ಬೆಂಗಳೂರು, ಮೇ 16: ಕರ್ನಾಟಕದ ರಾಜಕೀಯ ಅತ್ತಿಂದಿತ್ತ-ಇತ್ತಿಂದತ್ತ ವಾಲಾಡುತ್ತಿದೆ. ಮೂರು ಪಕ್ಷಗಳು ಎರಡು ಗುಂಪುಗಳಾಗಿ ಅಧಿಕಾರಕ್ಕೆ ಹರಸಾಹಸ ಪಡುತ್ತಿವೆ ಇದೀಗಷ್ಟೆ ರೆಸಾರ್ಟ್ ರಾಜಕೀಯವೂ ಪ್ರಾರಂಭವಾಗಿದೆ. ಇದೆಲ್ಲಾ ನೋಡಿ ಸನ್ರೈಸರ್ಸ್ ಹೈದರಾಬಾದ್ ಆಟಗಾರರು ಕಕ್ಕಾಬಿಕ್ಕಿಯಾಗಿದ್ದಾರೆ.
ಹೌದು, ಕರ್ನಾಟಕದ ರಾಜಕೀಯವನ್ನು ಕೆಲ ಕಾಲ ಹತ್ತಿರದಿಂದ ನೋಡುವ ಭಾಗ್ಯ (!?) ಸನ್ರೈಸರ್ಸ್ ಹೈದರಾಬಾದ್ ಆಟಗಾರಿಗೆ ದೊರಕಿತ್ತು. ಆರ್ಸಿಬಿ ವಿರುದ್ಧ ಪಂದ್ಯ ಆಡಲು ಬಂದಿದ್ದ ಹೈದರಾಬಾದ್ ಆಟಗಾರರು ಶಾಂಗ್ರಿಲಾ ಹೊಟೆಲ್ನಲ್ಲಿ ತಂಗಿದ್ದರು. ಅದೇ ಹೊಟೆಲ್ನಲ್ಲಿ ಜೆಡಿಎಸ್ನ ಶಾಸಕರು ಕೂಡ ಒಟ್ಟುಗೂಡಿದ್ದರು.
ಬಿಜೆಪಿಗೆ ಬಹುಮತಕ್ಕೆ ಅಗತ್ಯವಿರುವ ಶಾಸಕರ ಸಂಖ್ಯೆ ಕಡಿಮೆ ಇರುವ ಕಾರಣ ಬಿಜೆಪಿಯಿಂದ 'ಕುದುರೆ ವ್ಯಾಪಾರ' ನಡೆಯಬಹುದೆಂಬ ಗುಮಾನಿಯಿಂದಾಗಿ ಜೆಡಿಎಸ್ ಪಕ್ಷವು ತನ್ನ ಶಾಸಕರನ್ನು ಇಂದು ಬೆಳಿಗ್ಗೆ ಶಾಂಗ್ರಿಲಾ ಹೊಟೆಲ್ನಲ್ಲಿ ಒಟ್ಟು ಮಾಡಿಸಿದ್ದರು. ಅದೇ ಹೊಟೆಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಆಟಗಾರರು ಕೂಡ ತಂಗಿದ್ದಾರೆ.
ಬೆಳಿಗ್ಗಿನಿಂದಲೂ ಶಾಂಗ್ರಿಲಾ ಹೊಟೆಲ್ನಲ್ಲಿ ಜೆಡಿಎಸ್ ಶಾಸಕರ, ಮುಖಂಡರ, ಕಾರ್ಯಕರ್ತರ ದಂಡು ನೆರೆದಿತ್ತು, ಶಾಂಗ್ರಿಲಾ ಹೊಟೆಲ್ನಲ್ಲಿ ಜನವೋ ಜನ. ಕ್ರಿಕೆಟ್ ಆಟಗಾರರು ಅಲ್ಲೆ ಇದ್ದರೂ ಅವರನ್ನು ಕೇಳುವವರೇ ಇರಲಿಲ್ಲ. ಈ ಬಾರಿ ಜನ ಅವರ ಆತಂಕ, ಒದ್ದಾಟಗಳನ್ನು ನೋಡಿ ಹೈದರಾಬಾದ್ ಆಟಗಾರರು ದಂಗಾಗಿದ್ದಾರೆ.
ಹೊಟೆಲ್ನಲ್ಲಿ ಹಾಗೂ ಹೊಟೆಲ್ ಹೊರಭಾಗ ಸೇರಿದ್ದ ಭಾರಿ ಜನರಿಂದಾಗಿ ಆಟಗಾರರು ಅಭ್ಯಾಸಕ್ಕೆಂದು ಕ್ರೀಡಾಂಗಣಕ್ಕೆ ತೆರಳಲೂ ಕೂಡ ಸಮಸ್ಯೆ ಆಗಿದೆ. ಮನೀಶ್ ಪಾಂಡೆ ಅವರಂತೂ ತಂಡದ ಬಸ್ ಸಹ ಮಿಸ್ ಮಾಡಿಕೊಂಡಿದ್ದಾರೆ.
ಹೊಟೆಲ್ನಲ್ಲಿ ತಂಗಿದ್ದ ಉಳಿದ ಕೆಲವರು, ವಿದೇಶಿಗರೂ ಕೂಡ ಹೊಟೆಲ್ನಲ್ಲಿ ಜನಜಂಗುಳಿಯಿಂದ ಬೇಸತ್ತು ರೂಮ್ ತೊರೆದು ಬೇರೆ ಹೊಟೆಲ್ಗೆ ಹೋಗಿದ್ದಾರಂತೆ.