
ಬೆಳಗಾವಿ, ನವೆಂಬರ್ 20: ಬೆಳಗಾವಿಯ ಆಟೋನಗರದ ಕೆಎಸ್ ಸಿಎ ಮೈದಾನದಲ್ಲಿ ಇಂದಿನಿಂದ ಮುಂಬೈ ವಿರುದ್ಧದ ರಣಜಿ ಪಂದ್ಯ ಆರಂಭವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಧಾನಗತಿಯಲ್ಲಿ ರನ್ ಪೇರಿಸುತ್ತಿದೆ.
ಕರ್ನಾಟಕ ತಂಡದ ನಾಯಕ ಆರ್.ವಿನಯ್ ಕುಮಾರ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದು, ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಆಲ್ ರೌಂಡರ್ ಶ್ರೇಯಸ್ ಗೋಪಾಲ್ ಮುನ್ನಡೆಸುತ್ತಿದ್ದಾರೆ.
ಮೈಸೂರಿನಲ್ಲಿ ನವೆಂಬರ್ 28ರಿಂದ ರಣಜಿ ಕ್ರಿಕೆಟ್ ಹವಾ ಶುರು
ಇದೇ ಮೊದಲ ಬಾರಿ ಬೆಳಗಾವಿ ಮೈದಾನದಲ್ಲಿ ರಣಜಿ ಪಂದ್ಯದಲ್ಲಿ ಡಿಜಿಟಲ್ ಸ್ಕೋರ್ ಬೋರ್ಡ್ ಬಳಕೆ ಮಾಡಲಾಗುತ್ತಿದೆ. ಪಂದ್ಯದ ಆರಂಭಕ್ಕೂ ಮುನ್ನ 100 ಪಂದ್ಯಗಳನ್ನು ಪೂರೈಸಿದ ವಿನಯ್ ಕುಮಾರ್ ಅವರಿಗೆ ಸ್ಮರಣಿಕೆಯನ್ನು ನೀಡಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ವತಿಯಿಂದ ಗೌರವಿಸಲಾಯಿತು.
ಎಲೈಟ್ 'ಎ' ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕಕ್ಕೆ ನಿಶ್ಚಲ್ ಡಿ ಅವರು ಉತ್ತಮ ಆರಂಭ ಒದಗಿಸಿ 27ರನ್ ಗಳಿಸಿದರೆ, ಶಿಶಿರ್ ಭವಾನೆ 5ರನ್ ಗಳಿಸಿ ಔಟಾದರು. ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಅವಕಾಶ ಪಡೆದ ಕೌನೇನ್ ಅಬ್ಬಾಸ್ 64ರನ್ ಗಳಿಸಿ ಉತ್ತಮ ಆಟವಾಡಿದರು.
ನಾಯಕ ಶ್ರೇಯಸ್ ಗೋಪಾಲ್(38*) ಜತೆ ಉತ್ತಮ ಜೊತೆಯಾಟ ಪ್ರದರ್ಶಿಸಿದ ಸಿದ್ದಾರ್ಥ್ ಕೆವಿ ಜವಾಬ್ದಾರಿಯುತವಾಗಿ ಆಡಿ ಶತಕ ಗಳಿಸಿದರು. 164 ಎಸೆತಗಳಲ್ಲಿ 100ರನ್ (13 ಬೌಂಡರಿ, 2 ಸಿಕ್ಸರ್) ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.
ಸ್ಟುವರ್ಟ್ ಬಿನ್ನಿ 3ರನ್ ಗಳಿಸಿ ನಿರಾಶೆ ಮೂಡಿಸಿದರು. ಮುಂಬೈ ಪರ ಶಿವಂ ದುಬೇ 4ವಿಕೆಟ್ ಗಳಿಸಿ ಮಿಂಚಿದರು. 82ಓವರ್ ಗಳಲ್ಲಿ 250/4ಸ್ಕೋರ್ ಮಾಡಿದೆ.