ಆರ್ಸಿಬಿ ಮೇಲೆ ಒತ್ತಡ ಹೆಚ್ಚು
ಪಂದ್ಯಗಳನ್ನು ಗೆಲ್ಲುವ ಜತೆಗೆ ಉತ್ತಮ ರನ್ರೇಟ್ ಸರಾಸರಿ ಹೊಂದುವ ಸವಾಲೂ ರಾಯಲ್ ಚಾಲೆಂಜರ್ಸ್ ತಂಡದ ಮೇಲಿದೆ. ಆಡಿದ 11 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದು 7ರಲ್ಲಿ ಸೋತಿರುವ ಆರ್ಸಿಬಿ ಖಾತೆಯಲ್ಲಿ 8 ಅಂಕಗಳಿವೆ.
ಆರ್ಸಿಬಿಗಿಂತಲೂ ಒಂದು ಪಂದ್ಯ ಹೆಚ್ಚು ಆಡಿರುವ ಡೆಲ್ಲಿ ಡೇರ್ ಡೆವಿಲ್ಸ್ 6 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದು, ಅದರ ಪ್ಲೇ ಆಫ್ ಆಸೆ ಹೆಚ್ಚೂ ಕಡಿಮೆ ಕಮರಿದೆ. ಕೇವಲ -0.261 ರನ್ ಸರಾಸರಿ ಹೊಂದಿರುವ ಆರ್ಸಿಬಿ ಮುಂದಿನ ಪಂದ್ಯಗಳಲ್ಲಿ ಭಾರಿ ಅಂತರದ ಗೆಲುವುಗಳನ್ನು ಕಾಣುವುದು ಅನಿವಾರ್ಯ.
ಪಂಜಾಬ್ ತಂಡಕ್ಕೂ ನೆಮ್ಮದಿಯಿಲ್ಲ
ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿಯೇ ಉಳಿದುಕೊಳ್ಳುವುದು ಬಹುತೇಕ ಖಚಿತ.
ಇನ್ನು ಉಳಿದ ಎರಡು ಸ್ಥಾನಗಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವೆ ನಿಕಟ ಪೈಪೋಟಿ ಇದೆ. ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಕೂಡ ಮೊದಲ ನಾಲ್ಕರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿವೆ. 11 ಪಂದ್ಯಗಳಿಂದ 12 ಅಂಕ ಗಳಿಸಿರುವ ಪಂಜಾಬ್ ತಂಡ ಸದ್ಯ, ಮೂರನೇ ಸ್ಥಾನದಲ್ಲಿದೆ.
ಗೇಲ್, ರಾಹುಲ್ vs ಕೊಹ್ಲಿ, ಡಿವಿಲಿಯರ್ಸ್
ಆರ್ಸಿಬಿ ಮತ್ತು ಪಂಜಾಬ್ ತಂಡದ ಪಂದ್ಯವಾದರೂ, ಎಲ್ಲರ ಕಣ್ಣು ನೆಟ್ಟಿರುವುದು ನಾಲ್ವರು ಸ್ಟಾರ್ ಆಟಗಾರರ ಮೇಲೆ. ಆರ್ಸಿಬಿ ತಂಡ ಬ್ಯಾಟಿಂಗ್ನಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಅವಲಂಬಿತವಾಗಿದೆ. ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರುತ್ತಿಲ್ಲ.
ಪಂಜಾಬ್ ತಂಡದ ಕಥೆಯೂ ಬೇರೆಯಲ್ಲ. ಆರಂಭಿಕರಾದ ಕೆ.ಎಲ್. ರಾಹುಲ್ ಅತ್ಯಧ್ಬುತ ಫಾರ್ಮ್ನಲ್ಲಿದ್ದಾರೆ. ಕ್ರಿಸ್ ಗೇಲ್ ಕೂಡ ಅಬ್ಬರಿಸುತ್ತಿದ್ದಾರೆ. ಈ ಇಬ್ಬರೂ ಆಟಗಾರರು ಕಳೆದ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ತಂಡದಲ್ಲಿ ಆಡಿದ್ದರು. ಹೀಗಾಗಿ ಇಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಆರ್ಸಿಬಿ ಅಭಿಮಾನಿಗಳೂ ತವಕಿಸುತ್ತಿದ್ದಾರೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಆರ್ಸಿಬಿ ಗೆಲುವು ಕಂಡಿತ್ತು. ಆ ಪಂದ್ಯದಲ್ಲಿ ಗೇಲ್ ಆಡಿರಲಿಲ್ಲ. ರಾಹುಲ್ 47 ರನ್ ಗಳಿಸಿ ಗಮನ ಸೆಳೆದಿದ್ದರು.
