ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಸಚಿನ್ ಮತ್ತು ಗಂಗೂಲಿ ರೀತಿಯ ಆಟಗಾರರಲ್ಲ: ಕಪಿಲ್ ದೇವ್

ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸರಣಿಯ 4 ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿದ್ದು ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಅತ್ತ ಸರಣಿಯಲ್ಲಿ ಹಿನ್ನಡೆಯನ್ನು ಅನುಭವಿಸಿರುವ ಇಂಗ್ಲೆಂಡ್ ಭಾರತ ವಿರುದ್ಧ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯನ್ನು ಡ್ರಾ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ.
ಇದರ ನಡುವೆಯೇ ಸೆಪ್ಟೆಂಬರ್ 8ರ ಬುಧವಾರದಂದು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಎಂಎಸ್ ಧೋನಿ ಅವರನ್ನು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಮಾರ್ಗದರ್ಶಕರಾಗಿ ಕೂಡ ಆಯ್ಕೆ ಮಾಡಲಾಗಿದೆ. ಹೀಗೆ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದ ನಂತರ ಆಯ್ಕೆಯಾಗಿರುವ ವಿವಿಧ ಆಟಗಾರರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಕೆಲ ಪ್ರಮುಖ ಆಲ್ ರೌಂಡರ್ ಮತ್ತು ಬೌಲರ್ಗಳನ್ನು ತಂಡದಲ್ಲಿ ಆಯ್ಕೆ ಮಾಡದೇ ಇರುವುದು ಕೂಡ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಹೀಗೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದ ಕುರಿತು ಮಾತನಾಡಿರುವ ಭಾರತದ ಮಾಜಿ ನಾಯಕ ಕಪಿಲ್ ದೇವ್ ಟೀಮ್ ಇಂಡಿಯಾ ಆಯ್ಕೆಗಾರರಿಗೆ ಕೆಲವೊಂದಿಷ್ಟು ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ. ಟೀಮ್ ಇಂಡಿಯಾ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ಆಲ್ ರೌಂಡರ್ ಆಟಗಾರರ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿರುವ ಭಾರತದ ಮಾಜಿ ನಾಯಕ ಕಪಿಲ್ ದೇವ್ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ..

ತಂಡದಲ್ಲಿ ಹೆಚ್ಚಿನ ಆಲ್ ರೌಂಡರ್ ಆಟಗಾರರಿಗೆ ಅವಕಾಶ ನೀಡಬೇಕು
ಟೀಮ್ ಇಂಡಿಯಾ ತಂಡ ಇನ್ನಷ್ಟು ಬಲಿಷ್ಠವಾಗಬೇಕೆಂದರೆ ಹೆಚ್ಚು ಹೆಚ್ಚು ಆಲ್ ರೌಂಡರ್ ಆಟಗಾರರಿಗೆ ಅವಕಾಶವನ್ನು ನೀಡಬೇಕು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ. ಒಂದು ತಂಡ ಯಶಸ್ವಿಯಾಗಿ ಪಂದ್ಯವನ್ನು ಗೆಲ್ಲುವಲ್ಲಿ ಆಲ್ ರೌಂಡರ್ ಆಟಗಾರರ ಪಾತ್ರ ಪ್ರಮುಖವಾಗಿರುತ್ತದೆ. ಹೀಗಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡನ್ನೂ ಬಲ್ಲ ಆಟಗಾರರಿಗೆ ತಂಡದಲ್ಲಿ ಪ್ರಾಶಸ್ತ್ಯವನ್ನು ನೀಡಬೇಕೆಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ. ತಂಡದಲ್ಲಿ ಇಬ್ಬರು ಆಲ್ ರೌಂಡರ್ ಆಟಗಾರರಿದ್ದಾಗ ಒಬ್ಬ ಆಲ್ ರೌಂಡರ್ ಆಟಗಾರ ಗಾಯದ ಸಮಸ್ಯೆಗೊಳಗಾದರೆ ಮತ್ತೊಬ್ಬ ಆಲ್ ರೌಂಡರ್ ಆಟವಾಡುತ್ತಾನೆ. ಆದರೆ ಒಂದೇ ಸಮಯದಲ್ಲಿ ಇಬ್ಬರೂ ಆಲ್ ರೌಂಡರ್ ಆಟಗಾರರೂ ಕೂಡ ಗಾಯದ ಸಮಸ್ಯೆಗೊಳಗಾದಾಗ ತಂಡ ಇಕ್ಕಟ್ಟಿಗೆ ಸಿಲುಕಿ ನಾಯಕನ ಮೇಲೆ ಒತ್ತಡ ಹೆಚ್ಚಾಗಲಿದೆ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಬೌಲಿಂಗ್ ಬರಲ್ಲ
ತಂಡದಲ್ಲಿ ಹೆಚ್ಚಿನ ಆಲ್ ರೌಂಡರ್ ಆಟಗಾರರಿಗೆ ಅವಕಾಶವನ್ನು ನೀಡಬೇಕೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಕಪಿಲ್ ದೇವ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೊತೆ ಹೋಲಿಕೆ ಮಾಡಿದ್ದಾರೆ. ತಂಡದಲ್ಲಿ ಇಬ್ಬರೂ ಆಲ್ ರೌಂಡರ್ ಆಟಗಾರರು ಗಾಯದ ಸಮಸ್ಯೆಗೆ ಒಳಗಾದಾಗ ಈ ಹಿಂದೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುತ್ತಿದ್ದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಕೆಲವೊಂದಿಷ್ಟು ಓವರ್ ಬೌಲಿಂಗ್ ಮಾಡುವುದರ ಮೂಲಕ ತಂಡದಲ್ಲಿ ಸಮತೋಲನವನ್ನು ತರುತ್ತಿದ್ದರು, ಆದರೆ ಈಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ತೆಂಡೂಲ್ಕರ್ ಹಾಗೂ ಗಂಗೂಲಿ ರೀತಿ ಬೌಲಿಂಗ್ ಬರುವುದಿಲ್ಲ ಹೀಗಾಗಿ ಹೆಚ್ಚಿನ ಆಲ್ ರೌಂಡರ್ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲೇಬೇಕಾದ ಅಗತ್ಯತೆ ಇದೆ ಎಂದು ಕಪಿಲ್ ದೇವ್ ಸಲಹೆ ನೀಡಿದ್ದಾರೆ.

ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡ ಈ ಕೆಳಕಂಡಂತಿದೆ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ , ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications