ರಣಜಿ ಟ್ರೋಫಿಯಲ್ಲಿ ದಾಖಲೆಯ ತ್ರಿಶತಕ ಸಿಡಿಸಿದ ಪೃಥ್ವಿ ಶಾ
ಈಗಾಗಲೇ 5 ಟೆಸ್ಟ್, 6 ಏಕದಿನ ಮತ್ತು 1 ಟಿ20 ಪಂದ್ಯಗಳನ್ನು ಆಡಿರುವ ಪೃಥ್ವಿ ಶಾ, ಜುಲೈ 2021ರ ಶ್ರೀಲಂಕಾ ಪ್ರವಾಸದ ನಂತರ ಭಾರತ ತಂಡಕ್ಕಾಗಿ ಆಡಿಲ್ಲ. ಆದರೆ, ದೇಶೀಯ ಟೂರ್ನಿಗಳಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಮೋಘ ರನ್ ಗಳಿಕೆ ಮತ್ತು ರಣಜಿ ಟ್ರೋಫಿಯಲ್ಲಿ ದಾಖಲೆಯ ತ್ರಿಶತಕ ಭಾರತೀಯ ತಂಡಕ್ಕೆ ಪ್ರವೇಶಿಸಲು ಪೃಥ್ವಿ ಶಾ ಅವರಿಗೆ ನೆರವಾಯಿತು.
23 ವರ್ಷದ ಪೃಥ್ವಿ ಶಾ ಅವರನ್ನು ಭಾರತ ತಂಡದಲ್ಲಿ ಮುಂದುವರಿಸಬೇಕು ಮತ್ತು ಈ ಬಲಗೈ ಬ್ಯಾಟರ್ಗೆ ಹೆಚ್ಚಿನ ಅವಕಾಶ ನೀಡಬೇಕು. ಪೃಥ್ವಿ ಶಾ ಎದುರಾಳಿ ಬೌಲರ್ಗಳ ಮೇಲೆ ದಾಳಿ ಮಾಡುವ ಮತ್ತು ಮ್ಯಾಚ್ ವಿನ್ನರ್ ಆಗಬಲ್ಲ ಆಟಗಾರ ಎಂದು ಭಾರತ ತಂಡದ ಮ್ಯಾನೇಜ್ಮೆಂಟ್ಗೆ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಒತ್ತಾಯಿಸಿದರು.
ಪೃಥ್ವಿ ಶಾಗೆ ಭಾರತ ತಂಡದಲ್ಲಿ ಹೆಚ್ಚಿನ ಅವಕಾಶ ನೀಡಿ
"ಪೃಥ್ವಿ ಶಾ ಭಾರತ ತಂಡದಿಂದ ಹೊರಗುಳಿಯಬಾರದಿತ್ತು. ಅವರು ಅವಕಾಶ ಸಿಕ್ಕಾಗಲೆಲ್ಲಾ, ಅವರು ಭಾರತಕ್ಕೆ ಸ್ಫೋಟಕ ಆರಂಭವನ್ನು ನೀಡಿದ್ದರು. ಭಾರತ ತಂಡದಲ್ಲಿ ಸದ್ಯ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ. ಇದೀಗ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಿದ್ದೀರಿ, ಅವರೊಂದಿಗೆ ಮುಂದುವರಿಯಿರ," ಎಂದು ಗೌತಮ್ ಗಂಭೀರ್ ಸಲಹೆ ನೀಡಿದರು.
"ಒಂದು ಸರಣಿಯಿಂದ ಅವನ ಆಟವನ್ನು ನಿರ್ಣಯಿಸಬೇಡಿ. ಪೃಥ್ವಿ ಶಾ ಚಿಕ್ಕವನು, ಸ್ಫೋಟಕ ಮತ್ತು ಮ್ಯಾಚ್ ವಿನ್ನಿಂಗ್ ಬ್ಯಾಟ್ಸ್ಮನ್. ಆದ್ದರಿಂದ ಆಡುವ ಹನ್ನೊಂದರ ಬಳಗದಲ್ಲಿ ಅವನನ್ನು ಆಯ್ಕೆ ಮಾಡಿ ಮತ್ತು ಹೆಚ್ಚಿನ ರನ್ ಗಳಿಸಲು ಅವಕಾಶ ನೀಡಿ," ಎಂದು ಮಾಜಿ ಎಡಗೈ ಬ್ಯಾಟರ್ ಗೌತಮ್ ಗಂಭೀರ್ ಹೇಳಿದರು.
ಶುಭ್ಮನ್ ಗಿಲ್ ಟೆಸ್ಟ್ ಮತ್ತು ಏಕದಿನ ಮೇಲೆ ಗಮನ ಹರಿಸಬೇಕು
ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಶುಭ್ಮನ್ ಗಿಲ್, ಟೆಸ್ಟ್ ಮತ್ತು ಏಕದಿನ ಸ್ವರೂಪದ ಮೇಲೆ ಹೆಚ್ಚು ಗಮನಹರಿಸಬೇಕು ಎಂದು ಗಂಭೀರ್ ತಿಳಿಸಿದರು.
"ಶುಭ್ಮನ್ ಗಿಲ್ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಮೇಲೆ ಕೇಂದ್ರೀಕರಿಸಬೇಕಾಗಿದೆ. ಟಿ20ಯಲ್ಲಿ ಪೃಥ್ವಿ ಶಾ ಮತ್ತು ಇಶಾನ್ ಕಿಶನ್ ಭಾರತದ ಖಾಯಂ ಆರಂಭಿಕ ಬ್ಯಾಟರ್ಗಳಾಗಬೇಕು," ಎಂದು ಗೌತಮ್ ಗಂಭೀರ್ ಸಲಹೆ ನೀಡಿದರು.
ಭಾರತ ತಂಡ ಪ್ರಸ್ತುತ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದ್ದು, ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.