ಕೋಲ್ಕತ, ಏಪ್ರಿಲ್ 25: ಡೆಲ್ಲಿ ಡೇರ್ಡೆವಿಲ್ಸ್ ತಂಡದ ಕಳಪೆ ಪ್ರದರ್ಶನಕ್ಕೆ ಹೊಣೆ ಹೊತ್ತು ಟೂರ್ನಿಯ ಅರ್ಧದಲ್ಲಿಯೇ ನಾಯಕತ್ವ ತ್ಯಜಿಸಿರುವ ಗೌತಮ್ ಗಂಭೀರ್, ಮತ್ತೊಂದು ಅಚ್ಚರಿಯ ತೀರ್ಮಾನ ತೆಗೆದುಕೊಂಡಿದ್ದಾರೆ.
ಸತತ ಸೋಲಿನ ಸುಳಿಯಲ್ಲಿ ಸಿಲುಕಿದಾಗ ತಂಡದ ನಾಯಕ ಅದಕ್ಕೆ ಹೊಣೆ ಹೊತ್ತು ಹುದ್ದೆಯಿಂದ ಕೆಳಕ್ಕಿಳಿಯುವುದು ಸಾಮಾನ್ಯ. ಆದರೆ, ಗಂಭೀರ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ತಮಗೆ ಬರಬೇಕಾದ ಅಷ್ಟೂ ಸಂಭಾವನೆಯನ್ನು ತೆಗೆದುಕೊಳ್ಳದೆ ಇರಲು ನಿರ್ಧರಿಸಿದ್ದಾರೆ.
ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಒಟ್ಟಾರೆ ಸಾಧನೆಯಷ್ಟೇ ಅಲ್ಲ, ಆಟಗಾರನಾಗಿಯೂ ಗಂಭೀರ್ ವಿಫಲರಾಗಿದ್ದಾರೆ. ಅವರ ನೀರಸ ಪ್ರದರ್ಶನ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. 2011ರ ವಿಶ್ವಕಪ್ ಫೈನಲ್ನಲ್ಲಿ ಗಂಭೀರ್ 91 ರನ್ ಗಳಿಸಿ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಕ್ರಿಕೆಟ್ ಪ್ರಿಯರು ಮರೆತಿಲ್ಲ. ದೀರ್ಘಕಾಲದ ಬಳಿಕ ಒಮ್ಮೆ ತಂಡಕ್ಕೆ ಮರಳಿದ್ದರೂ, ಗಮನಾರ್ಹ ಪ್ರದರ್ಶನ ನೀಡುವಲ್ಲಿ ಅವರು ಸಫಲರಾಗಿರಲಿಲ್ಲ.
ಕಳೆದ ಐಪಿಎಲ್ನಲ್ಲಿ ಉತ್ತಮ ಆಟವಾಡಿದ್ದ ಗಂಭೀರ್, ಈಗ ಫಾರ್ಮ್ ಕಳೆದುಕೊಂಡಿದ್ದಾರೆ. ಅವರ ಬ್ಯಾಟ್ನಿಂದ ರನ್ಗಳು ಸರಾಗವಾಗಿ ಹರಿದುಬರುತ್ತಿಲ್ಲ. ಬೌಂಡರಿಗಳಂತೂ ದೂರದ ಮಾತು. ತಮ್ಮ ನಾಯಕತ್ವದಲ್ಲಿ ಮಾತ್ರ ಲೋಪವಾಗಿಲ್ಲ, ವೈಯಕ್ತಿಕವಾಗಿಯೂ ಬ್ಯಾಟ್ಸ್ಮನ್ ಆಗಿ ಕೊಡಬೇಕಾದ ಕಾಣಿಕೆ ನೀಡುತ್ತಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿದೆ. ಹೀಗಾಗಿ ನಾಯಕತ್ವ ತ್ಯಜಿಸಿದ ಬೆನ್ನಲ್ಲೇ ಸಂಭಾವನೆಯನ್ನೂ ನಿರಾಕರಿಸುವ ನಿರ್ಧಾರ ಕೈಗೊಂಡಿದ್ದಾರೆ.
2.8 ಕೋಟಿ ವೇತನ
ಗೌತಮ್ ಗಂಭೀರ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಫ್ರಾಂಚೈಸಿ ಖರೀದಿಸಿದ್ದು 2.8 ಕೋಟಿ ಮೊತ್ತಕ್ಕೆ. ಆದರೆ, ಈ ವೇತನವನ್ನು ಸ್ವೀಕರಿಸದೆ ಇರಲು ಗಂಭೀರ್ ತೀರ್ಮಾನಿಸಿದ್ದಾರೆ. ಕಳಪೆ ಆಟದ ಕಾರಣಕ್ಕಾಗಿ ಐಪಿಎಲ್ ಆಟಗಾರನೊಬ್ಬ ವೇತನವನ್ನೂ ತ್ಯಜಿಸಲು ಮುಂದಾಗಿರುವುದ ಇದೇ ಮೊದಲು.
ಗೌತಮ್ ಗಂಭೀರ್ ಅವರು ಫ್ರಾಂಚೈಸಿಯಿಂದ ಯಾವುದೇ ವೇತನ ಪಡೆದುಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ಈ ಆವೃತ್ತಿಯ ಉಳಿದ ಪಂದ್ಯಗಳನ್ನು ಅವರು ಉಚಿತವಾಗಿ ಆಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.