37 ವರ್ಷದ ಡಿಕೆಗೆ ಮತ್ತೆ ಅವಕಾಶ ಸಿಗುವುದೇ ಅನುಮಾನ ಎನ್ನಲಾಗಿತ್ತು!
ಐಪಿಎಲ್ 2022ರ ಸೀಸನ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ದರ ಪರಿಣಾಮ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದ ದಿನೇಶ್ ಕಾರ್ತಿಕ್ ಮ್ಯಾಜಿಕ್ ಮಾಡಿ ಬಿಡುತ್ತಾರೆ ಎಂದೇ ಭಾವಿಸಲಾಗಿತ್ತು. ಭಾರತದ ಹೊಸ ಫಿನಿಷರ್ ಎಂದೇ ಹೈಲೈಟ್ ಆಗಿದ್ದ ಕಾರ್ತಿಕ್, ವಿಶ್ವಕಪ್ನಲ್ಲಿ ಸಿಕ್ಕ ಅವಕಾಶಗಳನ್ನೆಲ್ಲಾ ಕೈ ಚೆಲ್ಲಿದರು.
ಐಪಿಎಲ್ 2022ರಲ್ಲಿ 16 ಪಂದ್ಯಗಳಲ್ಲಿ 183.33 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದ DK 330 ರನ್ ಕಲೆಹಾಕಿದರು. ಆದ್ರೆ ಕಳೆದ ಟಿ20 ವಿಶ್ವಕಪ್ನಲ್ಲಿ ಕಾರ್ತಿಕ್ಗೆ ಅವಕಾಶ ಸಿಕ್ಕಿದ್ದು ಕಡಿಮೆಯಾದ್ರೂ ಗಳಿಸಿದ್ದು 14ರನ್. ಅದ್ರಲ್ಲೂ 66.63 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಕಾರ್ತಿಕ್ ನೀರಸ ಪ್ರದರ್ಶನ ನೀಡಿದರು.
ಈಗಾಗಲೇ 37 ವರ್ಷದ ದಿನೇಶ್ ಕಾರ್ತಿಕ್ರನ್ನು 2024ರಲ್ಲಿ ನಡೆಯುವ ಮುಂದಿನ ಟಿ20 ವಿಶ್ವಕಪ್ಗೆ ಮತ್ತೆ ಆಯ್ಕೆ ಮಾಡುವುದು ನಂಬಲಾಗದ ಮಾತಾಗಿದೆ. ಆದ್ರೆ ಕಾರ್ತಿಕ್ ಮುಂದಿನ ಟಿ20 ಸರಣಿಗಳಿಗೆ ಆಯ್ಕೆಯಾಗುವ ಸುಳಿವು ಮಾತ್ರ ಈಗ ಸಿಕ್ಕಿದೆ.
IPL 2023: ದುಬಾರಿ ಮೊತ್ತ ಪಡೆದ್ರೂ, ಉತ್ತಮ ಪ್ರದರ್ಶನ ನೀಡದ ಈ 5 ಆಟಗಾರರು ರಿಲೀಸ್!
ನ್ಯೂಜಿಲೆಂಡ್ ಸರಣಿಯಿಂದ ದಿನೇಶ್ ಕಾರ್ತಿಕ್ರನ್ನ ಏಕೆ ಹೊರಗಿಡಲಾಗಿದೆ?
ನವೆಂಬರ್ 18ರಿಂದ ಪ್ರಾರಂಭಗೊಳ್ಳಲಿರುವ ನ್ಯೂಜಿಲೆಂಡ್ ಹಾಗೂ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಗೆ ದಿನೇಶ್ ಕಾರ್ತಿಕ್ ಆಯ್ಕೆಗೊಂಡಿಲ್ಲ. ಕೆ.ಎಲ್ ರಾಹುಲ್ , ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದರು. ಆದ್ರೆ ಈ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ ಕೂಡ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿತ್ತು. ಅದಾಗಲೇ 37 ವರ್ಷ ತುಂಬಿರುವ ದಿನೇಶ್ ಕಾರ್ತಿಕ್ ವೃತ್ತಿಜೀವನವನ್ನು ಆಯ್ಕೆಗಾರರು ಅಂತ್ಯಗೊಳಿಸಿದರು ಎಂದೆಲ್ಲಾ ಟೀಕೆ ಕೇಳಿ ಬಂದಿತ್ತು.
ಐಪಿಎಲ್ ಮೂಲಕ ಟೀಂ ಇಂಡಿಯಾಗೆ ಅದ್ಭುತ ಕಂಬ್ಯಾಕ್ ಮಾಡಿದ್ದ ದಿನೇಶ್ ಕಾರ್ತಿಕ್ಗೆ ಹೆಚ್ಚಿನ ಅವಕಾಶ ನೀಡಬೇಕಿತ್ತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿದ್ದರು. ಆದ್ರೆ ಕಾರ್ತಿಕ್ರನ್ನ ನ್ಯೂಜಿಲೆಂಡ್ ಸರಣಿಯಿಂದ ಏಕೆ ಹೊರಗಿಡಲಾಗಿದೆ? ಎಂಬುದರ ಕುರಿತಾಗಿ ಇದೀಗ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಉತ್ತರಿಸಿದ್ದಾರೆ.
ದಿನೇಶ್ ಕಾರ್ತಿಕ್ಗೆ ಇತರೆ ಆಟಗಾರರಂತೆ ಒತ್ತಡ ನಿರ್ವಹಣೆ ಮಾಡುವ ಸಲುವಾಗಿ ವಿಶ್ರಾಂತಿ ನೀಡಲಾಗಿದೆ. ವಿಶ್ವಕಪ್ ಮುಗಿದು ಐದು ದಿನಗಳಲ್ಲಿ ಟಿ20 ಸರಣಿ ನಡೆಯುವುದರಿಂದ ಕಾರ್ತಿಕ್ಗೆ ಅವಕಾಶ ನೀಡಿಲ್ಲ ಎಂದಿದ್ದಾರೆ.
''ಅದು ಆ ರೀತಿಯಾಗಿ ಅಲ್ಲ(ದಿನೇಶ್ ಕಾರ್ತಿಕ್ ಆಯ್ಕೆಯಿಂದ ಹೊರಗಿಡುವುದು). ವಿಶ್ವಕಪ್ ಮುಗಿದು ಕೆಲವೇ ದಿನಗಳಾಗಿವೆ. ಇದು ಪ್ರಾಥಮಿಕವಾಗಿ ಆಟಗಾರರ ಮೇಲಿನ ಒತ್ತಡ ನಿಭಾಯಿಸುವುದಾಗಿದೆ. ಈ ಕುರಿತಾಗಿ ನಾವು ಸಾಕಷ್ಟು ಗಮನಹರಿಸಿದ್ದೇವೆ. ಯಾವ ಆಟಗಾರರಿಗೆ ಯಾವ ಸಮಯದಲ್ಲಿ ವಿಶ್ರಾಂತಿ ನೀಡಬೇಕು ಎಂಬುದನ್ನ ಯೋಜಿಸುತ್ತಿದ್ದೇವೆ'' ಎಂದು ಚೇತನ್ ಶರ್ಮಾ ಹೇಳಿಕೆಯನ್ನ ಇಂಡಿಯಾ ಟುಡೆ ವರದಿ ಮಾಡಿದೆ.
IND vs NZ: ಕಿವೀಸ್ ನೆಲದಲ್ಲಿ ಭಾರತದ ಯುವ ಪಡೆಯ ಅಭ್ಯಾಸ ಶುರು, ವಿವಿಎಸ್ ಲಕ್ಷ್ಮಣ್ರಿಂದ ಪಾಠ
ದಿನೇಶ್ ಕಾರ್ತಿಕ್ ಆಯ್ಕೆಗೆ ಲಭ್ಯವಿದ್ದಾರೆ ಎಂದ ಚೇತನ್ ಶರ್ಮಾ
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ಗೆ ಅವಕಾಶಗಳು ಮುಗಿದು ಹೋಗಿಲ್ಲ, ಆಯ್ಕೆಗೆ ಲಭ್ಯವಿದ್ದಾರೆ, ಅವಕಾಶಗಳು ಇನ್ನೂ ತೆರೆದಿವೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ತಿಳಿಸಿದ್ದಾರೆ.
''ದಿನೇಶ್ ಕಾರ್ತಿಕ್ ಟೀಂ ಇಂಡಿಯಾಗೆ ಬಂದ ರೀತಿ ಮತ್ತು ಆತ ನೀಡಿದ ಪ್ರದರ್ಶನ ಗಮನಿಸಿದ ಮೇಲೆ, ಇನ್ನೂ ಅವರು ತಂಡಕ್ಕೆ ಆಯ್ಕೆಗೊಳ್ಳುವ ಅವಕಾಶ ಹೊಂದಿದ್ದಾರೆ. ಟಿ20 ವಿಶ್ವಕಪ್ ಮುಗಿದ ಕೆಲ ಸಮಯದಲ್ಲೇ ಚಿಕ್ಕದಾದ ಟಿ20 ಟೂರ್ನಮೆಂಟ್ ಇರುವುದರಿಂದ ಹೆಚ್ಚುವರಿ ಆಟಗಾರರನ್ನ ಆಡಿಸಲು ಬಯಸಿದೆವು. ಇಲ್ಲದಿದ್ದರೆ, ಆತನಿಗೆ ಅವಕಾಶದ ಬಾಗಿಲುಗಳು ತೆರೆದೇ ಇವೆ. ಆತನೊಬ್ಬ ಅದ್ಭುತ ಆಟಗಾರ, ಅಂತದ್ದೇನೂ ತೊಂದರೆ ಇಲ್ಲ'' ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ತಂಡದ ಆಟಗಾರರ ಫಿಟ್ನೆಸ್ ಅಪ್ಡೇಟ್, ಗಾಯದ ಚೇತರಿಕೆ ಕುರಿತು ಕೇಳಿದ ಪ್ರಶ್ನೆಗೆ ಸಾರ್ವಜನಿಕವಾಗಿ ಉತ್ತರಿಸಲು ಚೇತನ್ ಶರ್ಮಾ ನಿರಾಕರಿಸಿದ್ದಾರೆ.