೆಟ್ ಪ್ರೀತಿ ಮತ್ತು ಜೀವನೋಲ್ಲಾಸ ವೀಕ್ಷಕ ವಿವರಣೆ ಮಾಡುತ್ತಿದ್ದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಗಮನಕ್ಕೆ ಬಂದಿತ್ತು. ಆಗಲೇ ಅವರು ಭಾರತದ 'ಚಿಯರ್ ಲೀಡರ್'ಅನ್ನು ಗುರುತಿಸಿ ಅವರ ಉತ್ಸಾಹವನ್ನು ಹೊಗಳಿದ್ದರು. ಇದರಿಂದ ಕ್ಯಾಮೆರಾಮನ್ ಪದೇ ಪದೇ ಅವರತ್ತ ಫೋಕಸ್ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಅಭಿಮಾನಿ ದೀಪಿಕಾ ಘೋಶ್ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದು ಸುದ್ದಿಯಾಗಿದ್ದರು. ಪರದೆ ಮೇಲೆ ಕಾಣಿಸಿಕೊಂಡ ಕೆಲ ಹೊತ್ತಿನಲ್ಲಿಯೇ ಅವರ ಇನ್ಸ್ಟಾಗ್ರಾಂ ಖಾತೆಯನ್ನು ಪತ್ತೆ ಹಚ್ಚಿ ಸಾವಿರಾರು ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಈಗ ಈ ಅಜ್ಜಿ ಕೂಡ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಅಜ್ಜಿ ಆಶೀರ್ವಾದ ಪಡೆ ಕೊಹ್ಲಿ, ರೋಹಿತ್
ಪಂದ್ಯ ಮುಗಿದ ಬಳಿಕ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕರ ರೋಹಿತ್ ಶರ್ಮಾ ನೇರವಾಗಿ ಈ 87ರ ಹರೆಯದ ಅಜ್ಜಿಯ ಆಶೀರ್ವಾದ ಪಡೆದರು. ವಿರಾಟ್ ಕೊಹ್ಲಿ, ಅಜ್ಜಿಯಿದ್ದ ಕುರ್ಚಿಯ ಬಳಿ ತೆರಳಿ ಅವರ ಮುಂದೆ ಮಂಡಿಯೂರಿ ಕುಳಿತು ಸ್ವಲ್ಪ ಹೊತ್ತು ಹರಟಿದರು. ಕೊಹ್ಲಿಯೊಂದಿಗೆ ಖುಷಿಯಿಂದ ಮಾತನಾಡಿದ ಚಾರುಲತಾ ಪಟೇಲ್, ಕೊಹ್ಲಿ ಹೊರಡುವ ಸಮಯದಲ್ಲಿ ಅವರನ್ನು ಬರಸೆಳೆದು ಪ್ರೀತಿಯಿಂದ ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟರು. ರೋಹಿತ್ ಶರ್ಮಾ ಅವರ ಕೆನ್ನೆಗೂ ಮುತ್ತಿಟ್ಟ ಅಜ್ಜಿ ತಮ್ಮ ಕ್ರಿಕೆಟ್ ಪ್ರೀತಿ ಮೆರೆದರು.
ವಿಶ್ವಕಪ್: ವಿಶೇಷ ವ್ಯಕ್ತಿತ್ವದಿಂದ ಅಭಿಮಾನಿಗಳ ಮನಗೆದ್ದ ರೋಹಿತ್ ಶರ್ಮಾ
ವಯಸ್ಸು ಸಂಖ್ಯೆಯಷ್ಟೇ ಎಂದ ಕೊಹ್ಲಿ
ಈ ಅನುಭವವನ್ನು ವಿರಾಟ್ ಕೊಹ್ಲಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಎಲ್ಲ ಅಭಿಮಾನಿಗಳಿಗೂ, ಮುಖ್ಯವಾಗಿ ಚಾರುಲತಾ ಪಟೇಲ್ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರಿಗೆ 87 ವರ್ಷ. ಆದರೆ, ನಾನು ನೋಡಿದ ಅತ್ಯಂತ ಭಾವೋದ್ರಿಕ್ತ ಮತ್ತು ಬದ್ಧ ಕ್ರಿಕೆಟ್ ಅಭಿಮಾನಿಗಳಲ್ಲಿ ಅವರೂ ಒಬ್ಬರು. ವಯಸ್ಸು ಒಂದು ಸಂಖ್ಯೆಯಷ್ಟೇ. ಅವರ ಆಶೀರ್ವಾದದೊಂದಿಗೆ ಮುಂದಿನ ಪಂದ್ಯಕ್ಕೆ ಹೋಗುತ್ತಿದ್ದೇವೆ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
