ಬೆಂಗಳೂರು, ಫೆಬ್ರವರಿ 20: ಪುಲ್ವಾಮಾದಲ್ಲಿನ ಉಗ್ರರ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದನ್ನು ಸ್ಮರಿಸಿ ಕ್ರಿಕೆಟ್ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಪ್ರತಿರೋಧ ತೋರುತ್ತಿವೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್(ಕೆಎಸ್ ಸಿಎ) ಕೂಡಾ ಈ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಂಡಿದ್ದು, ಪಾಕಿಸ್ತಾನ ಕ್ರಿಕೆಟರ್ ಗಳ ಭಾವಚಿತ್ರಗಳನ್ನು ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರದಬ್ಬಿದೆ.
ಇದಕ್ಕೂ ಮುನ್ನ ಪಂಜಾಬ್ ಕ್ರಿಕೆಟ್ ಸಂಸ್ಥೆ(ಪಿಸಿಬಿ), ರಾಜಸ್ಥಾನ ಕ್ರಿಕೆಟ್ ಸಂಸ್ಥೆ(ಆರ್ ಸಿಎ) ಹಾಗೂ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ(ಸಿಸಿಐ)ದಲ್ಲಿದ್ದ ಪಾಕಿಸ್ತಾನ ಕ್ರಿಕೆಟರ್ ಗಳ ಭಾವಚಿತ್ರ, ಸ್ಮರಣಿಕೆಗಳನ್ನು ತೆಗೆದು ಹಾಕಲಾಗಿದೆ. ಪಾಕಿಸ್ತಾನ ಪ್ರಧಾನ ಮಂತ್ರಿ, ಮಾಜಿ ಕ್ರಿಕೆಟ್ ನಾಯಕ ಇಮ್ರಾನ್ ಖಾನ್ ಅವರ ಭಾವಚಿತ್ರವೂ ಸೇರಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಅಂಗಳದಲ್ಲಿ ಪಾಕಿಸ್ತಾನಿ ಕ್ರಿಕೆಟರ್ಸ್ ಸೇರಿದಂತೆ ಕ್ರಿಕೆಟ್ ದಿಗ್ಗಜರ ಭಾವಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಶೋಯೆಬ್ ಮಲ್ಲಿಕ್, ಶೋಯೆಬ್ ಅಖ್ತರ್, ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್(ಬೆಂಗಳೂರಿನಲ್ಲಿ 100ನೇ ಟೆಸ್ಟ್ ಪಂದ್ಯವಾಡಿದ ಚಿತ್ರ), ವಾಸೀಂ ಅಕ್ರಮ್, ಮಾಜಿ ಅಧ್ಯಕ್ಷ ಪರ್ವೇಜ್ ಮುಷ್ರಫ್, 1992ರಲ್ಲಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಪಾಕಿಸ್ತಾನವು ವಿಶ್ವಕಪ್ ಎತ್ತಿ ಹಿಡಿದ ಚಿತ್ರ ಎಲ್ಲವನ್ನು ತೆಗೆದು ಹಾಕಲಾಗಿದೆ.
ಇದಲ್ಲದೆ, ಪಾಕಿಸ್ತಾನಿ ಕ್ರಿಕೆಟರ್ ಗಳು ಹಸ್ತಾಕ್ಷರ ಹಾಕಿದ್ದ ಬ್ಯಾಟ್ ಗಳನ್ನು ತೆಗೆದು ಹಾಕಲಾಗಿದ್ದು, ಭಾರತೀಯ ಯೋಧರ ಬೆಂಬಲಕ್ಕೆ ನಾವು ಇದ್ದೇವೆ, ಪುಲ್ವಾಮಾ ಘಟನೆಯನ್ನು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸುತ್ತೇವೆ ಎಂದು ಕೆಎಸ್ ಸಿಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದ್ದಾರೆ.