
ಲಂಡನ್, ಜೂನ್ 05: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಿರೀಟ ತೊಟ್ಟು, ಬ್ಯಾಟ್ ಮತ್ತು ಬಾಲ್ ಹಿಡಿದು ಸಿಂಹಾಸನದ ಮೇಲೆ ಕುಳಿತಿರುವ ಚಿತ್ರವೊಂದನ್ನು ಟ್ವಿಟರ್ ಮೂಲಕ ಬಿಡುಗಡೆ ಮಾಡಿದ್ದು, ಇದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು
ವಿಶ್ವಕಪ್ ಟೂರ್ನಿಯಲ್ಲಿ ಉಳಿದ ಎಲ್ಲಾ ತಂಡಗಳ ನಾಯಕರು ಪ್ರಶಸ್ತಿ ಗೆಲುವಿಗಾಗಿ ಹೋರಾಡುತ್ತಿರುವಾಗ ಐಸಿಸಿ ಟೀಮ್ ಇಂಡಿಯಾ ನಾಯಕನನ್ನು ಈ ರೀತಿಯಲ್ಲಿ ಚಿತ್ರಿಸಿ ಬಿಡುಗಡೆ ಮಾಡಿರುವುದು ಕೆಟ್ಟ ಪ್ರಭಾವ ಬೀರುವಂಥದ್ದಾಗಿದೆ ಎಂದು ಅಭಿಮಾನಿಗಳು ಟೀಕಿಸಿದ್ದಾರೆ.
ಬಿಸಿಸಿಐನ ಒಲಿಸಿಕೊಳ್ಳಲು ಐಸಿಸಿ ಇಂಥದ್ದೆಲ್ಲಾ ಕೆಲಸ ಮಾಡುತ್ತಿದೆ ಎಂದೆಲ್ಲಾ ಕೆಲ ಅಭಿಮಾನಿಗಳು ಟೀಕಿಸಿದರೆ, ಬಿಸಿಸಿಐ ತಾನು ಐಸಿಸಿ ಮೇಲೆ ಅಧಿಕಾರ ಚಲಾಯಿಸುತ್ತಿರುವುದು ಇದರಿಂದ ಸ್ಪಷವಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ. ಇನ್ನೂ ಕೆಲವರು ಐಸಿಸಿ ಭಾರತ ತಂಡ ಅಭಿಮಾನಿಯಂತೆ ವರ್ತಿಸುತ್ತಿದೆ ಎಂದು ಜರಿದಿದ್ದಾರೆ.
ಇದಕ್ಕೂ ಮುನ್ನ ವಿಶ್ವಕಪ್ ವೇಳಾಪಟ್ಟಿಯಲ್ಲಿ ಟೀಮ್ ಇಂಡಿಯಾದ ಪಂದ್ಯವನ್ನು ಬಹಳ ತಡವಾಗಿ ಆಡಿಸುತ್ತಿರುವುದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಐಸಿಸಿ ವಿರುದ್ಧ ಕಿಡಿ ಕಾರಿ, ಸಾಮಾಜಿಕ ಜಾಲತಾಣಗಳ ಮೂಲಕ ತರಾಟೆಗೆ ತೆಗೆದುಕೊಂಡಿದ್ದರು. ಬಹುತೇಕ ಎಲ್ಲಾ ತಂಡಗಳು ತಲಾ 2 ಪಂದ್ಯಗಳನ್ನು ಆಡಿರುವಾಗ ಭಾರತ ತಂಡ ಇನ್ನು ಒಂದು ಪಂದ್ಯವನ್ನೂ ಆಡದೇ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ವೇಳಾಪಟ್ಟಿಯಲ್ಲಿ ಭಾರತದ ಪಂದ್ಯವನ್ನು ತಡವಾಗಿ ಇಟ್ಟಿರುವುದರ ವಿಚಾರವಾಗಿ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ಬೇಸರ ವ್ಯಕ್ತ ಪಡಿಸಿ, ಇಂತಹ ವಿಚಾರಗಳಲ್ಲಿ ಬಿಸಿಸಿಐ ಮಧ್ಯಸ್ಥಿಕೆ ವಹಿಸಿ ವೇಳಾಪಟ್ಟಿಯ ರಚನೆ ಕುರಿತು ಐಸಿಸಿ ಜೊತೆಗೆ ಚರ್ಚಿಸಬೇಕು ಎಂದು ಸಲಹೆ ನೀಡಿದ್ದರು.
ಆದರೆ, ಕ್ಯಾಪ್ಟನ್ ಕೊಹ್ಲಿ ಅವರ ಆಲೋಚನೆ ವಿಭಿನ್ನವಾಗಿದ್ದು, "ಇದು ತಂಡದ ಪಾಲಿಗೆ ಉತ್ತಮವಾದದ್ದು. ಎದುರಾಳಿ ತಂಡಗಳು ಯಾವ ರೀತಿ ಆಡಿವೆ ಎಂಬುದನ್ನು ಗಮನಿಸಬಹುದು. ಇನ್ನು ಪಂದ್ಯದ ವೇಳೆ ಎದುರಾಗುವ ಸ್ಥಿತಿಗತಿಗಳು ಹೇಗಿವೆ ಎಂಬುದನ್ನು ಅರಿಯಲು ನೆರವಾಗುತ್ತದೆ,'' ಎಂದು ಹೇಳಿದ್ದರು.