19ನೇ ಓವರ್ನ 2 ನೋಬಾಲ್ ಮೋಸ?
ಸೆಪ್ಟೆಂಬರ್ 21ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಪ್ರಸ್ತುತ ಐಪಿಎಲ್ ಟೂರ್ನಿಯ 32ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 185 ರನ್ ಕಲೆಹಾಕಿ ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ 186 ರನ್ಗಳ ಗುರಿಯನ್ನು ನೀಡಿತ್ತು. ಹೀಗೆ ರಾಜಸ್ಥಾನ್ ರಾಯಲ್ಸ್ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಲು ಮುಂದಾದ ಪಂಜಾಬ್ ಕಿಂಗ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೆ 120 ರನ್ ಗಳಿಸಿ ಇನ್ನೂ ಒಂದೆರಡು ಓವರ್ ಬಾಕಿ ಇರುವಾಗಲೇ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ಮೂಡಿಸಿತ್ತು. ಆದರೆ ಪಂದ್ಯದ ಕೊನೆಯ 2 ಓವರ್ಗಳು ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟವು. ಕೊನೆಯ 12 ಎಸೆತಗಳಲ್ಲಿ ಪಂಜಾಬ್ ತಂಡಕ್ಕೆ ಗೆಲ್ಲಲು 8 ರನ್ ಬೇಕಿತ್ತು, ಈ ಸಮಯದಲ್ಲಿ 19ನೇ ಓವರ್ ಬೌಲಿಂಗ್ ಮಾಡಿದ ಮುಸ್ತಫಿಜರ್ ರಹಮಾನ್ 18.2 ಹಾಗೂ 18.3 ಎಸೆತಗಳನ್ನು ನೋಬಾಲ್ ಹಾಕಿದ್ದರು, ಆದರೂ ಸಹ ತೀರ್ಪುದಾರರು ಈ 2 ಎಸೆತಗಳನ್ನು ನೋಬಾಲ್ ಎಂದು ಪರಿಗಣಿಸಲಿಲ್ಲ ಎಂಬ ಗಾಢವಾದ ಆರೋಪ ಇದೀಗ ಕೇಳಿಬಂದಿದೆ. ಹೀಗೆ ಮುಸ್ತಫಿಜರ್ ರಹಮಾನ್ 19ನೇ ಓವರ್ನಲ್ಲಿ ಕೇವಲ 4 ರನ್ ನೀಡಿದರು. ಹೀಗಾಗಿ ಅಂತಿಮ ಓವರ್ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 4 ರನ್ಗಳ ಅಗತ್ಯವಿದ್ದಾಗ ಕಾರ್ತಿಕ್ ತ್ಯಾಗಿ ಉತ್ತಮ ಬೌಲಿಂಗ್ ಮಾಡಿ ಆ ಓವರ್ನಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಪಡೆದದ್ದರಿಂದ ರಾಜಸ್ಥಾನ್ ರಾಯಲ್ಸ್ ಸೋಲುವ ಪಂದ್ಯವನ್ನು ಅಂತಿಮ ಹಂತದಲ್ಲಿ 2 ರನ್ಗಳಿಂದ ಗೆದ್ದು ಬೀಗಿತು. ಹೀಗೆ ರಾಜಸ್ಥಾನ್ ಕೊನೆಯ ಹಂತದಲ್ಲಿ ಗೆಲುವು ಸಾಧಿಸಿದ ನಂತರ 19ನೇ ಓವರ್ನಲ್ಲಿ ಮುಸ್ತಫಿಜರ್ ರಹಮಾನ್ ಎಸೆದ 2 ನೋಬಾಲ್ ತೀರ್ಪನ್ನು ಯಾಕೆ ನೀಡಲಿಲ್ಲ ಎಂಬ ಪ್ರಶ್ನೆ ಇದೀಗ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.
ಪಂಜಾಬ್ ಆಟಗಾರ ದೀಪಕ್ ಹೂಡಾ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ!
