ಫ್ಲಾಪ್ ಆಗಿರುವ ರೈನಾ ಬದಲು ರಾಬಿನ್ ಉತ್ತಪ್ಪಗೆ ಯಾಕೆ ಅವಕಾಶ ನೀಡುತ್ತಿಲ್ಲ?; ಮಾಜಿ ಕ್ರಿಕೆಟಿಗನ ಪ್ರಶ್ನೆ

ಕಳೆದ ಬಾರಿ ನಡೆದ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತ್ಯದ್ಬುತವಾಗಿ ಕಮ್ ಬ್ಯಾಕ್ ಮಾಡುವ ಮೂಲಕ ಉತ್ತಮ ಪ್ರದರ್ಶನವನ್ನು ನೀಡಿ ಈ ಬಾರಿಯ ಟೂರ್ನಿಯಲ್ಲಿ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಿದ ಚೊಚ್ಚಲ ತಂಡ ಎನಿಸಿಕೊಂಡಿದೆ.
ಟೂರ್ನಿಯಲ್ಲಿ ಇಲ್ಲಿಯವರೆಗೂ 12 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 9 ಪಂದ್ಯಗಳಲ್ಲಿ ಜಯಗಳಿಸಿ, 3 ಪಂದ್ಯಗಳಲ್ಲಿ ಸೋಲುಂಡು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವೇನೋ ಅತ್ಯದ್ಭುತ ಪ್ರದರ್ಶನವನ್ನು ನೀಡುವುದರ ಮೂಲಕ ಪ್ಲೇ ಆಫ್ ಹಂತವನ್ನು ಪ್ರವೇಶಿಸಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರಾದ ಸುರೇಶ್ ರೈನಾ ಮಾತ್ರ ಟೂರ್ನಿಯಲ್ಲಿ ಅಕ್ಷರಶಃ ಮಂಕಾಗಿದ್ದು ಸಾಲುಸಾಲು ಕಳಪೆ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ಆರಂಭವಾದಾಗ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಚೊಚ್ಚಲ ಪಂದ್ಯದಲ್ಲಿ ಸುರೇಶ್ ರೈನಾ ಅರ್ಧ ಶತಕವನ್ನು ಸಿಡಿಸಿದ್ದು ಬಿಟ್ಟರೆ ಬೇರೆ ಯಾವುದೇ ಪಂದ್ಯದಲ್ಲಿಯೂ ಸಹ ಗಮನಾರ್ಹ ಪ್ರದರ್ಶನವನ್ನು ನೀಡಿಲ್ಲ.
ಹೌದು, ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸುರೇಶ್ ರೈನಾ ಇದುವರೆಗೂ 12 ಪಂದ್ಯಗಳನ್ನಾಡಿ ಗಳಿಸಿರುವುದು ಕೇವಲ 166 ರನ್ಗಳನ್ನು ಮಾತ್ರ. ಈ ಬಾರಿಯ ಟೂರ್ನಿ ಆರಂಭವಾದಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಚೊಚ್ಚಲ ಪಂದ್ಯದಲ್ಲಿ 34 ಎಸೆತಗಳಿಗೆ 56 ರನ್ ಬಾರಿಸಿದ್ದು ಬಿಟ್ಟರೆ ಬೇರೆ ಯಾವುದೇ ಪಂದ್ಯದಲ್ಲಿಯೂ ಸುರೇಶ್ ರೈನಾ ತಂಡಕ್ಕೆ ಆಸರೆಯಾಗುವಂತಹ ಪ್ರದರ್ಶನವನ್ನು ನೀಡಿಯೇ ಇಲ್ಲ. ಇಷ್ಟೆಲ್ಲಾ ಸಾಲುಸಾಲು ಕಳಪೆ ಪ್ರದರ್ಶನಗಳನ್ನು ನೀಡುತ್ತಿದ್ದರೂ ತಂಡದಿಂದ ಸುರೇಶ್ ರೈನಾ ಅವರನ್ನು ಹೊರಗಿಟ್ಟು ಬದಲಿ ಆಟಗಾರರಿಗೆ ಅವಕಾಶವನ್ನು ನೀಡುವ ಕೆಲಸಕ್ಕೆ ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೈ ಹಾಕುತ್ತಿಲ್ಲ. ಸದ್ಯ ಸುರೇಶ್ ರೈನಾ ಅವರ ಕಳಪೆ ಪ್ರದರ್ಶನ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು ಈ ಕುರಿತಾಗಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಶಾನ್ ಪೊಲಾಕ್ ಮಾತನಾಡಿದ್ದು ಈ ಕೆಳಕಂಡ ಸಲಹೆಗಳನ್ನು ನೀಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾಕೆ ಬದಲಾವಣೆಗಳನ್ನು ಮಾಡಲು ಇಚ್ಛಿಸುತ್ತಿಲ್ಲ?
'ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಸಾಲುಸಾಲು ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿ ವಿಫಲರಾಗಿದ್ದಾರೆ. ಹೀಗಿರುವಾಗ ತಂಡದಲ್ಲಿರುವ ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾಕೆ ಅವಕಾಶವನ್ನು ನೀಡುತ್ತಿಲ್ಲ ಎಂಬುದು ಅಚ್ಚರಿಯನ್ನು ಮೂಡಿಸಿದೆ. ಇಷ್ಟೆಲ್ಲಾ ಆದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಆಡುವ ಬಳಗದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಇಚ್ಛಿಸುತ್ತಿಲ್ಲ, ಲೀಗ್ ಹಂತದಲ್ಲಿಯೇ ಬದಲಾವಣೆಗಳನ್ನು ಮಾಡಿಕೊಂಡು ರಾಬಿನ್ ಉತ್ತಪ್ಪ ಅವರಿಗೆ ಅವಕಾಶ ನೀಡದೇ ಇದ್ದರೆ ಪ್ಲೇಆಫ್ ಹಂತದಲ್ಲಿ ತಂಡದ ಆಡುವ ಬಳಗದಲ್ಲಿ ಬದಲಾವಣೆಗಳನ್ನು ತರುವುದು ಅಸಾಧ್ಯ' ಎಂದು ಶಾನ್ ಪೊಲಾಕ್ ಅಭಿಪ್ರಾಯಪಟ್ಟಿದ್ದಾರೆ.

