ಸೆಪ್ಟೆಂಬರ್ 14ರ ಮಂಗಳವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು, ಒಂದೆಡೆ ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಲಸಿತ್ ಮಾಲಿಂಗ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಮತ್ತೊಂದೆಡೆ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯುತ್ತಿರುವ ಟಿ ಟ್ವೆಂಟಿ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿ ಸಾಧನೆ ಮಾಡಿದೆ. ಹೀಗೆ ಸೆಪ್ಟೆಂಬರ್ 14ರ ಮಂಗಳವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಘಟನೆಗಳು ನಡೆದಿದ್ದು ಅವುಗಳ ಕಿರುನೋಟ ಈ ಕೆಳಕಂಡಂತಿದೆ ನೋಡಿ..
* ಸೆಪ್ಟೆಂಬರ್ 19ರಿಂದ ಮುಂದುವರಿಯಲಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಲು ಎಲ್ಲಾ ತಂಡದ ಆಟಗಾರರು ಈಗಾಗಲೇ ದುಬೈ ತಲುಪಿದ್ದು ತರಬೇತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೀಗೆ ಕ್ರಿಕೆಟ್ ತರಬೇತಿ ನೀಡುವುದರ ನಡುವೆ ಆಟಗಾರರಿಗೆ ಮನರಂಜನೆಯನ್ನು ನೀಡುವ ಉದ್ದೇಶದಿಂದ ಪಂಜಾಬ್ ಕಿಂಗ್ಸ್ ಸಂಜೆ ಸಮಯದ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಹೀಗೆ ದುಬೈ ನೆಲದಲ್ಲಿ ಮನರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಂಜಾಬ್ ಕಿಂಗ್ಸ್ ತಂಡದ ಹೆಡ್ ಕೋಚ್ ಅನಿಲ್ ಕುಂಬ್ಳೆ ಕನ್ನಡದ ಖ್ಯಾತ ಚಲನಚಿತ್ರ ಗೀತೆಯಾದ 'ಮಾಮರವೆಲ್ಲೋ ಕೋಗಿಲೆಯೆಲ್ಲೋ' ಹಾಡನ್ನು ಹಾಡುವುದರ ಮೂಲಕ ತಮ್ಮ ತಂಡದ ಆಟಗಾರರಿಗೆ ಮನರಂಜನೆಯನ್ನು ನೀಡಿದ್ದಾರೆ.
* ಭಾರತೀಯ ಕ್ರಿಕೆಟ್ ತಂಡ ನೀಡುತ್ತಿರುವ ಅತ್ಯುತ್ತಮ ಪ್ರದರ್ಶನ ಮುಂದುವರಿಯುವವರೆಗೂ ತಂಡದ ನಾಯಕತ್ವದಲ್ಲಿ ಬದಲಾವಣೆ ಮಾಡುವ ಯಾವ ಯೋಚನೆಗಳು ಕೂಡ ಇಲ್ಲ ಎಂದಿದ್ದಾರೆ ಜಯ್ ಶಾ. ಇಂಡಿಯನ್ ಎಕ್ಸ್ಪ್ರೆಸ್ಗೆ ಪ್ರತಿಕ್ರಿಯೆ ನೀಡಿರುವ ಜಯ್ ಶಾ "ಮೈದಾನದಲ್ಲಿ ಭಾರತೀಯ ಕ್ರಿಕೆಟ್ ತಂಡ ಎಷ್ಟು ಸುದೀರ್ಘ ಕಾಲ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸುತ್ತದೋ ಅಲ್ಲಿಯವರೆಗೆ ನಾಯಕತ್ವ ಬದಲಾವಣೆಯ ಪ್ರಶ್ನೆಗಳು ಬರುವುದಿಲ್ಲ" ಎಂದಿದ್ದಾರೆ.
* ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಎರಡು ಹೆಚ್ಚುವರಿ ತಂಡಗಳನ್ನು ಸೇರಿಸುವ ಪ್ರಕ್ರಿಯೆ ಮುಂದಿನ ತಿಂಗಳಿನಿಂದ ಶುರುವಾಗಲಿದೆ. ಐಪಿಎಲ್ 2021ರ ದ್ವಿತೀಯ ಹಂತದ ಆವೃತ್ತಿ ಮುಕ್ತಾಯವಾದ ಬಳಿಕ ಅಂದರೆ ಅಕ್ಟೋಬರ್ 17ಕ್ಕೆ ಐಪಿಎಲ್ ನೂತನ ಎರಡು ಫ್ರಾಂಚೈಸಿಗಳಿಗಾಗಿ ಹರಾಜು ನಡೆಯಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮಾಹಿತಿ ನೀಡಿದೆ.
* ಯುಎಇಯಲ್ಲಿ ಮುಂದುವರೆಯಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿದ ಶ್ರೀಲಂಕಾದ ಆಟಗಾರ ವನಿಂದು ಹಸರಂಗ ಮೇಲೆ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ತನ್ನ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಒಳ್ಳೆಯ ಹೆಸರು ಮಾಡಿರುವ ವನಿಂದು ಹಸರಂಗಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸುವುದರ ಮೂಲಕ ವಿರಾಟ್ ಕೊಹ್ಲಿ ಸರ್ಪ್ರೈಸ್ ನೀಡಿದ್ದಾರೆ. ಆದಷ್ಟು ಬೇಗ ತಂಡದಲ್ಲಿ ನಿಮ್ಮನ್ನು ಹೊಂದಲು ಇಷ್ಟಪಡುತ್ತೇನೆ ಎಂದು ವಿರಾಟ್ ಕೊಹ್ಲಿ ಕಳುಹಿಸಿದ ಸಂದೇಶವನ್ನು ಕಂಡ ವನಿಂದು ಹಸರಂಗ ಖುಷಿ ಮತ್ತು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ವನಿಂದು ಹಸರಂಗ ನಿರತರಾಗಿದ್ದು ಆದಷ್ಟು ಬೇಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳಲಿದ್ದಾರೆ.
* ಶ್ರೀಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್ ಮತ್ತು ಏಕದಿನಕ್ಕೆ ನಿವೃತ್ತಿ ಘೋಷಿಸಿದ್ದ ಲಸಿತ್ ಮಾಲಿಂಗ ಟಿ20 ಮಾದರಿಯಲ್ಲಿ ಮಾತ್ರ ಆಡುತ್ತಿದ್ದರು. ಆದರೆ ವಿಶ್ವಕಪ್ಗಾಗಿ ಪ್ರಕಟಿತ ಶ್ರೀಲಂಕಾ ತಂಡದಲ್ಲಿ ತನ್ನ ಹೆಸರು ಇಲ್ಲದಿದ್ದ ಕಾರಣಕ್ಕೋ ಏನೋ ಮಾಲಿಂಗ ಕ್ರಿಕೆಟ್ ವೃತ್ತಿ ಬದುಕಿಗೆ ಕೊನೆ ಹಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾಲಿಂಗ 546 ವಿಕೆಟ್ ದಾಖಲೆ ಹೊಂದಿದ್ದಾರೆ.
* ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳು ಟಿ20 ಸರಣಿಯಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಮುಖಾಮುಖಿಯಾಲ್ಲಿಯೂ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಮೂರನೇ ಪಂದ್ಯವನ್ನು ಕೂಡ ಗೆದ್ದು ಬೀಗಿದೆ. ಅಂತಿಮ ಪಂದ್ಯವನ್ನಾದರೂ ಗೆದ್ದು ವೈಟ್ವಾಶ್ ಅವಮಾನದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟ ಶ್ರೀಲಂಕಾ ಅದರಲ್ಲಿ ವಿಫಲವಾಗಿದ್ದು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸರಣಿಯನ್ನು 0-3 ಅಂತರದಿಂದ ಒಪ್ಪಿಸಿದೆ.