ಒಂದೆಡೆ 19ನೇ ಓವರ್ನಲ್ಲಿ 2 ನೋಬಾಲ್ ಎಸೆತಗಳನ್ನು ಪರಿಗಣಿಸದೆ ಇರುವುದು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರೆ ಮತ್ತೊಂದಡೆ ಪಂಜಾಬ್ ಕಿಂಗ್ಸ್ ತಂಡದ ಆಟಗಾರ ದೀಪಕ್ ಹೂಡಾ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಗಂಭೀರ ಆರೋಪ ಕೇಳಿಬಂದಿದೆ. ದೀಪಕ್ ಹೂಡಾ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬರಲು ಕಾರಣಗಳೇನೆಂದರೆ ರಾಜಸ್ಥಾನ್ ವಿರುದ್ಧದ ಪಂದ್ಯ ಶುರುವಾಗುವ ಮುನ್ನ ಅಂದರೆ ಮಧ್ಯಾಹ್ನ ಸುಮಾರು 2 ಗಂಟೆ ಸಮಯಕ್ಕೆ ದೀಪಕ್ ಹೂಡಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ 'ಹಿಯರ್ ವಿ ಗೋ' ( ನಾವು ಪಂದ್ಯವನ್ನಾಡಲು ಸಿದ್ಧ ) ಎಂದು ಬರೆದುಕೊಳ್ಳುವುದರ ಮೂಲಕ ಹೆಲ್ಮೆಟ್ ಧರಿಸಿ ತಯಾರಾಗಿರುವ ತಮ್ಮ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಮೂಲಕ ಆಡುವ ಬಳಗದಲ್ಲಿ ತಾನು ಸ್ಥಾನ ಪಡೆದುಕೊಂಡಿರುವುದನ್ನು ಪಂದ್ಯ ಆರಂಭವಾಗುವ ಗಂಟೆಗಳ ಮುನ್ನವೇ ಜಗತ್ತಿಗೆ ತಿಳಿಸುವಂತಹ ಕೆಲಸವನ್ನು ದೀಪ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೆ 19.5ನೇ ಓವರ್ನಲ್ಲಿ ಯಾವುದೇ ರನ್ ಬಾರಿಸದೇ 2 ಎಸೆತಗಳನ್ನು ಎದುರಿಸಿ ಔಟ್ ಆದ ದೀಪಕ್ ಹೂಡಾ ತಂಡವನ್ನು ಗೆಲ್ಲಿಸುವ ಯಾವುದೇ ಪ್ರಯತ್ನವನ್ನು ಕೂಡ ಮಾಡಲಿಲ್ಲ. ಹೀಗಾಗಿ ದೀಪಕ್ ಹೂಡಾ ಕುರಿತು ಇದೀಗ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು ಆ್ಯಂಟಿ ಕರಪ್ಷನ್ ಯೂನಿಟ್ ಶೀಘ್ರದಲ್ಲಿಯೇ ದೀಪಕ್ ಹೂಡ ಕುರಿತಾಗಿ ವಿಚಾರಣೆ ನಡೆಸಲಿದೆ.
ಕೊನೆಯ ಓವರ್ನಲ್ಲಿ 8 ವಿಕೆಟ್ ಕೈನಲ್ಲಿದ್ದರೂ ಸೋತದ್ದು ಆಶ್ಚರ್ಯಕರ
ಮೊದಲೇ ಹೇಳಿದಂತೆ ಈ ಪಂದ್ಯದ ಅಂತಿಮ ಓವರ್ನಲ್ಲಿ ಅಂದರೆ 6 ಎಸೆತಗಳಲ್ಲಿ ಪಂಜಾಬ್ ತಂಡಕ್ಕೆ ಗೆಲ್ಲಲು 4 ರನ್ಗಳ ಅಗತ್ಯವಿತ್ತು. ಆ ಸಂದರ್ಭದಲ್ಲಿ ಬೌಲಿಂಗ್ ಮಾಡಲು ಕಾರ್ತಿಕ್ ತ್ಯಾಗಿ ಬಂದಿದ್ದರು, ಅಲ್ಲಿಯವರೆಗೂ ಪಂದ್ಯದಲ್ಲಿ ಒಟ್ಟು 3 ಓವರ್ಗಳನ್ನು ಮಾಡಿದ್ದ ಕಾರ್ತಿಕ್ ತ್ಯಾಗಿ ಯಾವುದೇ ವಿಕೆಟ್ ಪಡೆದುಕೊಳ್ಳದೇ 27 ರನ್ಗಳನ್ನು ನೀಡಿ ದುಬಾರಿಯಾಗಿದ್ದರು. ಹೀಗೆ ತಾನು ಮಾಡಿದ ಮೊದಲ 3 ಓವರ್ಗಳಲ್ಲಿ ಯಾವುದೇ ವಿಕೆಟ್ ಪಡೆಯದೇ 27 ರನ್ ನೀಡಿದ್ದ ಕಾರ್ತಿಕ್ ತ್ಯಾಗಿ ಅಂತಿಮ ಓವರ್ನಲ್ಲಿ 2 ವಿಕೆಟ್ ಪಡೆದು ಕೇವಲ ಒಂದು ರನ್ ನೀಡಿದ್ದು ರೋಚಕವಾಗಿತ್ತು ಮತ್ತೆ ಅಷ್ಟೇ ಆಶ್ಚರ್ಯಕರವಾಗಿಯೂ ಇತ್ತು. ಯಾಕೆಂದರೆ ಪಂಜಾಬ್ ಕಿಂಗ್ಸ್ ಬಳಿ ಇನ್ನೂ 8 ವಿಕೆಟ್ಗಳು ಕೈನಲ್ಲಿದ್ದವು, ಮೈದಾನದಲ್ಲಿ ನುರಿತ ಬ್ಯಾಟ್ಸ್ಮನ್ಗಳಿದ್ದರು, ಆದರೂ ಸಹ ಪಂದ್ಯ ಟಾಸ್ ಸೋತದ್ದು ಎಲ್ಲರಲ್ಲಿಯೂ ಆಶ್ಚರ್ಯವನ್ನುಂಟುಮಾಡಿದ್ದಂತೂ ನಿಜ. ಅದರಲ್ಲಿಯೂ ಈ ಓವರ್ನ ಐದನೇ ಎಸೆತದಲ್ಲಿ ದೀಪಕ್ ಹೂಡಾ ವಿಕೆಟ್ ಒಪ್ಪಿಸಿದ್ದು ಸದ್ಯ ದೊಡ್ಡಮಟ್ಟದ ಅನುಮಾನಕ್ಕೆ ಕಾರಣವಾಗಿದೆ.