ಉಚಿತ ಟಿಕೆಟ್ ಕೊಡ್ತೀನಿ ಎಂದ ಆನಂದ್ ಮಹೀಂದ್ರಾ
ಅಜ್ಜಿಯ ಕ್ರಿಕೆಟ್ ಅಭಿಮಾನಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಮನಸೋತಿದ್ದಾರೆ. 'ನಾನು ಸಾಮಾನ್ಯವಾಗಿ ಕ್ರಿಕೆಟ್ ನೋಡುವುದಿಲ್ಲ. ಅದರೆ, ಈ ಮಹಿಳೆಯನ್ನು ನೋಡಲೆಂದೇ ಟಿವಿ ಆನ್ ಮಾಡಿದ್ದೆ. ನನಗೆ ಅವರೇ ಪಂದ್ಯ ಗೆಲ್ಲಿಸಿದವರಂತೆ ಕಂಡರು. ಈ ಪಂದ್ಯ ಗೆಲ್ಲಿಸುವ ಮಹಿಳೆ ಸೆಮಿಫೈನಲ್ ಮತ್ತು ಫೈನಲ್ನಲ್ಲಿಯೂ ಇರುವಂತೆ ಭಾರತ ನೋಡಿಕೊಳ್ಳಬೇಕು. ಅವರಿಗೆ ಉಚಿತ ಟಿಕೆಟ್ ನೀಡಬೇಕು. ಅವರು ಯಾರೆಂದು ಗೊತ್ತಾದರೆ ಭಾರತದ ಉಳಿದ ಪಂದ್ಯಗಳಿಗೆ ಟಿಕೆಟ್ ವೆಚ್ಚವನ್ನು ನಾನೇ ಭರಿಸುತ್ತೇನೆ' ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಅತ್ಯಧಿಕ ರನ್ ಪಟ್ಟಿಯಲ್ಲಿ ವಾರ್ನರ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ರೋಹಿತ್
ಗಣೇಶನ ಭಕ್ತೆ
'1983ರಲ್ಲಿ ಕಪಿಲ್ ದೇವ್ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟಾಗಲೂ ನಾನು ಪಂದ್ಯ ನೋಡಲು ಹೋಗಿದ್ದೆ' ಎಂದು ಚಾರುಲತಾ ಪಟೇಲ್ ಹೇಳಿದ್ದಾರೆ.
'ಭಾರತದ ಕ್ರಿಕೆಟಿಗರು ಇಂಗ್ಲೆಂಡ್ಗೆ ಆಡಲು ಬಂದಾಗಲೆಲ್ಲ ನಾನು ಅವರಿಗಾಗಿ ಪ್ರಾರ್ಥಿಸುತ್ತೇನೆ. ನಾನು ಗಣೇಶ ದೇವರ ದೊಡ್ಡ ಭಕ್ತೆ. ಭಾರತ ಗೆಲ್ಲಲಿದೆ ಎಂದು ನನಗೆ ನಂಬಿಕೆ ಇದೆ. ನಾನು ಆಟಗಾರರನ್ನು ಹಾರೈಸುತ್ತೇನೆ. ಅವರು ಚೆನ್ನಾಗಿ ಆಡಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.
|
ಹುಟ್ಟಿದ್ದು ತಾಂಜಾನಿಯಾದಲ್ಲಿ
ಚಾರುಲತಾ ಪಟೇಲ್ ಅವರು ಭಾರತದಲ್ಲಿ ಜನಿಸಿದವರಲ್ಲ. ಅವರು ಹುಟ್ಟಿದ್ದು ತಾಂಜಾನಿಯಾದಲ್ಲಿ. ಆದರೆ, ಅವರ ಪೋಷಕರು ಭಾರತದವರು. ಅವರ ಮಕ್ಕಳು ಇಂಗ್ಲೆಂಡ್ನ ಸರ್ರೆ ಕೌಂಟಿಗಾಗಿ ಆಡುತ್ತಿದ್ದರು. ಹೀಗಾಗಿ ಅವರ ಕ್ರಿಕೆಟ್ ಪ್ರೀತಿ ಹೆಚ್ಚು. 'ನಾನು ನಿವೃತ್ತಳಾದ 20 ವರ್ಷಗಳಿಂದ ಕ್ರಿಕೆಟ್ ನೋಡುತ್ತಿದ್ದೇನೆ. ನನಗೆ ತುಂಬಾ ಖುಷಿಯಾಗುತ್ತಿದೆ. ಇದುವರೆಗೂ ನಾನು ಈ ಪಂದ್ಯದ ವೇಳೆ ಐದು ಸಂದರ್ಶನಗಳನ್ನು ಕೊಟ್ಟಿರಬಹುದು' ಎಂದು ಐಸಿಸಿಯ ಡಿಜಿಟಲ್ ತಂಡಕ್ಕೆ ನೀಡಿದ ಸಂದರ್ಶನದ ವೇಳೆ ಅವರು ತಿಳಿಸಿದರು.