ಮುಂಬೈ, ಫೆಬ್ರವರಿ 07: ದಾಖಲೆಯ ನಾಲ್ಕನೇ ಬಾರಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ಭಾರತದ ಯುವ ಆಟಗಾರರು ತವರಿಗೆ ಮರಳಿದ್ದಾರೆ. ಟೂರ್ನಿಯುದ್ದಕ್ಕೂ ಗಮನ ಸೆಳೆದ ಬಲಗೈ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ಅವರು ತಮ್ಮ ವಿಶ್ವಕಪ್ ಗೆಲುವನ್ನು ಹಿರಿಯ ಆಟಗಾರ ಯುವರಾಜ್ ಸಿಂಗ್ ಅವರಿಗೆ ಅರ್ಪಿಸಿದ್ದಾರೆ.
'ನಾನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾಗ ಯುವಿ ಪಾಜಿ(ಯುವರಾಜ್ ಸಿಂಗ್) ನನಗೆ ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ. ಮೈದಾನದಲ್ಲಿ ಹಾಗೂ ಮೈದಾನದಿಂದಾಚೆಗೆ ಹೇಗಿರಬೇಕೆಂದು ಹೇಳಿಕೊಟ್ಟರು. ಜತೆಗೆ ಅವರು ನೀಡಿದ ಬ್ಯಾಟಿಂಗ್ ಸಲಹೆಗಳನ್ನು ಅಳವಡಿಸಿಕೊಂಡಿದ್ದರಿಂದ ಈ ಯಶಸ್ಸು ಸಾಧ್ಯವಾಯಿತು ಎಂದು ಗಿಲ್ ಹೇಳಿದ್ದಾರೆ.
ಗಿಲ್ ಅವರು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಶತಕ (102) ಬಾರಿಸುವ ಮೂಲಕ ತಂಡವು ಫೈನಲ್ ಹಂತಕ್ಕೇರಲು ನೆರವಾಗಿದ್ದರು.
18 ವರ್ಷದ ಬಲಗೈ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ಅವರು ಅಂಡರ್ 19 ವಿಶ್ವಕಪ್ ನಲ್ಲಿ 3 ಅರ್ಧಶತಕ ಹಾಗೂ ಒಂದು ಶತಕ ಬಾರಿಸಿ ಎಲ್ಲರ ಗಮನ ಸೆಳೆದರು. ಇಂಡಿಯನ್ ಪ್ರೀಮಿಯರ್ ಲೀಗ್ 11ನೇ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಲು ಆಯ್ಕೆಯಾಗಿದ್ದಾರೆ.
ಪಾಕಿಸ್ತಾನದ ಪಂದ್ಯದಲ್ಲಿ ಯಶಸ್ಸಿಗೆ ಕೋಚ್ ರಾಹುಲ್ ಅವರು ನೀಡಿದ ಟಿಪ್ಸ್ ಕಾರಣ. ವಿಕೆಟ್ ಒಪ್ಪಿಸದೆ ಇನ್ನಿಂಗ್ಸ್ ಕೊನೆ ತನಕ ವಿಕೆಟ್ ಕಾಯ್ದುಕೊಂಡಿರುವಂತೆ ಸೂಚಿಸಿದ್ದರು. ಅನುಕೂಲ್ ಅವರು ಉತ್ತಮ ಜೊತೆಯಾಟ ನೀಡಿದ್ದರಿಂದ ರನ್ ಗಳಿಸಲು ಸಾಧ್ಯವಾಯಿತು ಎಂದು ಗಿಲ್ ಪ್ರತಿಕ್ರಿಯಿಸಿದರು.(ಪಿಟಿಐ)