
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡಕ್ಕೆ ಪ್ರಮುಖ ಅಸ್ತ್ರವೊಂದು ಸೇರ್ಪಡೆಯಾಗಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಚುಟುಕು ಕ್ರಿಕೆಟ್ನ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರೆನಿಸಿರುವ ವನಿಂದು ಹಸರಂಗ ಆರ್ಸಿಬಿ ತಂಡದ ಭಾಗವಾಗಿದ್ದಾರೆ. ಶನಿವಾರ ಆರ್ಸಿಬಿ ಈ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿದೆ. ಈ ಬಳಿಕ ವನಿಂದು ಹಸರಣಗ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡದ ಸಂಪೂರ್ಣ ಆಟಗಾರರ ಪಟ್ಟಿಯನ್ನು ಶನಿವಾರ ಅಂತಿಮಗೊಳಿಸಲಾಗಿದೆ. ಇದರಲ್ಲಿ ಆದ ಪ್ರಮುಖ ಬದಲಾವಣೆಯೆಂದರೆ ವನಿಂದು ಹಸರಂಗ ಅವರ ಸೇರ್ಪಡೆ. ಕೇವಲ ವನಿಂದು ಹಸರಂಗ ಮಾತ್ರವಲ್ಲ ಶ್ರೀಲಂಕಾದ ವೇಗದ ಬೌಲರ್ ದುಶ್ಮಂತಾ ಚಮೀರಾ ಹಾಗೂ ಸಿಂಗಾಪೂರ್ನ ಆಟಗಾರ ಟಿಮ್ ಡೇವಿಡ್ ಕೂಡ ಆರ್ಸಿಬಿ ತಂಡದ ಭಾಗವಾಗಿದ್ದಾರೆ.
ಆದರೆ ವನಿಂದು ಹಸರಂಗ ಅವರು ಆರ್ಸಿಬಿ ತಂಡಕ್ಕೆ ಸೇರ್ಪಡೆಯಾಗಿರುವುದು ಹೆಚ್ಚು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾದ ಈ ಸ್ಪಿನ್ನರ್ ನೀಡಿರುವ ಪ್ರದರ್ಶನ. ಕಳೆದ ಭಾರತ ವಿರುದ್ಧಧ ಸರಣಿಯಲ್ಲಿಯೂ ವನಿಂದು ಹಸರಂಗ ಅದ್ಭುತವಾದ ಪ್ರದರ್ಶನ ನೀಡಿ ಮಿಂಚಿದ್ದರು. ಈ ಮೂಲಕ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ನ್ಲಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ ಶ್ರೀಲಂಕಾ ತಂಡದ ಈ ಪ್ರತಿಭಾನ್ವಿತ ಸ್ಪಿನ್ನರ್.
ಭಾರತ ವಿರುದ್ಧ ಟಿ20 ಪಂದ್ಯವೊಂದರಲ್ಲಿ ವನಿಂದು ಹಸರಂಗಾ ಕೇವಲ 7 ರನ್ಗಳನ್ನು ನೀಡಿ 4 ವಿಕೆಟ್ ಕಬಳಿಸಿದ್ದರು. ಈ ಮೂಲಕ ಕ್ರಿಕೆಟ್ ಪ್ರೇಮಿಗಳ ಚಿತ್ತ ತಮ್ಮತ್ತ ಸೆಲೆಯುವಲ್ಲಿ ಯಶಸ್ವಿಯಾಗಿದ್ದರು. ಭಾರತ ವಿರುದ್ಧದ ಈ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ವನಿಂದು ಹಸರಂಗ ಒಟ್ಟು 7 ವಿಕೆಟ್ ಪಡೆದಿದ್ದರು. ಇನ್ನು ಸದ್ಯ ಟಿ20 ಶ್ರೇಯಾಂಕಪಟ್ಟಿಯಲ್ಲಿ ಇವರು ಸದ್ಯ ಎರಡನೇ ಶ್ರೇಯಾಂಕದ ಬೌಲರ್ ಆಗಿದ್ದಾರೆ, ಈ ಮೂಲಕ ಆರ್ಸಿಬಿ ತಂಡ ತನ್ನ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ.
