4 ಗಂಟೆಗೆ ಅಸಲಿ ಆಟ ಶುರು
ಬಿರುಸಿನ ರಾಜಕೀಯ ಚಟುವಟಿಕೆಗಳು ಸಹ ಟಿ 20 ಪಂದ್ಯದ ರೋಚಕತೆಯನ್ನು ನೀಡುತ್ತಿದೆ. ವಿಶ್ವಾಸಮತ ಪ್ರಕ್ರಿಯೆ ಮತ್ತು ಆರ್ಸಿಬಿಯ 'ಮಾಡು ಇಲ್ಲವೇ ಮಡಿ' ಪಂದ್ಯ ಎರಡೂ ಸಂಜೆ 4 ಗಂಟೆಗೆ ಆರಂಭವಾಗುತ್ತಿರುವುದು ಕಾಕತಾಳೀಯ.
ಕ್ರಿಕೆಟ್ ಪಂದ್ಯಕ್ಕೆ ಸಮಯದ ಮಿತಿ ಇದೆ. ಆದರೆ ರಾಜಕೀಯ ಪಂದ್ಯಾಟ ಎಷ್ಟು ಹೊತ್ತು ನಡೆಯಲಿದೆ ಎಂಬುದು ಸದ್ಯದ ಕುತೂಹಲ. ವಿಶ್ವಾಸಮತ ಪ್ರಕ್ರಿಯೆಯು ಅರ್ಧ ಗಂಟೆಯೊಳಗೇ ಮುಗಿದುಹೋಗಬಹುದು. ಅಥವಾ ಗದ್ದಲಗಳು ಉಂಟಾಗಿ ರಾತ್ರಿಯವರೆಗೂ ಬೆಳವಣಿಗೆಗಳು ನಡೆಯಬಹುದು. ಒಟ್ಟಿನಲ್ಲಿ ಎರಡೂ ಕಡೆ ರೋಚಕತೆಯಂತೂ ಕಟ್ಟಿಟ್ಟ ಬುತ್ತಿ.
ಪ್ಲೇಆಫ್ಗೇ ಸುಸ್ತು
ಇದುವರೆಗಿನ ಹತ್ತು ಆವೃತ್ತಿಗಳಲ್ಲಿ ಒಮ್ಮೆಯೂ ಟ್ರೋಫಿ ಎತ್ತಿಹಿಡಿಯುವಲ್ಲಿ ಸಫಲವಾಗದ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಲು ತಿಣುಕಾಡಿದ ಅನುಭವ ಹೊಸತೇನಲ್ಲ. ಹಿಂದಿನ ಅನೇಕ ಆವೃತ್ತಿಗಳಲ್ಲಿ ಆರ್ಸಿಬಿ ಹೀನಾಯ ಪ್ರದರ್ಶನಗಳನ್ನು ತೋರಿತ್ತು. ಹಾಗೆಯೇ ಪ್ಲೇಆಫ್ ಪ್ರವೇಶಿಸಿ ಕೊನೆಗೆ ಕೈಚೆಲ್ಲಿ ನಿರಾಸೆ ಅನುಭವಿಸಿದ್ದೂ ಇದೆ.
ಈ ಬಾರಿ ಕೂಡ ಆರ್ಸಿಬಿಯ ಪ್ರದರ್ಶನ ಗಮನಾರ್ಹವಾಗಿಲ್ಲ. ಆದರೂ ಕೊನೆಯ ಹಂತದಲ್ಲಿ ಪುಟಿದೆದ್ದು ಪೈಪೋಟಿ ನೀಡುತ್ತಿರುವುದು ತುಸು ಭರವಸೆ ಮೂಡಿಸಿದೆ.
ರನ್ನರ್ಅಪ್ಗೇ ತೃಪ್ತಿ
ಹತ್ತು ವರ್ಷದಲ್ಲಿ ಆರ್ಸಿಬಿ ಮೂರು ಬಾರಿ ಫೈನಲ್ಗೆ ತಲುಪಿಯೂ ಕಪ್ ತನ್ನದಾಗಿಸಿಕೊಳ್ಳಲಾಗದೆ ರನ್ನರ್ಅಪ್ ಆಗಿದೆ. 2009, 2011, 2016ರಲ್ಲಿ ಆರ್ಸಿಬಿ ಫೈನಲ್ಗೆ ತಲುಪಿತ್ತು.
ಇನ್ನು 2010 2015ರಲ್ಲಿ ಪ್ಲೇಆಫ್ ಪ್ರವೇಶಿಸಿ ಕ್ರಮವಾಗಿ ನಾಲ್ಕು ಮತ್ತು ಮೂರನೇ ಸ್ಥಾನ ಪಡೆದುಕೊಂಡಿತ್ತು. ಇನ್ನು ಐದು ಬಾರಿ ಪ್ಲೇಆಫ್ಗೂ ಪ್ರವೇಶ ಪಡೆದುಕೊಳ್ಳದೆ ಹಿನ್ನಡೆ ಅನುಭವಿಸಿತ್ತು.
ಕಳೆದ 2017ರ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಅರ್ಸಿಬಿ ಕಟ್ಟಕಡೆಯ (ಎಂಟನೇ) ಸ್ಥಾನ ಪಡೆದಿತ್ತು.
ಮುಂಬೈ ಸೋಲಿಗೆ ಪ್ರಾರ್ಥಿಸಿ
ಈ ಪಂದ್ಯದಲ್ಲಿ ಗೆದ್ದ ಮಾತ್ರಕ್ಕೆ ಆರ್ಸಿಬಿ ಪ್ಲೇಆಫ್ ಹಾದಿ ಸುಗಮವಾಗುವುದಿಲ್ಲ. ಭಾನುವಾರ ನಡೆಯಲಿರುವ ಸಂಜೆ 4 ಗಂಟೆಯ ಮತ್ತೊಂದು ಪಂದ್ಯ ಆರ್ಸಿಬಿ ಭವಿಷ್ಯಕ್ಕೆ ನಿರ್ಣಾಯಕವಾಗಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲೇಬೇಕು.
ಹೀಗಾಗಿ ಶನಿವಾರ ಆರ್ಸಿಬಿ ಗೆದ್ದರೆ, ಭಾನುವಾರ ಮುಂಬೈ ಇಂಡಿಯನ್ಸ್ ಸೋಲಬೇಕು ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುವುದು ಅನಿವಾರ್ಯ.