ಜೇಮ್ಷೆಡ್ಪುರ, ಫೆಬ್ರವರಿ 3: ರಾಯ್ ಕೃಷ್ಣ (2 ಮತ್ತು 75ನೇ ನಿಮಿಚ) ಮತ್ತು ಎಡು ಗಾರ್ಸಿಯಾ (59ನೇ ನಿಮಿಷ) ಗಳಿಸಿದ ಗೋಲಿನಿಂದ ಜೆಮ್ಷೆಡ್ಪುರ ಎಫ್ ಸಿ ತಂಡವನ್ನು 3-0 ಗೋಲಗಳ ಅಂತರದಲ್ಲಿ ಸೋಲಿಸಿದ ಎಟಿಕೆ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರಸ್ಥಾನಕ್ಕೇರಿತು. ಪ್ಲೇ ಆಫ್ ಹಂತ ತಲಪುವ ಜೆಮ್ಷೆಡ್ಪುರದ ಹಾದಿಗೆ ಮತ್ತೊಂದು ತಡೆಯಾಯಿತು.
2ನೇ ನಿಮಿಷದಲ್ಲಿ ಕೃಷ್ಣಾನುಗ್ರಹ!
ಎರಡು ಬಾರಿ ಚಾಂಪಿಯನ್ ಎಟಿಕೆ ತಂಡ ಈ ಬಾರಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಏರುವ ಗುರಿ ಹೋಂದಿದ್ದು, ಅದೇ ರೀತಿಯಲ್ಲಿ ದಿಟ್ಟ ಹೋರಾಟ ನೀಡಿದ ಎಟಿಕೆ 2ನೇ ನಿಮಿಷದಲ್ಲೇ ಯಶಸ್ಸು ಕಂಡಿತು. ರಾಯ್ ಕೃಷ್ಣ ಅವರು ಗಳಿಸಿದ ಗೋಲಿನಿಂದ ಎಟಿಕೆ ತಂಡ ಆರಂಭದಲ್ಲೇ ಮೇಲುಗೈ ಸಾಧಿಸಿತು, ಜೆಮ್ಷೆಡ್ಪುರ ತಂಡಕ್ಕೆ ಆರಂಭದಲ್ಲೇ ಆಘಾತ. ಸಂದೀಪ್ ಮಂಡಿ ಎಡಭಾಗದಲ್ಲಿ ದೊರಕಿದ ಚೆಂಡನ್ನು ಮೆಮೊ ಮೌರಾ ಅವರಿಗೆ ನೀಡುವವರಿದ್ದರು, ಆದರೆ ಪಾಸ್ ಮಾಡಿದ ಚೆಂಡು ಅನಿರೀಕ್ಷಿತವಾಗಿ ರಾಯ್ ಕೃಷ್ಣ ಅವರ ನಿಯಂತ್ರಣಕ್ಕೆ ಸಿಕ್ಕಿತು.
ರಾಯ್ ಕೃಷ್ಣ ಉತ್ತಮ ರೀತಿಯಲ್ಲಿ ಗೋಲು ಗಳಿಸಿ ತನ್ನ ಓಟ್ಟು ಗೋಲುಗಳ ಸಂಖ್ಯೆಯನ್ನಗ 9ಕ್ಕೆ ಕೊಂಡೊಯ್ದರು. ಮನೆಯಂಗಣದಲ್ಲಿ ಜೆಮ್ಷೆಡ್ಪುರ ತಂಡ ಉತ್ತಮ ರೀತಿಯಲ್ಲಿ ಹೋರಾಟ ನೀಡದ ಕಾರಣ, ಗೋಲ್ ಗಳಿಸಲು ಅವಕಾಶಗಳನ್ನು ನಿರ್ಮಿಸುವಲ್ಲಿ ವಿಫಲವಾದ ಕಾರಣ ಪ್ರಥಮಾರ್ಧ 1-0 ಗೋಲಿನಲ್ಲಿ ಅಂತ್ಯಗೊಂಡಿತು.
