ಬೆಂಗಳೂರು, ಜುಲೈ 31: ಶ್ರೀಲಂಕಾ ಪ್ರವಾಸಕ್ಕೆ ತೆರಳಲಿರುವ ಟೀಂ ಇಂಡಿಯಾ ಟೆಸ್ಟ್ ತಂಡದ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮತ್ತೊಮ್ಮೆ ತನ್ನ ಹಳೆ ಅಸ್ತ್ರ ಪ್ರಯೋಗಿಸುತ್ತಿದೆ. ಪ್ರವಾಸದ ವೇಳೆ ಪತ್ನಿ, ಗೆಳತಿಯರನ್ನು ಕರೆದೊಯ್ಯುವಂತಿಲ್ಲ ಎಂದು ನಿರ್ಬಂಧ ಹೇರಿದೆ. ಈ ನಡುವೆ ಪ್ರವಾಸದ ಆರಂಭದಲ್ಲಿ ರವಿಶಾಸ್ತ್ರಿ ಕೂಡಾ ತಂಡದ ಜೊತೆ ಇರುವುದಿಲ್ಲ.
ಐಸಿಸಿ ವಿಶ್ವಕಪ್ 2015 ವೇಳೆ ವಿಧಿಸಿದ್ದ ಕಠಿಣ ನಿಯಮಗಳು ಮತ್ತೊಮ್ಮೆ ಭಾರತೀಯ ಕ್ರಿಕೆಟಿಗರ ಮೇಲೆ ಎರಗುತ್ತಿದೆ. ಲಂಕಾ ಪ್ರವಾಸಕ್ಕೆ ಕ್ರಿಕೆಟರ್ಸ್ ತಮ್ಮ ಪತ್ನಿ, ಗರ್ಲ್ಫ್ರೆಂಡ್ ಕರೆದುಕೊಂಡು ಹೋಗುವಂತಿಲ್ಲ ಎಂದು ಬಿಸಿಸಿಐ ಘೋಷಿಸಿದೆ. ವಿರಾಟ್ ಕೊಹ್ಲಿ ನೇತೃತ್ವದ 15 ಜನರ ತಂಡ ಹೊಸ ಸರಣಿಗೆ ಸಿದ್ಧವಾಗುತ್ತಿದೆ.
ಬಾಂಗ್ಲಾದೇಶದಲ್ಲಿನ ಪ್ರವಾಸ ಪಂದ್ಯ ಮುಗಿದ ಮೇಲೆ ವಿರಾಮದಲ್ಲಿರುವ ಆಟಗಾರರು ತಮ್ಮ ಕುಟುಂಬದವರೊಂದಿಗೆ ಕಾಲ ಕಳೆದಿದ್ದಾರೆ. ಹೀಗಾಗಿ ಲಂಕಾ ಪ್ರವಾಸ ವೇಳೆ ಕುಟುಂಬ ಜೊತೆಗಿಲ್ಲದಿದ್ದರೂ ತೊಂದರೆ ಏನಿಲ್ಲ ಎಂದು ತನ್ನ ವಾದವನ್ನು ಬಿಸಿಸಿಐ ಮಂಡಿಸಿದೆ.
ಬಾಂಗ್ಲಾದೇಶ ಪ್ರವಾಸದ ವೇಳೆ ರವಿಶಾಸ್ತ್ರಿ ಅವರು ತಂಡದ ನಿರ್ದೇಶಕ ಕಮ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಟೀಂ ನಿರ್ದೇಶಕ ರವಿ ಶಾಸ್ತ್ರಿ ಸದ್ಯ ಇಂಗ್ಲೆಂಡ್ನಲ್ಲಿ ಆಷ್ಯಸ್ ಸರಣಿಗೆ ಟಿವಿ ವಿಶ್ಲೇಷಕರಾಗಿದ್ದಾರೆ. ಅಗಸ್ಟ್ 6 ಕ್ಕೆ ಲಂಕಾಕ್ಕೆ ತೆರಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಶಾಸ್ತ್ರಿ, ಅಗಸ್ಟ್ 12 ರಂದು ಶ್ರೀಲಂಕಾವನ್ನು ಸೇರಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ಸದ್ಯಕ್ಕೆ ಭರತ್ ಅರುಣ್, ಸಂಜಯ್ ಬಂಗಾರ್ ಹಾಗೂ ಆರ್ ಶ್ರೀಧರ್ ಅವರು ಶ್ರೀಲಂಕಾಕ್ಕೆ ತೆರಳಲಿರುವ ಟೀಂ ಇಂಡಿಯಾ ಜೊತೆಗೂಡಲಿದ್ದಾರೆ.