|
ಟ್ವಿಟ್ಟರ್ನಲ್ಲಿ ದೊಡ್ಡ ಗಣೇಶ್ ಕಿಡಿ
ಆರ್ಸಿಬಿ ಹರಾಜಿನಲಿ ಮತ್ತೊಮ್ಮೆ ಕನ್ನಡಿಗರನ್ನು ನಿರ್ಲಕ್ಷ್ಯ ಮಾಡಿರುವ ವಿಚಾರವಾಗಿ ದೊಡ್ಡ ಗಣೇಶ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. "ಆರ್ಸಿಬಿ ಯಾವ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ಕರ್ನಾಟಕದ ಆಟಗಾರರನ್ನು ಬಿಡ್ ಮಾಡುವುದಿಲ್ಲ? ಅವರು ಮನೀಶ್, ಮನೋಹರ್ ಮತ್ತು ಪ್ರಸಿದ್ಧ್ ಅವರಂಥಾ ಆಟಗಾರರ ಮೇಲೆ ಕೂಡ ಬಿಡ್ ಮಾಡಲು ಬಯಸುತ್ತಿಲ್ಲ ಎಂದರೆ ಅದು ಗಂಭೀರ ವಿಚಾರವಾಗಿದೆ. ದಶಕಗಳಿಂದಲೂ ಇದು ನಡೆದುಕೊಂಡೇ ಬರುತ್ತಿದೆ. ಇದು ವಿಪರ್ಯಾಸ" ಎಂದಿದ್ದಾರೆ ದೊಡ್ಡ ಗಣೇಶ್.
ಬೆಂಗಳೂರು ಮೂಲದ ಫ್ರಾಂಚೈಸಿಯಲ್ಲಿ ಕೇವಲ ಒಬ್ಬ ಕನ್ನಡಿಗ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳುರು ಮೂಲದ ಫ್ರಾಂಚೈಸಿ ಎಂಬ ಕಾರಣಕ್ಕಾಗಿ ಕೋಟ್ಯಂತರ ಕನ್ನಡಿಗರು ಆರ್ಸಿಬಿ ತಂಡವನ್ನು ಅತ್ಯಂತ ಅಭಿಮಾನದಿಂದ ಕಾಣುತ್ತಿದ್ದಾರೆ. ಒಂದೂವರೆ ದಶಕಗಳಿಂದ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ಅಭಿಮಾನಿಗಳ ಆರ್ಸಿಬಿ ತಂಡದ ಮೇಲಿನ ಪ್ರೀತಿ ಎಳ್ಳಷ್ಟೂ ಕಡಿಮೆಯಾಗಿಲ್ಲ. ಆದರೆ ಆರ್ಸಿಬಿ ಅಭಿಮಾನಿಗಳ ಭಾವನೆಗೆ ಆರ್ಸಿಬಿ ಫ್ರಾಂಚೈಸಿ ಪದೇ ಪದೇ ಘಾಸಿ ಮಾಡುತ್ತಲೇ ಇದೆ. ನಿರಂತರವಾಗಿ ಕರ್ನಾಟಕ ಮೂಲದ ಆಟಗಾರರನ್ನು ನಿರ್ಲಕ್ಷ್ಯ ಮಾಡುತ್ತಾಲೇ ಬರುತ್ತಿದೆ ಆರ್ಸಿಬಿ. ಮುಂದಿನ ಆವೃತ್ತಿಗಾಗಿ ಆರ್ಸಿಬಿ ತಂಡದಲ್ಲಿ ಕೇವಲ ಓರ್ವ ಆಟಗಾರ ಮಾತ್ರವೇ ಇದ್ದಾರೆ ಎಂಬುದು ಅಚ್ಚರಿಯಾದರೂ ನಿಜ
ಮನೋಜ್ ಭಾಂಡಗೆ ಆರ್ಸಿಬಿಯ ಏಕೈಕ ಕನ್ನಡಿಗ ಆಟಗಾರ
ಈ ಬಾರಿಯ ಮಿನಿ ಹರಾಜಿನ ಬಳಿಕ ಆರ್ಸಿಬಿ ತಂಡದಲ್ಲಿರುವ ಕರ್ನಾಟಕ ಮೂಲದ ಏಕೈಕ ಆಟಗಾರ ಎಂದರೆ ಅದು ಮನೋಜ್ ಭಾಂಡಗೆ ಮಾತ್ರ. ಮೂಲ ಬೆಲೆ 20 ಲಕ್ಷ ರೂಪಾಯಿಗೆ ಆರ್ಸಿಬಿ ಮನೋಜ್ ಭಾಂಡಗೆ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ದೇಶೀಯ ಕ್ರಿಕೆಟ್ನ ಟಿ20 ಮಾದರಿಯಾಗಿರುವ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿರುವ ಭಾಂಡಗೆ ಬ್ಯಾಟಿಂಗ್ನ ಜೊತೆಗೆ ಬೌಲಿಂಗ್ನಲ್ಲಿಯೂ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಸ್ಟಾರ್ ಆಟಗಾರರನ್ನೇ ನೆಚ್ಚಿಕೊಂಡಿರುವ ಆರ್ಸಿಬಿ ಈ ಕನ್ನಡಿಗ ಆಟಗಾರನಿಗೆ ಆಡುವ ಬಳಗದಲ್ಲಿ ಕನಿಷ್ಠ ಒಂದು ಬಾರಿಯೂ ಅವಕಾಶ ನೀಡುವುದು ಅನುಮಾನ.
ಆರ್ಸಿಬಿ ತಂಡದ ಸಂಪೂರ್ಣ ಸ್ಕ್ವಾಡ್ ಹೀಗಿದೆ
ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ರಜತ್ ಪಾಟಿದಾರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್ವೆಲ್, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಶಹಬಾಜ್ ಅಹಮದ್, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜೋಶ್ ಹೇಜಲ್ವುಡ್, ಕರಣ್ ಶರ್ಮಾ, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ವಿಲ್ ಜಾಕ್ಸ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್