ಇನ್ನು ಆರ್ಸಿಬಿ ತಂಡಕ್ಕೆ ಸೇರ್ಪಡೆಯಾಗಿರುವ ವಿಚಾರದಿಂದ ಶ್ರೀಲಂಕಾದ ಈ ಸ್ಪಿನ್ನರ್ ಕೂಡ ಈಗ ಸಾಕಷ್ಟು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದು ತನ್ನ ಕನಸು ನನಸಾದ ಕ್ಷಣ ಎಂದಿದ್ದಾರೆ ವನಿಂದು ಹಸರಂಗ. "ಮನೆಯಲ್ಲಿ ಕುಳಿದು ಅವರ ಆಟವನ್ನು ನೋಡಿದಲ್ಲಿಂದ ಈಗ ಅದೇ ಅದ್ಭುತ ತಂಡದ ಭಾಗವಾಗಿರುವವರೆಗೆ. ನಾನು ತುಂಬಾ ಉತ್ಸುಕನಾಗಿದ್ದು ಗೌರವ ಹಾಗೂ ರೋಮಾಂಚನದ ಅನುಭವ ಜೊತೆಯಾಗಿ ಆಗುತ್ತಿದೆ" ಎಂದು ವನಿಂದು ಹಸರಂಗ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಪ್ಟೆಂಬರ್ 20ರಂದು ಕಣಕ್ಕಿಳಿಯುವ ಮೂಲಕ ಎರಡನೇ ಚರಣದ ಅಭಿಯಾನವನ್ನು ಆರಂಭಿಸಲಿದೆ. ಈ ಬಾರಿಯ ಆವೃತ್ತಿಯ ಮೊದಲ ಹಂತದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಸಾಕಷ್ಟು ಯಶಸ್ಸು ಕಂಡಿತ್ತು. ಆಡಿದ ಏಳು ಪಂದ್ಯಗಳ ಪೈಕಿ ಐದು ಗೆಲುವು ಸಾಧಿಸಿದ ವಿರಾಟ್ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ ಈಗ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಇದೇ ಪ್ರದರ್ಶನವನ್ನು ಟೂರ್ನಿಯ ಮುಂದುವರಿದ ಭಾಗದಲ್ಲಿಯೂ ನೀಡುವ ವಿಶ್ವಾಸವನ್ನು ಆರ್ಸಿಬಿ ತಮಡ ಹೊಂದಿದೆ. ಇದಕ್ಕೆ ಆರ್ಸಿಬಿ ಸೇರ್ಪಡೆಯಾದ ಹೊಸ ಆಟಗಾರರಿಂದ ಮತ್ತಷ್ಟು ಉತ್ತಮ ಕೊಡುಗೆ ದೊರೆಯುವ ವಿಶ್ವಾಸವಿದೆ.
ಈ ಬಾರಿಯ ಐಪಿಎಲ್ ಆವೃತ್ತಿಯ ಎರಡನೇ ಚರಣದ ಪಂದ್ಯಗಳಿಂದ ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಆ ಸ್ಥಾನಕ್ಕೆ ವನಿಮದು ಹಸರಂಗ ಅವರನ್ನು ಸೇರ್ಪಡೆಗೊಳಿಸುವ ನಿರ್ಧಾರವನ್ನು ಪ್ರಕಟಿಸಿದೆ.
ಐಪಿಎಲ್ 2021 ದ್ವಿತೀಯ ಹಂತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಳಾಪಟ್ಟಿ
* ಸೆಪ್ಟೆಂಬರ್ 20: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತಾ ನೈಟ್ ರೈಡರ್ಸ್, ಸಂಜೆ 7.30
* ಸೆಪ್ಟೆಂಬರ್ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ಸಂಜೆ 7.30
* ಸೆಪ್ಟೆಂಬರ್ 26: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, ಸಂಜೆ 7.30 ಕ್ಕೆ
* ಸೆಪ್ಟೆಂಬರ್ 29: ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಂಜೆ 7.30 ಕ್ಕೆ
* ಅಕ್ಟೋಬರ್ 3: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಧ್ಯಾಹ್ನ 3.30 ಕ್ಕೆ
* ಅಕ್ಟೋಬರ್ 6: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಸಂಜೆ 7.30 ಕ್ಕೆ
* ಅಕ್ಟೋಬರ್ 8: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್, ಸಂಜೆ 7.30 ಕ್ಕೆ