ಚೇತೇಶ್ವರ್ ಪೂಜಾರ ಸ್ಥಾನ ತುಂಬಬಲ್ಲ ಆಟಗಾರನ ಹೆಸರು ಸೂಚಿಸಿದ ಸಲ್ಮಾನ್ ಬಟ್

ಬೆಂಗಳೂರು, ಆಗಸ್ಟ್ 14: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿಯೂ ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಕಳಪೆ ಫಾರ್ಮ್ ಮುಂದುವರಿದಿದೆ. ಭಾರತದ ಅನುಭವಿ ಆಟಗಾರ ಪೂಜಾರ ಇತ್ತೀಚಿನ ದಿನಗಳಲ್ಲಿ ನೀಡುತ್ತಿರುವ ಕೆಟ್ಟ ಪ್ರದರ್ಶನ ಈಗ ಅವರ ಸ್ಥಾನಕ್ಕೆ ಕುತ್ತು ತರುವಂತಿದೆ. ಪೂಜಾರ ಬದಲಿಗೆ ಬೇರೆ ಯಾರಾದರೂ ಹೊಸ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಈ ಚರ್ಚೆಗೆ ಭಾರತ ಮಾತ್ರವಲ್ಲದೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಬದಲಿಗೆ ಯುವ ಆಟಗಾರನೊಬ್ಬನಿಗೆ ಆ ಅವಕಾಶವನ್ನು ನೀಡುವುದು ಸೂಕ್ತ ಎಂದಿದ್ದಾರೆ. ಇತ್ತೀಚೆಗಷ್ಟೇ ಟೀಮ್ ಇಂಡಿಯಾದ ಸೀಮಿತ ಓವರ್ಗಳ ತಂಡಕ್ಕೆ ಸೇರ್ಪಡೆಯಾಗಿ ಭರವಸೆಯ ಪ್ರದರ್ಶನ ನೀಡಿ ಮಿಂಚಿತ್ತಿರುವ ಸೂರ್ಯಕುಮಾರ್ ಯಾದವ್ ಟೆಸ್ಟ್ ಕ್ರಿಕೆಟ್ನಲ್ಲಿ ಚೇತೇಶ್ವರ್ ಪೂಜಾರ ಸ್ಥಾನಕ್ಕೆ ಅತ್ಯಂತ ಸೂಕ್ತವಾದ ಆಟಗಾರ ಎಂಬ ಮಾತನ್ನು ಸಲ್ಮಾನ್ ಬಟ್ ಹೇಳಿದ್ದಾರೆ.
ಹಾಗಿದ್ದರೂ ಕೂಡ ಚೇತೇಶ್ವರ್ ಪೂಜಾರ ಅವರ ಸ್ಥಾನವನ್ನು ತುಂಬುವುದು ಯುವ ಆಟಗಾರರಿಗೆ ಸುಲಭದ ಮಾತಲ್ಲ ಎಂಬ ಅಭಿಪ್ರಾಯವನ್ನು ಕೂಡ ಸಲ್ಮಾನ್ ಬಟ್ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ತಂಡದ ಬೌಲಿಂಗ್ ಸಾಮರ್ಥ್ಯ ಹಾಗೂ ಅಲ್ಲಿನ ಪರಿಸ್ಥಿತಿಯ ಕಾರಣದಿಂದಾಗಿ ಯಾವುದೇ ಹೊಸ ಆಟಗಾರನಿಗೆ ಅತ್ಯಂತ ಕಠಿಣ ಸವಾಲಾಗಿರಲಿದೆ ಎಂಬ ಮಾತನ್ನು ಸಲ್ಮಾನ್ ಬಟ್ ಹೇಳಿದ್ದಾರೆ.

ಪೂಜಾರ ಸತತ ವೈಫಲ್ಯ
ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನುಂಗ್ಸ್ನಲ್ಲಿ ಪೂಜಾರ ವೈಫಲ್ಯವನ್ನು ಅನುಭವಿಸುವ ಮುನ್ನ ಇಂಗ್ಲೆಂಡ್ ವಿರುದ್ಧದ ನಾಟಿಂಗ್ಹ್ಯಾಮ್ ಟೆಸ್ಟ್ ಪಂದ್ಯದಲ್ಲಿಯೂ ವಿಫಲರಾಗಿದ್ದರು. ಇನ್ನು ಕಳೆದ ಜೂನ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿಯೂ ಪೂಜಾರ ಕೇವಲ 4 ರನ್ ಹಾಗೂ 12 ರನ್ಗಳಿಸಲಷ್ಟೇ ಶಕ್ತವಾಗಿದ್ದರು. ಪಾದದ ಚಲನೆಯಲ್ಲಿ ಸತತವಾಗಿ ಎಡವುತ್ತಿರುವ ಪೂಜಾರ ನಿರಂತರವಾಗಿ ಎಡ್ಜ್ ಆಗುವ ಮೂಲಕ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಪೂಜಾರ ಫಾರ್ಮ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ.

