IND vs PAK: ಪಾಕ್ ವಿರುದ್ಧದ ಸೂಪರ್ 4ಗೆ ಭಾರತದ ಈತ ಅನುಮಾನ; ದ್ರಾವಿಡ್ ಮಾತಿಗೆ ಫ್ಯಾನ್ಸ್ ಸಂತಸ!

ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯಗಳು ಆರಂಭವಾಗಿವೆ. ಈ ಸುತ್ತಿನ ಮೊದಲ ಪಂದ್ಯ ನಿನ್ನೆಯಷ್ಟೇ ( ಸೆಪ್ಟೆಂಬರ್ 3 ) ಆಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವೆ ಜರುಗಿದ್ದು, ಅಫ್ಘಾನಿಸ್ತಾನದ ವಿರುದ್ಧ ಶ್ರೀಲಂಕಾ ಭರ್ಜರಿ ಜಯ ಸಾಧಿಸುವುದರ ಮೂಲಕ ಗ್ರೂಪ್ ಹಂತದಲ್ಲಿನ ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಇದೀಗ ಸೂಪರ್ 4 ಹಂತದ ದ್ವಿತೀಯ ಪಂದ್ಯದಲ್ಲಿ ಇಂದು ( ಸೆಪ್ಟೆಂಬರ್ 4 ) ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜರುಗಲಿದೆ.
ಇದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ನಡೆಯಲಿರುವ ಎರಡನೇ ಮುಖಾಮುಖಿ ಪಂದ್ಯವಾಗಿದ್ದು, ಪಾಕಿಸ್ತಾನ ತಂಡ ಗ್ರೂಪ್ ಹಂತದಲ್ಲಿ ಟೀಮ್ ಇಂಡಿಯಾ ವಿರುದ್ಧ ಸೋತಿದ್ದ ಸೇಡನ್ನು ಈ ಬಾರಿ ತೀರಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದರೆ, ಟೀಮ್ ಇಂಡಿಯಾ ಈ ಪಂದ್ಯದಲ್ಲಿಯೂ ಗೆದ್ದು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸುವ ಯೋಜನೆಯಲ್ಲಿದೆ.
ಇನ್ನು ಗ್ರೂಪ್ ಹಂತದಲ್ಲಿ ನಡೆದಿದ್ದ ಮುಖಾಮುಖಿಯ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಉಭಯ ತಂಡಗಳ ಆಡುವ ಬಳಗಗಳಿಗೂ ಮತ್ತು ಈ ಬಾರಿ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯುವ ಆಡುವ ಬಳಗಗಳಿಗೂ ತುಂಬಾ ವ್ಯತ್ಯಾಸವಿರಲಿದೆ. ಪಾಕಿಸ್ತಾನ ತಂಡದ ಬೌಲರ್ ಶಹನವಾಜ್ ದಹಾನಿ ಈ ಪಂದ್ಯದಿಂದ ಹೊರಬಿದ್ದಿದ್ದರೆ, ಟೀಮ್ ಇಂಡಿಯಾದ ಪ್ರಮುಖ ಆಲ್ ರೌಂಡರ್ ರವೀಂದ್ರ ಜಡೇಜಾ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇನ್ನು ಈ ಪಂದ್ಯದ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಆಟಗಾರನೋರ್ವ ಈ ಪಂದ್ಯಕ್ಕೆ ಅನುಮಾನ ಎಂದು ಹೇಳಿಕೆ ನೀಡಿದ್ದು, ದ್ರಾವಿಡ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಈತ ಕಣಕ್ಕಿಳಿಯುವುದು ಅನುಮಾನ
ನಿನ್ನೆ ( ಸೆಪ್ಟೆಂಬರ್ 3 ) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಬೌಲರ್ ಆವೇಶ್ ಖಾನ್ ತುಸು ಅನಾರೋಗ್ಯಕ್ಕೊಳಗಾಗಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದರು. ಜ್ವರದಿಂದ ಬಳಲುತ್ತಿರುವ ಅವೇಶ್ ಖಾನ್ ಅಭ್ಯಾಸದಲ್ಲೂ ಸಹ ಭಾಗವಹಿಸಿಲ್ಲ ಹಾಗೂ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಚೇತರಿಸಿಕೊಂಡರೆ ಕಣಕ್ಕಿಳಿಯಲಿದ್ದಾರೆ, ಇಲ್ಲದಿದ್ದರೆ ನಂತರದ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ರಾಹುಲ್ ದ್ರಾವಿಡ್ ತಿಳಿಸಿದರು. ಈ ಮೂಲಕ ಆವೇಶ್ ಖಾನ್ ಪಾಕ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಅನುಮಾನ ಎಂಬ ಸೂಚನೆಯನ್ನು ರಾಹುಲ್ ದ್ರಾವಿಡ್ ಬಿಟ್ಟುಕೊಟ್ಟಿದ್ದಾರೆ.

ಸಂಭ್ರಮಿಸಿದ ಅಭಿಮಾನಿಗಳು
ಇನ್ನು ರಾಹುಲ್ ದ್ರಾವಿಡ್ ನೀಡಿದ ಈ ಹೇಳಿಕೆಯನ್ನು ಕೇಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ದುಬಾರಿ ಬೌಲಿಂಗ್ ಮಾಡುವ ಅವೇಶ್ ಖಾನ್ ಅಲಭ್ಯರಾದರೆ ಅದು ತಂಡಕ್ಕೆ ಅನುಕೂಲ ಎಂದು ಕೆಲವರು ಟ್ವೀಟ್ ಮಾಡಿದ್ದರೆ, ಇನ್ನೂ ಕೆಲವರು ದೀಪಕ್ ಚಹರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಟೀಮ್ ಇಂಡಿಯಾ ಮಾಡಿರುವ ಯೋಜನೆಯಿದು ಎಂದು ಟ್ರೋಲ್ ಮಾಡಿದ್ದಾರೆ. ಹೀಗೆ ಅವೇಶ್ ಖಾನ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎಂಬ ಸುದ್ದಿ ಅಭಿಮಾನಿಗಳಲ್ಲಿ ಬೇಸರಕ್ಕಿಂತ ಹೆಚ್ಚು ಸಂತಸವನ್ನೇ ಮೂಡಿಸಿದೆ.

ಟೂರ್ನಿಯಲ್ಲಿ ಅವೇಶ್ ಖಾನ್ ಕೆಟ್ಟ ಪ್ರದರ್ಶನ
ಇನ್ನು ಟೀಮ್ ಇಂಡಿಯಾದ ಪರ ಟೂರ್ನಿಯ ಗ್ರೂಪ್ ಹಂತದ ಎರಡೂ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವೇಶ್ ಖಾನ್ ನೀರಸ ಪ್ರದರ್ಶನ ನೀಡಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ 2 ಓವರ್ ಬೌಲಿಂಗ್ ಮಾಡಿ 1 ವಿಕೆಟ್ ಪಡೆದು 19 ರನ್ ನೀಡಿದ್ದ ಅವೇಶ್ ಖಾನ್ ತಮ್ಮ ಪಾಲಿನ ಸಂಪೂರ್ಣ 4 ಓವರ್ ಮಾಡುವ ಅವಕಾಶ ಪಡೆಯಲಿಲ್ಲ. ಹಾಗೂ ನಂತರ ನಡೆದ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ತಮ್ಮ ಪಾಲಿನ ಎಲ್ಲ 4 ಓವರ್ ಬೌಲಿಂಗ್ ಮಾಡಿದ ಅವೇಶ್ ಖಾನ್ ಕೇವಲ 1 ವಿಕೆಟ್ ಪಡೆದು ಬರೋಬ್ಬರಿ 53 ರನ್ ನೀಡಿ ದುಬಾರಿಯಾಗಿದ್ದರು. ಹೀಗೆ ಆಡುವ ಅವಕಾಶ ಸಿಕ್ಕ ಎರಡೂ ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ನೀಡಿರುವ ಅವೇಶ್ ಖಾನ್ ಅವರನ್ನು ಮುಂದಿನ ಪಂದ್ಯದಲ್ಲಿ ಕೈಬಿಡಬೇಕು ಎಂಬ ಅಭಿಪ್ರಾಯ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ವ್ಯಕ್ತವಾಗಿತ್ತು. ಹೀಗಾಗಿ ರಾಹುಲ್ ದ್ರಾವಿಡ್ ಅವೇಶ್ ಖಾನ್ ಕುರಿತು ನೀಡಿರುವ ಹೇಳಿಕೆ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications