
ಮುಂಬೈ, ಮಾರ್ಚ್ 12: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಇಂಥವರ ಆಟ ನೋಡಿ ಎಷ್ಟೋ ದಿನಗಳಾಗಿವೆ. ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ನಿಂದಾಗಿ ಕ್ರಿಕೆಟ್ ದಿಗ್ಗಜರ ಆಟ ವೀಕ್ಷಿಸುವ ಅವಕಾಶ ಒದಗಿದೆ. ಆದರೆ ಈ ಅಪರೂಪದ ಟೂರ್ನಿಗೂ ಕೊರೊನಾ ವೈರಸ್ ಕಂಟಕ ಎದುರಾಗಿದೆ.
ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2020 ಟೂರ್ನಿಯ ಆರಂಭಿಕ ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದವು, ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸಿದ್ದವು. ಆದರೆ ಕೊರೊನಾ ವೈರಸ್ ಸೋಂಕಿನಿಂದಾಗಿ ಟೂರ್ನಿಯ ಉಳಿದ ಪಂದ್ಯಗಳನ್ನು ಸರಿಯಾದ ರೀತಿಯಲ್ಲಿ ನಡೆಸಲಾಗುತ್ತಿಲ್ಲ.
ಕೊರೊನಾ ವೈರಸ್ ಹಬ್ಬುವುದನ್ನು ತಡೆಯಲು ಮಹಾರಾಷ್ಟ್ರದಲ್ಲಿ ಕ್ರೀಡಾಕೂಟಗಳಿಗೆ ನಿರ್ಬಂಧ ಹೇರಲಾಗುತ್ತಿದೆ. ಹೀಗಾಗಿ ರೋಡ್ ಸೇಫ್ಟಿ ಸೀರೀಸ್ನ ಉಳಿದ ಪಂದ್ಯಗಳನ್ನು ಕದ ಮುಚ್ಚಿದ ಸ್ಟೇಡಿಯಂ ಅಂದರೆ ಪ್ರೇಕ್ಷಕರ ಪ್ರವೇಶ ನಿರ್ಬಂಧಿಸಿದ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಪುಣೆಯ ಗಹುಂಜೆಯಲ್ಲಿರುವ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2020ರ ಪಂದ್ಯಗಳನ್ನು ರದ್ದು ಮಾಡಿರುವ ಆಯೋಜಕರು, ಆ ಪಂದ್ಯಗಳನ್ನು ನವಿ ಮುಂಬೈಯ ಡಿವೈ ಪಾಟಿಲ್ ಸ್ಟೇಡಿಯಂಗೆ ಸ್ಥಳಾಂತರಿಸಿದ್ದಾರೆ.
'ಆರೋಗ್ಯಕ್ಕೆ ಸಂಬಂಧಿಸಿ ದೇಶದಲ್ಲಿ ತುರ್ತು ಪರಿಸ್ಥಿತಿ ಎದುರಾಗಿರುವುದರಿಂದ ಮಾರ್ಚ್ 13ರಿಂದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ನ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಕದ ಮುಚ್ಚಿದ ಡಿವೈ ಪಾಟಿಲ್ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಿದ್ದೇವೆ. ವೇಳಾಪಟ್ಟಿ ಬದಲಿಸಲಾಗಿರುವ ಸೌತ್ ಆಫ್ರಿಕಾ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್ ತಂಡಗಳು ಮಾರ್ಚ್ 13ರಂದು ಕಾದಾಡಲಿವೆ,' ಎಂದು ಆಯೋಜಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.