ಹಳೆಯ ಸುರೇಶ್ ರೈನಾ ಆಟ ಕಾಣಿಸುತ್ತಿಲ್ಲ
ಸುರೇಶ್ ರೈನಾ ಬದಲು ರಾಬಿನ್ ಉತ್ತಪ್ಪ ಅವರಿಗೆ ಯಾಕೆ ಅವಕಾಶವನ್ನು ನೀಡುತ್ತಿಲ್ಲ ಎಂಬ ಪ್ರಶ್ನೆಯನ್ನು ಹಾಕಿರುವ ಶಾನ್ ಪೊಲಾಕ್ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಸುರೇಶ್ ರೈನಾ ನೀಡುತ್ತಿರುವ ಕಳಪೆ ಪ್ರದರ್ಶನದ ಕುರಿತು ಕೂಡ ಮಾತನಾಡಿದ್ದಾರೆ. 'ಸುರೇಶ್ ರೈನಾ ಬ್ಯಾಟಿಂಗ್ನಲ್ಲಿ ಹಿಡಿತವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ, ಯಾವುದೋ ಒತ್ತಡದೊಂದಿಗೆ ಸುರೇಶ್ ರೈನಾ ಬ್ಯಾಟ್ ಬೀಸಿದಂತೆ ತೋರುತ್ತಿದೆ. ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮಾಡುತ್ತಿದ್ದ, ಬೌಲಿಂಗ್ ಮಾಡಿ ವಿಕೆಟ್ ಕಬಳಿಸುತ್ತಿದ್ದ ಮತ್ತು ಚೆಂಡನ್ನು ಮೈದಾನದಿಂದಾಚೆಗೆ ಕಳುಹಿಸುತ್ತಿದ್ದ ಹಳೆಯ ಸುರೇಶ್ ರೈನಾರ ಆಟವನ್ನು ಈ ಟೂರ್ನಿಯಲ್ಲಿ ನಾವು ನೋಡಲಾಗುತ್ತಿಲ್ಲ' ಎಂದು ಶಾನ್ ಪೊಲಾಕ್ ಹೇಳಿಕೆ ನೀಡಿದ್ದಾರೆ.

ವಿರೇಂದ್ರ ಸೆಹ್ವಾಗ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು
ಕೇವಲ ಶಾನ್ ಪೊಲಾಕ್ ಮಾತ್ರವಲ್ಲದೇ ಇತ್ತೀಚೆಗಷ್ಟೇ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಸುರೇಶ್ ರೈನಾ ಕಳಪೆ ಪ್ರದರ್ಶನ ನೀಡುತ್ತಿರುವುದರ ಕುರಿತು ಮಾತನಾಡಿದ್ದರು. 'ತಮ್ಮ ತಂಡದ ಆಟಗಾರ ಸುರೇಶ್ ರೈನಾ ಉತ್ತಮ ಫಾರ್ಮ್ನಲ್ಲಿಲ್ಲ ಎಂಬ ವಿಷಯ ಸ್ವತಃ ಎಂಎಸ್ ಧೋನಿ ಅವರಿಗೂ ತಿಳಿದಿದೆ. ಆದರೂ ಸಹ ಅವರು ಸುರೇಶ್ ರೈನಾ ಬದಲು ಬೇರೆ ಆಟಗಾರನಿಗೆ ಅವಕಾಶ ಕೊಡುವ ಪ್ರಯತ್ನಕ್ಕೆ ಕೈ ಹಾಕುತ್ತಿಲ್ಲ. ಸುರೇಶ್ ರೈನಾ ಪ್ಲೇ ಆಫ್ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ದೊಡ್ಡ ಮಟ್ಟದ ಆಟವನ್ನು ಆಡಬಲ್ಲ ಆಟಗಾರ ಎಂಬುದು ಎಂ ಎಸ್ ಧೋನಿಗೆ ತಿಳಿದಿದೆ. ಹೀಗಾಗಿಯೇ ಅವರು ಸುರೇಶ್ ರೈನಾರನ್ನು ಆಡುವ ಬಳಗದಿಂದ ಕೈಬಿಡದೆ ಪದೇಪದೆ ಅವಕಾಶಗಳನ್ನು ನೀಡುತ್ತಿದ್ದಾರೆಯೇ ಹೊರತು ಯಾವುದೇ ಕಾಳಜಿಯಿಂದಲ್ಲ' ಎಂದು ವಿರೇಂದ್ರ ಸೆಹ್ವಾಗ್ ಹೇಳಿಕೆ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications