
ಚಿಕ್ಕಮಗಳೂರು, ಅಕ್ಟೋಬರ್ 1: ಕಾಫಿ ನಾಡು ಚಿಕ್ಕಮಗಳೂರಿನ ಹುಡುಗಿ ರಕ್ಷಿತಾ ರಾಜು ಅವರಿಗೆ 'ಇಂಡಿಯನ್ ಸ್ಪೋರ್ಟ್ಸ್ ಆನರ್ಸ್ ಅವಾರ್ಡ್' ಲಭಿಸಿದೆ. ಚಿತ್ರೋದ್ಯಮ, ಕ್ರಿಕೆಟ್ ಮತ್ತು ಅಥ್ಲೆಟಿಕ್ಸ್ನಲ್ಲಿ ಸಾಧನೆ ಮಾಡಿದವರಿಗೆ ನೀಡುವ ಪ್ರಶಸ್ತಿಯಿದು.
ಮುಂಬೈನಲ್ಲಿ ಸೆಪ್ಟೆಂಬರ್ 27ರಂದು ನಡೆದ ಈ ಬಾರಿಯ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪಾಲ್ಗೊಂಡಿದ್ದರು. ಏಷ್ಯಾ ಪ್ಯಾರಾ ಗೇಮ್ಸ್ನಲ್ಲಿ ಪಾಲ್ಗೊಂಡಿದ್ದ ರಕ್ಷಿತಾ, 1500 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಈ ಗೌರವ ಸ್ವೀಕರಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕುಡ್ನಹಳ್ಳಿಯವರಾದ ರಕ್ಷಿತಾ, ಚಿಕ್ಕಮಗಳೂರಿನ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ 10ನೇ ತರಗತಿ ಕಲಿಯುತ್ತಿದ್ದಾರೆ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರಕ್ಷಿತಾ ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಏಷ್ಯಾ ಪ್ಯಾರಾ ಗೇಮ್ಸ್ ಬಂಗಾರ ಗೆದ್ದಾಗ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಕನ್ನಡತಿಗೆ ಅಭಿನಂದಿಸಿದ್ದರು. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್, ಬಾಲಿವುಡ್ ಸ್ಟಾರ್ ನಟರಾದ ಅಮಿತಾಬ್ ಬಚ್ಚಬ್, ಪ್ರಿಯಾಂಕ ಚೋಪ್ರಾ, ರಸ್ಲರ್ ವಿನೇಶ್ ಫೋಗಟ್ ಮೊದಲಾದವರು ಪಾಲ್ಗೊಂಡಿದ್ದರು. ರಕ್ಷಿತಾ ಕೋಚ್ ರಾಹುಲ್ ಕೂಡ ಉಪಸ್ಥಿತರಿದ್ದರು.