ಜಯವೊಂದೇ ಮಂತ್ರ
ಜೆಆರ್ ಡಿ ಟಾಟಾ ಅಂಗಣದಲ್ಲಿ ಜೆಮ್ಷೆಡ್ಪುರ ಎಫ್ ಸಿ ಬಲಿಷ್ಠ ಎಟಿಕೆ ತಂಡದ ವಿರುದ್ಧ ಇಂಡಿಯನ್ ಸೂಪರ್ ಲೀಗ್ ನ 73ನೇ ಪಂದ್ಯವನ್ನಾಡಲು ಅಂಗಣಕ್ಕಿಳಿದವು. ಇಲ್ಲಿ ಎಟಿಕೆ ತಂಡ ಗೆದ್ದರೆ ಅಗ್ರ ಸ್ಥಾನಕ್ಕೇರಲಿದೆ. ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಸೋಲು ಅನುಭವಿಸಿರುವ ಜೆಮ್ಷೆಡ್ಪುರ ತಂಡ ಉಳಿದಿರುವ ಐದು ಪಂದ್ಯಗಳಲ್ಲಿ ಸಾಧ್ಯವಾದಷ್ಟು ಜಯ ಗಳಿಸಿ ಪ್ನೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಆಶಯದೊಂದಿಗೆ ಅಂಗಣಕ್ಕಿಳಿಯಿತು.
ಗಾಯದಿಂದ ಚೇತರಿಸಿಕೊಂಡು ಬಂದ ಸರ್ಗಿಯೋ ಕ್ಯಾಸ್ಟಲ್ ಆಡಿರುವ ಎರಡು ಪಂದ್ಯಗಳಲ್ಲಿ ಎರಡು ಗೋಲು ಗಳಿಸಿರುತ್ತಾರೆ. ತಿರಿ ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಮಿಡ್ ಫೀಲ್ಡ್ ವಿಭಾಗದಲ್ಲಿ ಸಮರ್ಥ ಆಟಗಾರರಿಲ್ಲದಿರುವುದು ಚಿಂತೆಯ ವಿಚಾರವಾಗಿದೆ. ಚೆನ್ನೈ ವಿರುದ್ಧ 4-1 ಅಂತರದಲ್ಲಿ ಸೋತ ಬಳಿಕ ಟಾಟಾ ಪಡೆ ಮನೆಯಂಗಣದಲ್ಲಿ ಉತ್ತಮ ಪ್ರದರ್ಶನ ತೋರುವ ಗುರಿ ಹೊಂದಿದೆ.
ಉತ್ತಮ ರೀತಿಯ ಆರಂಭ ಕಂಡಿದ್ದ ಜೆಮ್ಷೆಡ್ಪುರ ಪರ ಫಾರೂಕ್ ಚೌಧರಿ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದು, ಇದುವರೆಗೂ ತಮ್ಮ ಹೆಸರಿನ ಮುಂದೆ ಕೇವಲ ಒಂದು ಗೋಲನ್ನು ದಾಖಲಿಸಿದ್ದಾರೆ.ಈಗಾಲೇ ಗೋವಾ ಮತ್ತು ಬೆಂಗಳುರು ಜತೆಯಲ್ಲಿ ಟಾಪ್ ನಾಲ್ಕರಲ್ಲಿ ಸ್ಥಾನ ಪಡೆದಿರುವ ಎಟಿಕೆ ಇಲ್ಲಿ ಜಯ ಗಳಿಸುವ ಮೂಲಕ ಅಗ್ರ ಸ್ಥಾನಕ್ಕೇರಿ ಎಎಫ್ ಸಿ ಚಾಂಪಿಯನ್ಸ್ ಲೀಗ್ ಗೆ ಅರ್ಹತೆ ಪಡೆಯುವ ಗುರಿ ಹೊಂದಿದೆ.