ಬೌಂಡರಿ, ಸಿಕ್ಸರ್ಗಳ ಮಳೆ ಬರುವುದೇ?
ಇಂದೋರ್ ಕ್ರೀಡಾಂಗಣ ಹೇಳಿಕೇಳಿ ಬ್ಯಾಟ್ಸ್ಮನ್ಗಳ ಸ್ವರ್ಗ. ಇಲ್ಲಿನ ಪಿಚ್ನಲ್ಲಿ ರನ್ ಸರಾಗವಾಗಿ ಹರಿದುಬರುತ್ತದೆ. ಇಲ್ಲಿ ಅಂತರರಾಷ್ಟ್ರೀ ಟಿ20ಯಲ್ಲಿ ದಾಖಲಾದ ಕನಿಷ್ಠ ಸ್ಕೋರ್ 172. ಇಲ್ಲಿ ಮೊದಲು ಬ್ಯಾಟ್ ಮಾಡುವ ತಂಡಗಳು ಸರಾಸರಿ 172 ರನ್ನಂತೆ ಕಲೆ ಹಾಕಿವೆ.
ಶ್ರೀಲಂಕಾ ವಿರುದ್ಧದ ಟಿ20ಯಲ್ಲಿ ಪಂದ್ಯದಲ್ಲಿ ಭಾರತ ಈ ಪಿಚ್ನಲ್ಲಿ 260 ರನ್ ಚಚ್ಚಿಹಾಕಿತ್ತು. ಹೀಗಾಗಿ ಇಂದೋರ್ ಅಂಗಳದಲ್ಲಿ ರನ್ ಹೊಳೆಯನ್ನು ನಿರೀಕ್ಷಿಸಬಹುದು. ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅಲ್ಲದೆ ಆರೋನ್ ಫಿಂಚ್, ಪಾರ್ಥಿವ್ ಪಟೇಲ್, ಮನ್ದೀಪ್ ಸಿಂಗ್, ಕರುಣ್ ನಾಯರ್ ಅವರೂ ಅಬ್ಬರಿಸಿದರೆ ಅಭಿಮಾನಿಗಳಿ ಹಬ್ಬದ ಅನುಭವ ಸಿಗಲಿದೆ.
ಎರಡೂ ತಂಡಗಳಿಗೆ ಬೌಲಿಂಗ್ ಸಮಸ್ಯೆ
ಆರ್ಸಿಬಿಯಲ್ಲಿ ಉಮೇಶ್ ಯಾದವ್ ಮತ್ತು ಟಿಮ್ ಸೌಥಿ, ಯಜುರ್ವೇಂದ್ರ ಚಾಹಲ್ ಅವರಂತಹ ಬೌಲರ್ಗಳಿದ್ದರೂ ಬೌಲಿಂಗ್ ಪಡೆ ಪರಿಣಾಮಕಾರಿಯಾಗುತ್ತಿಲ್ಲ. ಪಂಜಾಬ್ ಕಥೆಯೂ ಇದೇ ಆಗಿದೆ. ಆರಂಭದಲ್ಲಿ ಪಂಜಾಬ್ ಬೌಲಿಂಗ್ ಚೆನ್ನಾಗಿತ್ತು. ಈಗ ಅಲ್ಲಿ ಕೂಡ ಹಿಡಿತ ತಪ್ಪಿದೆ. ಆಂಡ್ರೂ ಟೈ ವಿಕೆಟ್ ಕೀಳುತ್ತಿದ್ದರೂ ರನ್ ಕೂಡ ನೀಡುತ್ತಿದ್ದಾರೆ. ನಾಯಕ ಅಶ್ವಿನ್ ಸ್ಪಿನ್ ಮೊನಚು ಕಳೆದುಕೊಂಡಿದ್ದಾರೆ. ಮೋಹಿತ್ ಶರ್ಮಾ ಕೂಡ ದುಬಾರಿಯಾಗುತ್ತಿದ್ದಾರೆ.