ಭಾರತ ವಿರುದ್ಧದ ಸರಣಿಗೂ ಮುನ್ನ ಜಿಂಬಾಬ್ವೆ ಬಾಂಗ್ಲಾದೇಶಕ್ಕೆ ಆತಿಥ್ಯ
ಭಾರತವು ಇತ್ತೀಚೆಗೆ ಟಿ20 ಮತ್ತು ಏಕದಿನ ಪಂದ್ಯಗಳ ಸರಣಿ ವಿಜಯಗಳೊಂದಿಗೆ ಇಂಗ್ಲೆಂಡ್ ಪ್ರವಾಸವನ್ನು ಮುಗಿಸಿದ್ದು, ಶಿಖರ್ ಧವನ್ ನಾಯಕತ್ವದಲ್ಲಿ ಯುವ ಭಾರತೀಯ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ ಮತ್ತು ನಂತರ ಆಗಸ್ಟ್ 7ರಂದು ಮುಕ್ತಾಯಗೊಳ್ಳುವ ಐದು ಟಿ20 ಪಂದ್ಯಗಳನ್ನು ಆಡಲಿದೆ.
ಭಾರತ ವಿರುದ್ಧದ ಸರಣಿಗೂ ಮುನ್ನ ಜಿಂಬಾಬ್ವೆ ಬಾಂಗ್ಲಾದೇಶಕ್ಕೆ ಜುಲೈ 30ರಿಂದ ಮೂರು ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಅವರು ಆಗಸ್ಟ್ 28ರಿಂದ ಮೂರು ಏಕದಿನ ಪಂದ್ಯಗಳಿಗೆ ವಿಶ್ವಕಪ್್ಗೆ ಮುಂಚಿತವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ
ಜುಲೈ 22ರಿಂದ 27ರ ಮಧ್ಯೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜನೆಯಾಗಿದೆ. ಏಕದಿನ ಸರಣಿಯ ಮೂರು ಪಂದ್ಯಗಳು ಕೂಡ ಟ್ರನಿಡಾಡ್ನ ಪೋರ್ಟ್ ಆಫ್ ಸ್ಪೈನ್ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆಯಲಿದೆ. ಭಾರತದ ಖಾಯಂ ನಾಯಕ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಅನುಭವಿ ಶಿಖರ್ ಧವನ್ ಭಾರತ ತಂಡವನ್ನು ಮುನ್ನಡೆಸಲಿದ್ದು, ರವೀಂದ್ರ ಜಡೇಜಾ ಉಪನಾಯಕನಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಏಕದಿನ ಸರಣಿ ನಂತರ ಟಿ20 ಸರಣಿ
ಇನ್ನು, ಮೂರು ಪಂದ್ಯಗಳ ಏಕದಿನ ಸರಣಿಯ ಮುಕ್ತಾಯದ ಬಳಿಕ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಐದು ಪಂದ್ಯಗಳ ಟಿ20 ಸರಣಿಯಲ್ಲಿಯೂ ಮುಖಾಮುಖಿಯಾಗಲಿದೆ. ಜುಲೈ 29ರಿಂದ ಆಗಸ್ಟ್ 7ರ ಮಧ್ಯೆ ಟಿ20 ಸರಣಿ ನಡೆಯಲಿದ್ದು, ಇದರಲ್ಲಿ ರೋಹಿತ್ ಶರ್ಮಾ, ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಲಿದ್ದಾರೆ. ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿಗೆ ಚುಟುಕು ಸರಣಿಯಿಂದಲೂ ವಿಶ್ರಾಂತಿ ನೀಡಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ
ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.