ನವದೆಹಲಿ, ಮೇ 18: ಪ್ರತಿಭೆ ಯಾವತ್ತಿಗೂ ನಮ್ಮ ಜೊತೆಗಿರುತ್ತದೆ ಎನ್ನಲಾಗೋಲ್ಲ. ಅದರಲ್ಲೂ ಕ್ರೀಡೆಯ ವಿಚಾರಕ್ಕೆ ಬಂದಾಗ ಈ ಮಾತು ಅಕ್ಷರಶಃ ಸತ್ಯ. ಇವತ್ತು ಮಿಂಚುವ ಓಟಗಾರ ನಾಳೆ ಮೂಲೆಗುಂಪಾಗಲೂಬಹುದು. ಆದರೆ ಮಿಂಚುತ್ತಿರಲು ಮಿಂಚಿನ ಪ್ರಯತ್ನ ಮಾಡುತ್ತಿರಬೇಕಷ್ಟೆ.
ಒಬ್ಬ ಆಟಗಾರ ಸೋತ ಕೂಡಲೇ ಕುಸಿದು ಕೂರಬೇಕೆಂದೇನೂ ಅಲ್ಲ. ಆದರೆ ಗೆಲ್ಲಲು ಸಿಕ್ಕ ಅವಕಾಶಗಳನ್ನೆಲ್ಲಾ ಕೈಚೆಲ್ಲುತ್ತಲೇ ಸಾಗಿ ನಗೆ ಪಾಟಲಿಗೀಡಾಗುವುದಕ್ಕಿಂತ ಕೆಲವೊಮ್ಮೆ ನಾವಾಗೇ ಹಿಂದೆ ಸರಿಯುವ ಮೂಲಕವೂ ದೊಡ್ಡವರಾಗಬಹುದು. ಈ ವಿಚಾರವನ್ನು ಐಪಿಎಲ್ ಗೆ ಅಪ್ಲೈ ಮಾಡೋಣ. ಸಾಲು ಸಾಲಾಗಿ ಸೋಲುತ್ತಿರುವ ಐವರನ್ನು ಇಲ್ಲಿ ನೋಡೋಣ.
ಪ್ರತಿಭಾನ್ವಿತ ಆಟಗಾರರೆಂದೇ ವಿಭಿನ್ನ ತಂಡಗಳಲ್ಲಿ ಅದೂ ಅತೀ ಹೆಚ್ಚಿನ ಬೆಲೆಗೆ ಖರೀದಿಯಾಗಿರುವ ಕೆಲ ಆಟಗಾರರು ಈ ಐಪಿಎಲ್ ನಲ್ಲಿ ಸಾಲು ಸಾಲಾಗಿ ಕಳಪೆ ಪ್ರದರ್ಶನ ನೀಡುತ್ತ ತಮಾಷೆಗೀಡಾಗುತ್ತಲೇ ಇದ್ದಾರೆ. ತಮಾಷೆಗೀಡಾದಾಗ ಅವಮಾನವೆನಿಸಿ ಅದಕ್ಕೆ ಉತ್ತರ ನೀಡುವ ಉದ್ದೇಶದಲ್ಲಿ ಮೈದಾನಕ್ಕಿಳಿಯುತ್ತಾರಾದರೂ ಮತ್ತೆದೇ ಸೋಲಿನ ದಾರಿ ತುಳಿಯುತ್ತಿರುವ ಆಟಗಾರರಿವರು.
ಯುವರಾಜ್ ಸಿಂಗ್
ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಕೆಚ್ಚೆದೆಯ ಮಹರಾಜ ಎಂದು ಖ್ಯಾತಿಯಾಗಿದ್ದ ಯುವರಾಜ್ ಈ ಐಪಿಎಲ್ ನಲ್ಲಿ ಬ್ಯಾಟಿಂಗ್ ವಿಚಾರದಲ್ಲಿ ನಿರಾಸೆ ಮೂಡಿಸಿದ್ದಾರೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಇಂಗ್ಲೆಂಡ್-ಭಾರತ ಪಂದ್ಯದಲ್ಲಿ ಯುವರಾಜ್ 6 ಎಸತಗಳಿಗೆ 6 ಸಿಕ್ಸ್ ಬಾರಿಸಿ ವಿಶ್ವದ ಗಮನ ಸೆಳೆದಿದದ್ದರು. ಆದರೆ ಈ ಐಪಿಎಲ್ ನಲ್ಲಿ ಪಂಜಾಬ್ ತಂಡದಲ್ಲಿರುವ ಸ್ಫೋಟಕ ಬ್ಯಾಟ್ಸ್ಮನ್ 12 ಸರಾಸರಿಯೊಂದಿಗೆ 91 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಪಂಜಾಬ್ ಸಹಮಾಲಕಿ ಪ್ರೀತಿ ಝಿಂಟಾ ಅವರೂ ಯುವರಾಜ್ ಕಳಪೆ ಬ್ಯಾಟಿಂಗ್ ಬಗ್ಗೆ ಗೊಣಗುವಂತಾಗಿದೆ.
