
ಲಂಡನ್, ಮೇ 29: ಭಾರತ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ತೊಡೆಯ ಸ್ನಾಯು ಸೆಳೆತದ ಸಮಸ್ಯೆಗೆ ತುತ್ತಾಗಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಮಶ್ರಫೆ ಮೊರ್ತಾಝ, ಭಾನುವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಗಾಯದ ಸಮಸ್ಯೆಯನ್ನು ಬದಿಗೊತ್ತಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
"ಈ ರೀತಿ ಹಿಂದೆಯೂ ಆಗಿದೆ. ಮೊದಲ ಎರಡು ಓವರ್ಗಳನ್ನು ಎಸೆಯುವಾಗ ಕಷ್ಟವಾಗುತ್ತದೆ. ಆದರೆ ಒಮ್ಮೆ ಅದನ್ನು ದಾಟಿದರೆ, ಬಳಿಕ ಹೆಚ್ಚು ತೊಂದರೆ ಕಾಣಿಸಿಕೊಳ್ಳುವುದಿಲ್ಲ. ಇಂದು ಕೂಡ ಅಭ್ಯಾಸ ವೇಳೆ ಹೆಚ್ಚು ತೊಂದರೆ ಎದುರಾಗಿಲ್ಲ,'' ಎಂದು ಮಶ್ರಫೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
"ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರನೇ ಓವರ್ ಎಸೆಯುವಾಗ ನನ್ನ ತೊಡೆಯ ಸ್ನಾಯು ಸೆಳೆಯಲಾರಂಭಿಸಿತು. ಇನ್ನು ಪಂದ್ಯದಲ್ಲಿ 4-5 ಓವರ್ ಎಸೆದ ಬಳಿಕ ಬೌಲಿಂಗ್ ನಿಲ್ಲಿಸಬಹುದಿತ್ತು. ಆದರೆ, ಈ ಹಂತದಲ್ಲಿ ಕೊಹ್ಲಿ ಮತ್ತು ರೋಹಿತ್ ಚುರುಕಾಗಿ ರನ್ ಗಳಿಸಲು ಎದುರು ನೋಡುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಬೌಲಿಂಗ್ ಅಭ್ಯಾಸ ಮುಂದುವರಿಸುವುದು ಒಳಿತು ಎಂದನಿಸಿತು,'' ಎಂದಿದ್ದಾರೆ.
ಪಂದ್ಯದಲ್ಲಿ ಮಶ್ರಫೆ 6 ಓವರ್ಗಳಲ್ಲಿ ಕೇವಲ 23 ರನ್ಗಳನ್ನು ನೀಡಿದರಾದರೂ ಯಾವುದೇ ವಿಕೆಟ್ ಪಡೆಯಲು ಅವರಿಂದ ಸಾಧ್ಯವಾಗಲಿಲ್ಲ. ಭಾರತ ತಂಡ ಪಂದ್ಯದಲ್ಲಿ 102ಕ್ಕೆ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತಾದರೂ, ಕೆ.ಎಲ್ ರಾಹುಲ್ ಮತ್ತು ಎಂ.ಎಸ್ ಧೋನಿ ಅವರ ಶತಕಗಳ ಬಲದಿಂದ 359 ರನ್ಗಳ ಬೃಹತ್ ಮೊತ್ತ ದಾಖಲಿಸಿ, ಬಳಿಕ 95 ರನ್ಗಳ ಜಯ ದಾಖಲಿಸಿತು.
ಇನ್ನು ಬಾಂಗ್ಲಾದೇಶ ತಂಡದ ಗಾಯದ ಸಮಸ್ಯೆಗಳು ಬಹಳಷ್ಟಿದ್ದು, ಸ್ಟಾರ್ ಆಲ್ರೌಂಡರ್ ಶಾಕಿಬ್ ಅಲ್ ಹಸನ್ ಕೂಡ ಸಂಪೂರ್ಣ ಗುಣಮುಖರಾಗಿಲ್ಲ. ಎಡಗೈ ವೇಗಿ ಮುಸ್ತಾಫಿಜುರ್ ರೆಹ್ಮಾನ್ ಮೀನಖಂಡಗಳ ಸೆಳೆತದ ಸಮಸ್ಯೆ ಎದುರಿಸುತ್ತಿದ್ದಾರೆ. ಆರಂಭಿಕ ಬ್ಯಾಟ್ಸ್ಮನ್ ತಮೀಮ್ ಇಕ್ಬಾಲ್ ಕೂಡ ಗಾಯದ ಸಮಸ್ಯೆ ಕಾರಣ ಭಾರತ ವಿರುದ್ಧದ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಹೊತ್ತಿಗೆ ತಂಡ ಸೇರಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.