
ಛತ್ತೀಸ್ಗಢದ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಮೊದಲನೇ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆದುಕೊಂಡಿದೆ. ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 366 ರನ್ಗಳಿಗೆ ಆಲೌಟ್ ಆಗಿದ್ದು, 55 ರನ್ಗಳ ಮುನ್ನಡೆ ಪಡೆದುಕೊಂಡಿತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಛತ್ತಿಸ್ಗಢ ಆರಂಭದಲ್ಲೇ ಆಘಾತ ಅನುಭವಿಸಿತು, ರನ್ ಖಾತೆ ತೆರೆಯದೇ ಎರಡು ವಿಕೆಟ್ ಕಳೆದುಕೊಂಡಿದ್ದ ಛತ್ತಿಸ್ಗಢಕ್ಕೆ ಆಶುತೋಶ್ ಸಿಂಗ್, ಅಮನ್ದೀಪ್ ಖರೆ ಆಸರೆಯಾದರು. 35 ರನ್ಗಳ ಅಜೇಯ ಜೊತೆಯಾಟ ಆಡಿದ್ದು, ನಾಲ್ಕನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ವಿದ್ವತ್ ಕಾವೇರಪ್ಪ ಮತ್ತು ವಾಸುಕಿ ಕೌಶಿಕ್ ತಲಾ ಒಂದು ವಿಕೆಟ್ ಪಡೆದಿದ್ದಾರೆ. 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 35 ರನ್ ಗಳಿಸಿರುವ ಛತ್ತಿಸ್ಗಢ 20 ರನ್ಗಳ ಹಿನ್ನಡೆಯಲ್ಲಿದೆ. ಛತ್ತಿಸ್ಗಢ ಮೊದಲನೇ ಇನ್ನಿಂಗ್ಸ್ನಲ್ಲಿ 311 ರನ್ ಗಳಿಸಿ ಆಲೌಟ್ ಆಗಿತ್ತು.
2ನೇ ದಿನದಾಟದ ಅಂತ್ಯಕ್ಕೆ 202 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಮೂರನೇ ಬೇಗನೆ ವಿಕೆಟ್ಗಳನ್ನು ಕಳೆದುಕೊಂಡಿತು. ಶತಕ ಸಿಡಿಸಿದ್ದ ಮಯಾಂಕ್ ಅಗರ್ವಾಲ್, 117 ರನ್ ಗಳಿಸಿ ಔಟಾದರು. ವಿಶಾನ್ ಓನತ್ 32 ರನ್ ಗಳಿಸಿ ರನೌಟ್ ಆದರು.

ನಿಕಿನ್ ಜೋಸ್ ಅರ್ಧಶತಕ
ಅನುಭವಿ ಮನೀಶ್ ಪಾಂಡೆ ಕೇವಲ 5 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಶ್ರೇಯಸ್ ಗೋಪಾಲ್ 23 ರನ್ ಗಳಿಸಿದರು. ಬಿಆರ್ ಶರತ್ 5 ರನ್, ಕೃಷ್ಣಪ್ಪ ಗೌತಮ್ 18 ರನ್, ವೈಶಕ್ 6 ರನ್, ವಾಸುಕಿ ಕೌಶಿಕ್ 1 ರನ್ ಗಳಿಸಿದರು.
ನಿಕಿನ್ ಜೋಸ್ ಅತ್ಯುತ್ತಮ ಇನ್ನಿಂಗ್ಸ್ ಆಡುವ ಮೂಲಕ ಅರ್ಧಶತಕ ಗಳಿಸಿದರು. 67 ರನ್ ಗಳಿಸಿದ ಜೋಸ್ ಕರ್ನಾಟಕ ತಂಡ ಮುನ್ನಡೆ ಪಡೆಯುವಲ್ಲಿ ಸಹಾಯ ಮಾಡಿದರು. ನಾಲ್ಕನೇ ದಿನದಾಟದಲ್ಲಿ ಕಡಿಮೆ ಮೊತ್ತಕ್ಕೆ ಛತ್ತಿಸ್ಗಢವನ್ನು ಕಟ್ಟಿಹಾಕಿದರೆ ಕರ್ನಾಟಕ ತಂಡಕ್ಕೆ ಗೆಲ್ಲುವ ಅವಕಾಶವಿದೆ.
ಸಿ ಗುಂಪಿನಲ್ಲಿರುವ ಕರ್ನಾಟಕ 3 ಪಂದ್ಯಗಳಲ್ಲಿ ಒಂದು ಜಯ ಎರಡು ಡ್ರಾ ಮೂಲಕ 13 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಉಭಯ ತಂಡಗಳ ಆಡುವ ಬಳಗ
ಕರ್ನಾಟಕ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ವಿಶಾಲ್ ಓನತ್, ನಿಕಿನ್ ಜೋಸ್, ಮನೀಶ್ ಪಾಂಡೆ, ಶರತ್ ಬಿಆರ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಾಸುಕಿ ಕೌಶಿಕ್, ವಿಜಯ್ಕುಮಾರ್ ವೈಶಾಕ್, ವಿದ್ವತ್ ಕಾವೇರಪ್ಪ.
ಛತ್ತೀಸ್ಗಢ: ಅವನೀಶ್ ಧಲಿವಾಲ್, ಅನುಜ್ ತಿವಾರಿ, ಅಶುತೋಷ್ ಸಿಂಗ್, ಅಜಯ್ ಜಾದವ್ ಮಂಡಲ್, ಹರ್ಪ್ರೀತ್ ಸಿಂಗ್ ಭಾಟಿಯಾ(ನಾಯಕ), ಅಮನ್ದೀಪ್ ಖರೆ, ಶಶಾಂಕ್ ಸಿಂಗ್, ಮಯಾಂಕ್ ವರ್ಮಾ, ಸುಮಿತ್ ರುಯಿಕರ್, ರವಿಕಿರಣ್, ಸೌರಭ್ ಮಜುಂದಾರ್.