ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಮಂಗಳವಾರದಿಂದ ಆರಂಭವಾಗಲಿದೆ. ಎರಡು ತಮಡಗಳು ಕೂಡ ತಲಾ ಒಂದು ಪಂದ್ಯ ಗೆದ್ದು ಸರಣಿ ಸಮಬಲದಲ್ಲಿರುವ ಕಾರಣ ಈ ಪಂದ್ಯದಲ್ಲಿ ಗೆಲ್ಲುವ ಆತ್ಮ ವಿಶ್ವಾಸದಲ್ಲಿ ಎರಡೂ ತಂಡಗಳಿವೆ. ಅದರಲ್ಲೂ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಮೇಲೆ ಕಣ್ಣಿಟ್ಟಿದ್ದು ಇದರಲ್ಲಿ ಕೊಹ್ಲಿ ಪಡೆ ಯಶಸ್ವಿಯಾಗಲಿದೆಯಾ ಎಂಬ ಕುತೂಹಲ ಮೂಡಿಸಿದೆ.
ಈ ನಿರ್ಣಾಯಕ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹರ್ಭಜನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ಭಜ್ಜಿ ಕಳೆದ ಎರಡು ವರ್ಷಗಳಿಂದ ವಿರಾಟ್ ಕೊಹ್ಲಿ ಅನುಭವಿಸುತ್ತಿರುವ ಶತಕದ ಬರ ಈ ಪಂದ್ಯದಲ್ಲಿ ನೀಗಲಿದೆ ಎಂದಿದ್ದಾರೆ.
ಸಚಿನ್ ಮಗಳು ಸಾರಾ ಮತ್ತು ಶುಭ್ಮನ್ ಗಿಲ್ ಡೇಟಿಂಗ್? ಫೋಟೊಗಳಿಂದ ನೆಟಿಜನ್ಗಳ ಕೈಗೆ ಸಿಕ್ಕಿಬಿದ್ದರು!
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಿಂದ ಹೊರಗುಳಿದಿದ್ದರು. ಜೊಹನ್ಸ್ಬರ್ಗ್ನಲ್ಲಿ ನಡೆದಿದ್ದ ಈ ಪಂದ್ಯವನ್ನು ಭಾರತ 7 ವಿಕೆಟ್ಗಳ ಅಂತರದಿಂದ ಸೊಲು ಕಂಡಿತ್ತು. ಹೀಗಾಗಿ ಮೂರು ಪಂದ್ಯಗಳ ಟೆಸ್ಟ್ ಸರಣಿ 1-1 ಅಂತರದಿಂದ ಸಮಬಲ ಕಂಡಿದೆ. ಮೂರನೇ ಪಂದ್ಯಕ್ಕೆ ನಾತಕ ವಿರಾಟ್ ಕೊಹ್ಲಿ ಸಂಪೂರ್ಣ ಫಿಟ್ ಆಗಿದ್ದು ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
2019ರ ನವೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಕೊಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕವನ್ನು ಸಿಡಿಸಿದ್ದರು. ಅದಾಗಿ ಎರಡು ವರ್ಷ ಕಳೆದಿದ್ದು ವಿರಾಟ್ ಕೊಹ್ಲಿ ಬ್ಯಾಟ್ನಿಂದ ಈವರೆಗೆ ಒಂದೇ ಒಂದು ಅಂತಾರಾಷ್ಟ್ರೀಯ ಶತಕ ಸಿಡಿದಿಲ್ಲ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ ಹಲವು ಅರ್ಧ ಶತಕಗಳನ್ನು ಸಿಡಿಸಿದ್ದರೂ ಶತಕವನ್ನಾಗಿ ಪರಿವರ್ತಿಸಲು ವಿಫಲವಾಗಿದ್ದಾರೆ. ಇದೀಗ ವಿರಾಟ್ ಕೊಹ್ಲಿಯ ಟೆಸ್ಟ್ ಸರಾಸರಿ ಕೂಡ 50ಕ್ಕಿಂತ ಕೆಳಕ್ಕಿಳಿಯುವ ಸನಿಹದಲ್ಲಿದೆ.
ಆದರೆ ಈ ಸರಣಿಯ ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕವನ್ನು ಸಿಡಿಸಲಿದ್ದಾರೆ ಎಂದು ಹರ್ಭಜನ್ ಸಿಂಗ್ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶತಕದ ಬರವನ್ನು ನೀಗಿಸಲಿದ್ದಾರೆ ಎಂದಿದ್ದಾರೆ ಹರ್ಭಜನ್ ಸಿಂಗ್. "ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮರಳಲಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ತಮ್ಮ ಶತಕದ ಬರವನ್ನು ನೀಗಿಸಿಕೊಳ್ಳಲಿದ್ದಾರೆ ಎಂಬುದು ನನ್ನ ಭಾವನೆ. ಆತ ಶತಕ ಬಾರಿಸುವುದನ್ನು ನೋಡಿ ಅದಾಗಲೇ ಬಹಳ ಕಾಲವಾಯಿತು. ಅವರ ಜೊತೆಗೆ ಪೂಜಾರ, ರಹಾನೆಯಂತಾ ಆಟಗಾರರು ಕೂಡ ಅದ್ಭುತ ಪ್ರದರ್ಶನ ನಿಡಲಿದ್ದಾರೆ ಎಂಬ ವಿಶ್ವಾಸವಿದೆ. ಅವರಿಂದ ಅರ್ಧ ಶತಕಗಳು ಬರುತ್ತಿವೆ. ಅದು ಶತಕವಾಗಿ ಪರಿವರ್ತನೆಯಾಗಬೇಕಿದೆ" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಆ್ಯಶಸ್: ನಾಲ್ಕನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ, 1 ವಿಕೆಟ್ನಿಂದ ಸೋಲು ತಪ್ಪಿಸಿಕೊಂಡ ಇಂಗ್ಲೆಂಡ್
ಇನ್ನು ಭಾರತ ಈ ಪಂದ್ಯದಲ್ಲಿ ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಬೇಕು ಎಂಬ ಮಾತನ್ನು ಹರ್ಭಜನ್ ಸಿಂಗ್ ಹೇಳಿದ್ದಾರೆ. "ನಾವು 350-400 ರನ್ಗಳನ್ನು ಗಳಿಸಬೇಕಿದೆ, ಅಲ್ಲದೆ ಇಬ್ಬರು ಸ್ಪಿನ್ನರ್ಗಳೊಂದಿಗೆ ಆಡಲಿಳಿಯಬೇಕು. ಹಾಗಾದಲ್ಲಿ ಭಾರತ ಖಂಡಿತವಾಗಿಯೂ ಪಂದ್ಯದಲ್ಲಿ ಬಗಿ ಹಿಡಿತವನ್ನು ಸಾಧಿಸಲಿದೆ. ಕೆಎಲ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಮಯಾಂಕ್ ಉತ್ತಮ ಆರಂಭವನ್ನು ಪಡೆಯುತ್ತಾರೆ ಆದರೆ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಗುತ್ತಿದ್ದಾರೆ. ಈ ಪಂದ್ಯವನ್ನು ಭಾರತ ಪರಿಪೂರ್ಣವಾಗಿ ಆಡಲಿದೆ ಎಂಬ ವಿಶ್ವಾಸವಿದೆ" ಎಂದಿದ್ದಾರೆ ಹರ್ಭಜನ್ ಸಿಂಗ್.