ಕೀರನ್ ಪೊಲಾರ್ಡ್
ಕಳೆದ ಐಪಿಎಲ್ ಆವೃತ್ತಿಗಳಿಗೆ ಹೋಲಿಸಿದರೆ ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಅತೀ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದು ಈ ಐಪಿಎಲ್ ನಲ್ಲೇ. ಸದ್ಯ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಪೊಲಾರ್ಡ್ ಆರಂಭದಿಂದಲೂ ಅಂತದ್ದೇನು ರನ್ ಗಳಿಸಿಲ್ಲ. ಇತ್ತ ಮುಂಬೈ ಕೂಡ ಸೋಲುತ್ತಾ ಸಾಗಿ ಈಗಷ್ಟೇ ಗೆಲುವಿಗಾಗಿ ಹೆಣಗಾಡಿ ಫ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ವಿನಯ್ ಕುಮಾರ್
ವೇಗಿ ವಿನಯ್ ಕುಮಾರ್ ಉತ್ತಮ ಬೌಲಿಂಗ್ ದಾಳಿಗೆ ಹೆಸರಾಗಿದ್ದವರು. ಆದರೆ ಇತ್ತೀಚೆಗೆ ಆಟದ ಪ್ರಖರತೆಯನ್ನೇ ಕಳೆದುಕೊಂಡಿದ್ದಾರೆ. ಸದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ವಿನಯ್ ಆರಂಭದಿಂದಲೂ ಅಂಥದ್ದೇನೂ ಸಾಧನೆ ಮಾಡಿಲ್ಲ. ಬದಲಿಗೆ ಪಂದ್ಯದಿಂದ ಪಂದ್ಯಕ್ಕೆ ಹೆಚ್ಚೆಚ್ಚು ಟ್ರೋಲ್ ಆಗುತ್ತಿದ್ದಾರೆ.
ಬ್ರೆಂಡನ್ ಮೆಕಲಮ್
ಈ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವ ಬ್ರೆಂಡನ್ ಮೆಕಲಮ್ ಅವರದೂ ಇದೇ ಕತೆ. ಮೆಕಲಮ್ ಆಡೇ ಇಲ್ಲವೆಂದಲ್ಲ. ಆದರೆ ಅವರ ಬಹುತೇಕ ಬ್ಯಾಟಿಂಗೂ ಕಳಪೆಯಾಗಿ ಪ್ರದರ್ಶನವಾಗಿದೆಯಲ್ಲದೆ ಇದು ಆರ್ಸಿಬಿ ಸೋಲಿಗೂ ಕಾರಣವಾಗಿತ್ತು. ಶನಿವಾರ ಆರ್ಸಿಬಿಗೆ ರಾಜಸ್ಥಾನ್ ರಾಯಲ್ಸ್ ತಂಡದೆದುರು ಪಂದ್ಯವಿದ್ದು ಅಲ್ಲಾದರೂ ಮೆಕಲಮ್ ಮುಂಚುತ್ತಾರಾ ಕಾದು ನೋಡಬೇಕಿದೆ.
ಗೌತಮ್ ಗಂಭೀರ್
ಕಳೆದ ಐಪಿಎಲ್ ನಲ್ಲಿ ಕೋಲ್ಕತ್ತಾ ತಂಡದಲ್ಲಿದ್ದ ಗಂಭೀರ್ ಈ ಬಾರಿ ಡೆಲ್ಲಿ ಡೇರ್ ಡೆವಿಲ್ಸ್ ಗೆ ಪಾದಾರ್ಪಣೆ ಮಾಡಿದ್ದರು. ಅವರಿಗೆ ತಂಡದ ನಾಯಕತ್ವದ ಹೊಣೆಗಾರಿಕೆಯೂ ನೀಡಲಾಗಿತ್ತು. ಆದರೆ ಆರಂಭದಿಂದಲೂ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಗಂಭೀರ್ ಕೊನೆಗೆ ತಾನೇ ಬೇಸತ್ತು ಡೆಲ್ಲಿ ನಾಯಕತ್ವದಿಂದ ಕೆಳಗಿಳಿದಿದ್ದರು. ಇವರ ಸ್ಥಾನಕ್ಕೆ ಯುವ ಆಟಗಾರ ಶ್ರೇಯಸ್ ಐಯರ್ ಬಂದಿದ್ದರಾದರೂ ಡೆಲ್ಲಿಯನ್ನು ಗೆಲ್ಲಿಸಲು ಶ್ರೇಯಸ್ ನಾಯಕತ್ವಕ್ಕೂ ಸಾಧ್ಯವಾಗಿಲ್ಲ.