ನಾಯಕ, ಕೋಚ್ ಮೇಲೆ ಅವಲಂಬಿತ
"ಪೂಜಾರ ಬ್ಯಾಟಿಂಗ್ ನಡೆಸಲು ಕಷ್ಟಪಡುತ್ತಿದ್ದಾರೆ. ಇಂಗ್ಲೆಂಡ್ ಪರಿಸ್ಥಿತಿ ಕೂಡ ತುಂಬಾ ಕಠಿಣವಾಗಿದೆ. ಟೀಮ್ ಇಂಡಿಯಾ ಬಯಸಿದರೆ ಈ ಅವಕಾಶವನ್ನು ಸೂರ್ಯಕುಮಾರ್ ಯಾದವ್ಗೆ ನೀಡಬಹುದು. ಆದರೆ ಇದೆಲ್ಲವೂ ಕೂಡ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಹೇಗೆ ಯೋಚಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಈವರೆಗೆ ಮೂರು ಇನ್ನಿಂಗ್ಸ್ಗಳನ್ನು ಆಡಲಾಗಿದೆ. ನನ್ನ ಪ್ರಕಾರ ಯುವ ಆಟಗಾರನನ್ನು ಇಂತಾ ಕಠಿಣ ಪರಿಸ್ಥಿತಿಯಲ್ಲಿ ಆಡಿಸುವುದು ಕಷ್ಟ. ಆತನ ಪಾಲಿಗೆ ಇದು ನಿಜಕ್ಕೂ ಅಗ್ನಿ ಪರೀಕ್ಷೆಯಾಗಿರಲಿದೆ. ಮತ್ತೊಂದೆಡೆ ಪೂಜಾರ ತುಂಬಾ ನಂಬಿಕಸ್ತ ಬ್ಯಾಟ್ಸ್ಮನ್ ಆಗಿದ್ದಾರೆ. ಇಂತಾ ಪರಿಸ್ಥಿತಿಯಲ್ಲಿ ಅವರು ಇದಕ್ಕೂ ಮೊದಲು ಉತ್ತಮ ಪ್ರದರ್ಶನ ನೀಡಿದ್ದಾರೆ. ಈವರೆಗಿನ ಆಟದಲ್ಲಿ ಅವರು ವಿಫಲವಾಗಿರಬಹುದು. ಆದರೆ ಆತನಿಗೆ ಮತ್ತೊಂದು ಟೆಸ್ಟ್ನಲ್ಲಿ ಅವಕಾಶ ನೀಡುವುದು ಸೂಕ್ತ" ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

ಪೂಜಾರ, ರಹಾನೆ ಇಬ್ಬರೂ ಉತ್ತಮ ದರ್ಜೆಯ ಆಟಗಾರರು
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಉಪನಾಯಕ ಅಜಿಂಕ್ಯ ರಹಾನೆ ಕೂಡ ರನ್ಗಳಿಸಲು ವಿಫಲವಾಗಿದ್ದಾರೆ. ಈ ಇಬ್ಬರು ಕೂಡ ಹಲವಾರು ಇನ್ನಿಂಗ್ಸ್ಗಳಲ್ಲಿ ಉತ್ತಮ ರನ್ಗಳಿಸಲು ವಿಫಲವಾಗುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಆಟಗಾರರ ಬಗ್ಗೆಯೂ ಸಲ್ಮಾನ್ ಬಟ್ ಪ್ರತಿಕ್ರಿಯಿಸಿದ್ದಾರೆ. "ಪೂಜಾರ ಹಾಗೂ ರಹಾನೆ ಇನ್ನರು ಕೂಡ ಭಾರತ ತಂಡದ ಅಗ್ರ ಬ್ಯಾಟ್ಸ್ಮನ್ಗಳು. ಬೇಸರದ ಸಂಗತಿಯೆಂದರೆ ಇಬ್ಬರು ಕೂಡ ಉತ್ತಮ ಫಾರ್ಮ್ನಲ್ಲಿಲ್ಲ. ಇದು ಕೇವಲ ಸರಣಿಯ ಎರಡನೇ ಪಂದ್ಯವಾಗಿರುವುದರಿಂದ ಸರಣಿಯ ಮಧ್ಯದಲ್ಲಿ ಆಟಗಾರರನ್ನು ಕೈಬಿಟ್ಟರೆ ಈ ಆಟಗಾರರ ಮೇಲೆ ಹಾಗೂ ಆಡುವ ಬಳಗದಲ್ಲಿ ಸೇರ್ಪಡೆಯಾಗುವ ಆಟಗಾರರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇಂಗ್ಲೀಷ್ ಪರಿಸ್ಥಿತಿಯಲ್ಲಿ ಹೊಸ ಆಟಗಾರ ಕಣಕ್ಕಿಳಿದು ಬ್ಯಾಟಿಂಗ್ ನಡೆಸುವುದು ಸುಲಭದ ಮಾತಲ್ಲ. ಅವರು ಈಗ ಮೂರು ಇನ್ನಿಂಗ್ಸ್ ಆಡಿದ್ದಾರೆ. ನನ್ನ ಪ್ರಕಾರ ಅವರ ಬದಲಿಗೆ ಬೇರೆಯವರನ್ನು ಸೇರ್ಪಡೆಗೊಳಿಸುವುದು ತುಂಬಾ ಆತುರದ ನಿರ್ಧಾರವಾಗುತ್ತದೆ" ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications