ಈತ ಕಣಕ್ಕಿಳಿಯುವುದು ಅನುಮಾನ
ನಿನ್ನೆ ( ಸೆಪ್ಟೆಂಬರ್ 3 ) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಬೌಲರ್ ಆವೇಶ್ ಖಾನ್ ತುಸು ಅನಾರೋಗ್ಯಕ್ಕೊಳಗಾಗಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದರು. ಜ್ವರದಿಂದ ಬಳಲುತ್ತಿರುವ ಅವೇಶ್ ಖಾನ್ ಅಭ್ಯಾಸದಲ್ಲೂ ಸಹ ಭಾಗವಹಿಸಿಲ್ಲ ಹಾಗೂ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಚೇತರಿಸಿಕೊಂಡರೆ ಕಣಕ್ಕಿಳಿಯಲಿದ್ದಾರೆ, ಇಲ್ಲದಿದ್ದರೆ ನಂತರದ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ರಾಹುಲ್ ದ್ರಾವಿಡ್ ತಿಳಿಸಿದರು. ಈ ಮೂಲಕ ಆವೇಶ್ ಖಾನ್ ಪಾಕ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಅನುಮಾನ ಎಂಬ ಸೂಚನೆಯನ್ನು ರಾಹುಲ್ ದ್ರಾವಿಡ್ ಬಿಟ್ಟುಕೊಟ್ಟಿದ್ದಾರೆ.
ಸಂಭ್ರಮಿಸಿದ ಅಭಿಮಾನಿಗಳು
ಇನ್ನು ರಾಹುಲ್ ದ್ರಾವಿಡ್ ನೀಡಿದ ಈ ಹೇಳಿಕೆಯನ್ನು ಕೇಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ದುಬಾರಿ ಬೌಲಿಂಗ್ ಮಾಡುವ ಅವೇಶ್ ಖಾನ್ ಅಲಭ್ಯರಾದರೆ ಅದು ತಂಡಕ್ಕೆ ಅನುಕೂಲ ಎಂದು ಕೆಲವರು ಟ್ವೀಟ್ ಮಾಡಿದ್ದರೆ, ಇನ್ನೂ ಕೆಲವರು ದೀಪಕ್ ಚಹರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಟೀಮ್ ಇಂಡಿಯಾ ಮಾಡಿರುವ ಯೋಜನೆಯಿದು ಎಂದು ಟ್ರೋಲ್ ಮಾಡಿದ್ದಾರೆ. ಹೀಗೆ ಅವೇಶ್ ಖಾನ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎಂಬ ಸುದ್ದಿ ಅಭಿಮಾನಿಗಳಲ್ಲಿ ಬೇಸರಕ್ಕಿಂತ ಹೆಚ್ಚು ಸಂತಸವನ್ನೇ ಮೂಡಿಸಿದೆ.
ಟೂರ್ನಿಯಲ್ಲಿ ಅವೇಶ್ ಖಾನ್ ಕೆಟ್ಟ ಪ್ರದರ್ಶನ
ಇನ್ನು ಟೀಮ್ ಇಂಡಿಯಾದ ಪರ ಟೂರ್ನಿಯ ಗ್ರೂಪ್ ಹಂತದ ಎರಡೂ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವೇಶ್ ಖಾನ್ ನೀರಸ ಪ್ರದರ್ಶನ ನೀಡಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ 2 ಓವರ್ ಬೌಲಿಂಗ್ ಮಾಡಿ 1 ವಿಕೆಟ್ ಪಡೆದು 19 ರನ್ ನೀಡಿದ್ದ ಅವೇಶ್ ಖಾನ್ ತಮ್ಮ ಪಾಲಿನ ಸಂಪೂರ್ಣ 4 ಓವರ್ ಮಾಡುವ ಅವಕಾಶ ಪಡೆಯಲಿಲ್ಲ. ಹಾಗೂ ನಂತರ ನಡೆದ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ತಮ್ಮ ಪಾಲಿನ ಎಲ್ಲ 4 ಓವರ್ ಬೌಲಿಂಗ್ ಮಾಡಿದ ಅವೇಶ್ ಖಾನ್ ಕೇವಲ 1 ವಿಕೆಟ್ ಪಡೆದು ಬರೋಬ್ಬರಿ 53 ರನ್ ನೀಡಿ ದುಬಾರಿಯಾಗಿದ್ದರು. ಹೀಗೆ ಆಡುವ ಅವಕಾಶ ಸಿಕ್ಕ ಎರಡೂ ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ನೀಡಿರುವ ಅವೇಶ್ ಖಾನ್ ಅವರನ್ನು ಮುಂದಿನ ಪಂದ್ಯದಲ್ಲಿ ಕೈಬಿಡಬೇಕು ಎಂಬ ಅಭಿಪ್ರಾಯ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ವ್ಯಕ್ತವಾಗಿತ್ತು. ಹೀಗಾಗಿ ರಾಹುಲ್ ದ್ರಾವಿಡ್ ಅವೇಶ್ ಖಾನ್ ಕುರಿತು ನೀಡಿರುವ ಹೇಳಿಕೆ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.