ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಗುರುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ 2022ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಮುಂಬೈ ತಂಡವು ಗೆದ್ದು ಬೀಗಿದ್ದು, ಫೈನಲ್ ಪ್ರವೇಶಿಸಿದೆ.
ಮೊದಲ ಸೆಮಿಫೈನಲ್ನಲ್ಲಿ ಪಂಜಾಬ್ ವಿರುದ್ಧ ಗೆದ್ದು ಹಿಮಾಚಲ ಪ್ರದೇಶ ಫೈನಲ್ ಎಂಟ್ರಿ ಬಳಿಕ, ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್ ಟಿಕೆಟ್ ಪಡೆದಿದೆ.
ವಿದರ್ಭ ನೀಡಿದ್ದ 165ರನ್ ಗುರಿ ಬೆನ್ನತ್ತಿದ ಮುಂಬೈ ಬಹುಬೇಗನೆ ಎರಡು ವಿಕೆಟ್ ಕಳೆದುಕೊಂಡಿತು. ನಾಯಕ ರಹಾನೆ 5, ಯಶಸ್ವಿ ಜೈಸ್ವಾಲ್ 12ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ಆಘಾತ ಮೂಡಿಸಿದ್ರು. ಆದ್ರೆ ಪೃಥ್ವಿ ಶಾ 21 ಎಸೆತಗಳಲ್ಲಿ 35ರನ್ ಸಿಡಿಸಿದ್ರೆ, ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
SMAT 2022 Semifinals : ಪಂಜಾಬ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಹಿಮಾಚಲ ಪ್ರದೇಶ
ಶ್ರೇಯಸ್ ಅಯ್ಯರ್ 44 ಎಸೆತಗಳಲ್ಲಿ 73ರನ್ ಸಿಡಿಸುವ ಮೂಲಕ ಮಿಂಚಿದರು. ಇವರ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡಿದ್ದವು. ಸರ್ಫರಾಜ್ ಖಾನ್ 27ರನ್ ಹಾಗೂ ಶಿವಂ ದುಬೆ ಅಜೇಯ 13ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು. ಮುಂಬೈ 16.5 ಓವರ್ಗಳಲ್ಲಿಯೇ 169ರನ್ ಕಲೆಹಾಕಿ ಐದು ವಿಕೆಟ್ಗಳ ಗೆಲುವು ಸಂಪಾದಿಸಿದೆ.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ವಿದರ್ಭ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಸಂಜಯ್ ರಘುನಾಥ್ 4, ನಾಯಕ ಅಕ್ಷಯ್ ವಾಡ್ಕರ್ 1ರನ್ಗಳಿಸಿ ವಿಕೆಟ್ ಒಪ್ಪಿಸಿದ್ರು. ಆದ್ರೆ ಮೂರನೇ ವಿಕೆಟ್ಗೆ ಅಥರ್ವ ಹಾಗೂ ವಾಂಖಡೆ ಉತ್ತಮ ಜೊತೆಯಾಟದ ನಿರೀಕ್ಷೆ ಮೂಡಿಸಿದ್ರು. ಆದ್ರೆ ಅಥರ್ವ 29ರನ್ಗೆ ಇನ್ನಿಂಗ್ಸ್ ಮುಗಿಸಿದ್ರು. ಇದ್ರ ಬೆನ್ನಲ್ಲೇ ಅಕ್ಷಯ್ ಕರ್ನೇವಾರ್ 12ರನ್ಗೆ ಇನ್ನಿಂಗ್ಸ್ ಮುಗಿಸಿದ್ರು.
ವಾಂಖಡೆ 26 ಎಸೆತಗಳಲ್ಲಿ 36ರನ್ ಕಲೆಹಾಕಿ ತಂಡಕ್ಕೆ ಆಧಾರವಾದ್ರೆ, ಜಿತೇಶ್ ಶರ್ಮಾ ಕೇವಲ 24 ಎಸೆತಗಳಲ್ಲಿ 46ರನ್ ಕಲೆಹಾಕುವ ಮೂಲಕ ಮಿಂಚಿದರು. ಈ ಮೂಲಕ 7 ವಿಕೆಟ್ಗಳನ್ನ ಕಳೆದುಕೊಂಡು ವಿದರ್ಭ 164ರನ್ ಕಲೆಹಾಕಿತು.
ಮುಂಬೈ ಪರ ಶಮ್ಸ್ ಮುಲಾನಿ 3, ತುಷಾರ್ ದೇಶಪಾಂಡೆ ಹಾಗೂ ಶಿವಂ ದುಬೆ ತಲಾ 2 ವಿಕೆಟ್ ಪಡೆದರು.
ಫೈನಲ್ ಪ್ರವೇಶ ಪಡೆದಿರುವ ಮುಂಬೈ ತಂಡವು ಇದೇ ಭಾನುವಾರ (ನ.5) ಹಿಮಾಚಲ ಪ್ರದೇಶ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ದು, ಫೈನಲ್ ಕೂಡ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿಯೇ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಪಂದ್ಯ ನಡೆಯಲಿದೆ.