
ಈ ಬಾರಿಯ ಹರಾಜಿಗೂ ಸನ್ರೈಸರ್ಸ್ ಹೈದರಾಬಾದ್ ತಂಡ ತನ್ನ ನಾಯಕನಾಗಿದ್ದ ಕೇನ್ ವಿಲಿಯಮ್ಸನ್ ಅವರನ್ನೇ ಬಿಡುಗಡೆಗೊಳಿಸಿತ್ತು. ಹೀಗಾಗಿ 2023ರ ಆವೃತ್ತಿಗೆ ಎಸ್ಆರ್ಹೆಚ್ ತಂಡವನ್ನು ಮುನ್ನಡೆಸುವವರು ಯಾರು ಎಂಬುದು ಈಗ ಕುತೂಹಲಕಾರಿ ಪ್ರಶ್ನೆಯಾಗಿದೆ. ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಬಾರಿಯ ಮಿನಿ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಹೀಗಾಗಿ ಮಯಾಂಕ್ ಅಗರ್ವಾಲ್ ಎಸ್ಆರ್ಹೆಚ್ ತಂಡದ ನಾಯಕನಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಆದರೆ ಆಕಾಶ್ ಚೋಪ್ರ ಪ್ರಕಾರ ಮಯಾಂಕ್ ಅಗರ್ವಾಲ್ ಬದಲಿಗೆ ಸನ್ರೈಸರ್ಸ್ ಹೈದರಾಬಾದ್ ತಂಡ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಬೇಕು ಎಂದಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ಮಯಾಂಕ್ ಅಗರ್ವಾಲ್ ಅವರಿಗಿಂತ ಭುವನೇಶ್ವರ್ ಅವರನ್ನು ಎಸ್ಆರ್ಹೆಚ್ ನಾಯಕನನ್ನಾಗಿ ಮಾಡಬೇಕು ಎಂದು ಹೇಳಿದ್ದಾರೆ. "ಸನ್ರೈಸರ್ಸ್ ಭುವನೇಶ್ವರ್ ಕುಮಾರ್ ಅವರನ್ನು ನಾಯಕನನ್ನಾಗಿ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಮಯಾಂಕ್ ಅಗರ್ವಾಲ್ ಹೈದರಾಬಾದ್ಗೆ ಸೇರ್ಪಡೆಯಾಗಿದ್ದು ನಾಯಕತ್ವದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ ನಿಜ. ಆದರೆ ನಾನು ಆತನನ್ನು ನಾಯಕತ್ವಕ್ಕೆ ಆಯ್ಕೆ ಮಾಡುವುದು ಬೇಡ, ಯಾಕೆಂದರೆ ಆತ ಅದ್ಭುತವಾಗಿ ಆಡುತ್ತಾರೆ ಆದರೆ ನಾಯಕನಾಗಿ ತಂಡವನ್ನು ಮುನ್ನಡೆಸಿದಾಗ ಉತ್ತಮ ಪ್ರದರ್ಶನ ಬಂದಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.
ಮುಂದುವರಿದು ಮಾತನಾಡಿದ ಚೋಪ್ರ "ಮುಂಬರುವ ಋತುವಿಗಾಗಿ ಸನ್ರೈಸರ್ಸ್ ತಂಡ ಉತ್ತಮ ತಂಡವನ್ನು ಸಿದ್ಧಪಡಿಸಿದೆ, ತಮ್ಮ ತಂಡದಲ್ಲಿ ಪ್ರಭಾವಿ ಆಟಗಾರರನ್ನು ಹೊಂದಿದ್ದಾರೆ. ತಮ್ಮಲ್ಲಿದ್ದ ಮೊತ್ತವನ್ನು ಸನ್ರೈಸರ್ಸ್ ಹೈದರಾಬಾದ್ ಅತ್ಯಂತ ಪರಿಣಾಮಕಾರಿಯಾಗಿ ವ್ಯಯಿಸಿದೆ" ಎಂದಿದ್ದಾರೆ ಆಕಾಶ್ ಚೋಪ್ರ.
ಬಳಿಕ ಆಕಾಶ್ ಚೋಪ್ರ, ಸನ್ರೈಸರ್ಸ್ ಹೈದರಾಬಾದ್ಗೆ ಸಿಗದ ಏಕೈಕ ಆಟಗಾರ ಎಂದರೆ ಅದು ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಮಾತ್ರ ಎಂದಿದ್ದಾರೆ. ಆತನನ್ನು ನಾಯಕತ್ವಕ್ಕೆ ಪರ್ಯಾಯ ಎಂದು ಭಾವಿಸದ ಕಾರಣ ಸ್ಟೋಕ್ಸ್ ಅವರನ್ನು ಪಡೆಯಲು ಸಾಧ್ಯವಾಗದಿದ್ದರೂ ಹಿನ್ನಡೆಯೇನಲ್ಲ ಎಂದಿದ್ದಾರೆ ಆಕಾಶ್ ಚೋಪ್ರ.
"ಸನ್ರೈಸರ್ಸ್ ಹೈದರಾಬಾದ್ ತಂಡ ಈಗ ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿಯನ್ನು ಹೊಂದಿದ್ದಾರೆ. ಹೀಗಾಗಿ ಅವರು ಅಗ್ರ ಮೂರು ಕ್ರಮಾಂಕಕ್ಕೆ ಬೆನ್ ಸ್ಟೋಕ್ಸ್ಗೆ ಸ್ಥಾನ ನೀಡಲು ಸಾಧ್ಯವಿಲ್ಲ ಎಂಬುದನ್ನು ಸಾಧಿಸಿದ್ದಾರೆ. ಉಳಿದ ಮೂರು ಸ್ಥಾನಗಳಿಗೆ ನೀವು ವಿದೇಶಿ ಆಟಗಾರರಿಗೆ ಅವಕಾಶ ನೀಡಬಹುದು" ಎಂದಿದ್ದಾರೆ ಆಕಾಶ್ ಚೋಪ್ರ.
ಸನ್ರೈಸರ್ಸ್ ಹೈದರಾಬಾದ್ ಸಂಪೂರ್ಣ ಸ್ಕ್ವಾಡ್ ಹೀಗಿದೆ: ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್, ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಆದಿಲ್ ರಶೀದ್, ಮಯಾಂಕ್ ಮಾರ್ಕಾಂಡೆ, ವಿವ್ರಾಂತ್ ಶರ್ಮಾ, ಸಮರ್ಥ ವ್ಯಾಸ್, ಸನ್ವಿರ್ ಸಿಂಗ್ , ಉಪೇಂದ್ರ ಸಿಂಗ್ ಯಾದವ್, ಮಯಾಂಕ್ ದಾಗರ್, ನಿತೀಶ್ ಕುಮಾರ್ ರೆಡ್ಡಿ, ಅಕೇಲ್ ಹೊಸೈನ್, ಅನ್ಮೋಲ್ಪ್ರೀತ್ ಸಿಂಗ್