
ಹೈದರಾಬಾದ್, ಮೇ 8: ಕಳಪೆ ಬ್ಯಾಟಿಂಗ್ ಹೊರತಾಗಿಯೂ ಕರಾರುವಕ್ಕಾದ ಬೌಲಿಂಗ್ ದಾಳಿಯಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 5 ರನ್ ಗೆಲುವು ಸಾಧಿಸಿದೆ.
ಸನ್ ರೈಸರ್ಸ್ ನೀಡಿದ್ದ 147 ರನ್ ಗುರಿ ತಲುಪಲಾಗದೆ ರಾಯಲ್ ಚಾಲೆಂಜರ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದು 141 ರನ್ ಪೇರಿಸಿ ಶರಣಾಯಿತು. ಈ ಪಂದ್ಯದ ಗೆಲುವಿನೊಂದಿಗೆ ಹೈದರಾಬಾದ್ ಒಟ್ಟು 16 ಅಂಕಗಳೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಭದ್ರವಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು ಕೇವಲ 146 ರನ್ ಪೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 147 ರನ್ ಟಾರ್ಗೆಟ್ ನೀಡಿತ್ತು.
ಹೈದರಾಬಾದ್ ಪರ ಕೇನ್ ವಿಲಿಯಮ್ಸನ್ 56 (39), ಶಕೀಬ್ ಅಲ್ ಹಸನ್ 35 (32) ಇಬ್ಬರು ಆಡಿದ್ದು ಬಿಟ್ಟರೆ ಇನ್ನೆಲ್ಲರೂ ಕನಿಷ್ಠ ರನ್ನಿಗೆ ಪೆವಿಲಿಯನ್ ದಾರಿ ಹಿಡಿದರು.
ಈ ಬಾರಿ ಬೆಂಗಳೂರು ಮಾರಕ ಬೌಲಿಂಗ್ ದಾಳಿ ನಡೆಸಿದ್ದು ಕೊಂಚ ಪ್ಲಸ್ಸಾಗಿ ಪರಿಣಮಿಸಿತು. ಟಿಮ್ ಸೌಥೀ 30ಕ್ಕೆ 3 ಮತ್ತು ಮೊಹಮ್ಮದ್ ಸಿರಾಜ್ 25ಕ್ಕೆ 3 ವಿಕೆಟ್ ಕಬಳಿಸಿದ್ದು ಹೈದರಾಬಾದ್ ರನ್ ಸಂಗ್ರಹಕ್ಕೆ ಕಡಿವಾಣ ಹಾಕಿತು.
ಚೇಸಿಂಗ್ ಗೆ ಇಳಿದ ಬೆಂಗಳೂರು ಕೂಡ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಬಂತು. ಪಾರ್ಥೀವ್ ಪಟೇಲ್ 20 (13), ವಿರಾಟ್ ಕೊಹ್ಲಿ 39 (30), ಡಿವಿಲಿಯರ್ಸ್ 5 (8), ಮನನ್ ವೊಹ್ರ 8 (10), ಮೋಯೀನ್ ಆಲಿ 10 (7) ರನ್ನಿಗೆ ಔಟಾದರು.
ಕಪ್ಪಿನ ಕತೆ ಕೊನೆಯಾದಂತೆಯೆ
ಮನ್ ದೀಪ್ ಸಿಂಗ್ 21 (23), 33 (29) ಗೆಲುವಿಗೆ ಯತ್ನಿಸಿದರಾದರೂ ಆರ್ಸಿಬಿ ತಂಡದ ಬಹುತೇಕ ಬ್ಯಾಟ್ಸ್ಮನ್ ಗಳ ಕಳಪೆ ಬ್ಯಾಟಿಂಗ್ ತಂಡವನ್ನು ಸೋಲಿನತ್ತ ಸೆಳೆದು ಕೆಡವಿತು. ಈ ಸೋಲಿನೊಂದಿಗೆ ಆರ್ಸಿಬಿಯ ಐಪಿಎಲ್ ಕನಸು ಬಹುತೇಕ ಕಮರಿದಂತಾಗಿದೆ. ಈ ಸಾರಿಗೆ ಕಪ್ಪಿನ ಕತೆ ಮುಗಿದಂತೆಯೇ. ಯಾಕೆಂದರೆ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಆರ್ಸಿಬಿ ಗೆಲ್ಲಲೇಬೇಕಿದ್ದು, ಇದು ಬಲುಕಷ್ಟವೇಸರಿ.