ಟೂರ್ನಿ ಮಧ್ಯದಲ್ಲಿಯೇ ಮುಂಬೈ ಇಂಡಿಯನ್ಸ್ ತಂಡದಿಂದ ಅರ್ಜುನ್ ತೆಂಡೂಲ್ಕರ್ ಔಟ್
ಈ ಬಾರಿಯ ಮಿನಿ ಹರಾಜಿನಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದರು. 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ತಂಡ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿಸಿತ್ತು. ಆದರೆ ಇದುವರೆಗೂ ನಡೆದಿರುವ ಯಾವುದೇ ಪಂದ್ಯದಲ್ಲಿಯೂ ಕೂಡ ಅರ್ಜುನ್ ತೆಂಡೂಲ್ಕರ್ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಕ್ಕಿರಲಿಲ್ಲ. ಹೀಗಿರುವಾಗಲೇ ಅಭ್ಯಾಸದ ವೇಳೆ ಅರ್ಜುನ್ ತೆಂಡೂಲ್ಕರ್ ಗಾಯಕ್ಕೊಳಗಾಗಿದ್ದಾರೆ ಎಂಬ ಕಾರಣವನ್ನು ನೀಡಿ ಮುಂಬೈ ಇಂಡಿಯನ್ಸ್ ಆತನನ್ನು ತಂಡದಿಂದ ಕೈಬಿಟ್ಟಿದೆ. ಹೀಗಾಗಿ ಈ ವರ್ಷ ಐಪಿಎಲ್ ಪದಾರ್ಪಣೆ ಮಾಡಬೇಕೆಂಬ ಅರ್ಜುನ್ ತೆಂಡೂಲ್ಕರ್ ಕನಸು ಕನಸಾಗಿಯೇ ಉಳಿದಿದೆ.
ಅರ್ಜುನ್ ತೆಂಡೂಲ್ಕರ್ ಬದಲಿಗೆ ಬೇರೆ ಆಟಗಾರ
ಹೀಗೆ ಗಾಯದ ಸಮಸ್ಯೆಯಿಂದ ಟೂರ್ನಿ ಮಧ್ಯದಲ್ಲಿಯೇ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದಿರುವ ಅರ್ಜುನ್ ತೆಂಡೂಲ್ಕರ್ ಬದಲಾಗಿ ಡೆಲ್ಲಿ ರಣಜಿ ತಂಡದ ವೇಗಿ ಸಿಮರ್ಜೀತ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಆಯ್ಕೆ ಮಾಡಿಕೊಂಡಿದೆ. 2018ರಲ್ಲಿ ಹೈದರಾಬಾದ್ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಸಿಮರ್ಜಿತ್ ಸಿಂಗ್ ಪದಾರ್ಪಣೆ ಮಾಡಿದ್ದರು. ಇನ್ನು ಇದುವರೆಗೂ ಒಟ್ಟು 15 ಟಿ ಟ್ವೆಂಟಿ ಪಂದ್ಯಗಳಲ್ಲಿ ಆಟವಾಡಿರುವ ಸಿಮರ್ಜಿತ್ ಸಿಂಗ್ 18 ವಿಕೆಟ್ಗಳನ್ನು ಪಡೆದಿದ್ದಾರೆ.
ಪ್ಲೇ ಆಫ್ ಪ್ರವೇಶಿಸುತ್ತಾ ಮುಂಬೈ ಇಂಡಿಯನ್ಸ್?
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ 11 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ 5 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸುವುದರ ಮೂಲಕ 10 ಅಂಕಗಳನ್ನು ಪಡೆದು ಸದ್ಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಹಾಗೂ ಟೂರ್ನಿಯಲ್ಲಿ ಇನ್ನೂ 3 ಪಂದ್ಯಗಳನ್ನು ಆಡಲಿರುವ ಮುಂಬೈ ಇಂಡಿಯನ್ಸ್ ಎಲ್ಲಾ 3 ಪಂದ್ಯಗಳಲ್ಲಿಯೂ ಗೆಲುವನ್ನು ಸಾಧಿಸಿದರೆ ಮಾತ್ರ ಪ್ಲೇ ಆಫ್ ಹಂತವನ್ನು ಪ್ರವೇಶಿಸಲು ಅರ್ಹತೆ ಪಡೆದುಕೊಳ್ಳಲಿದೆ.