ಸಿಎಸ್ಕೆ ನಾಯಕತ್ವ ತ್ಯಜಿಸಿದ ಧೋನಿ: ಐಪಿಎಲ್ನಲ್ಲಿ ಕ್ಯಾಪ್ಟನ್ ಕೂಲ್ ಸೃಷ್ಟಿಸಿದ್ದ 3 ವಿವಾದಗಳಿವು!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಶನಿವಾರದಂದು ( ಮಾರ್ಚ್ 26 ) ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭಗೊಳ್ಳಲಿದೆ. ಇನ್ನು ಈ ಬಾರಿಯ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಹಾಗೂ ರನ್ನರ್ ಅಪ್ ಆಗಿದ್ದ ತಂಡಗಳು ಮುಖಾಮುಖಿಯಾಗುವುದು ವಿಶೇಷವಾಗಿದ್ದು, ಪಂದ್ಯ ಆರಂಭಕ್ಕೆ ಇನ್ನೇನು ಕೆಲ ಗಂಟೆಗಳು ಬಾಕಿ ಇವೆ ಎನ್ನುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಾಯಕತ್ವದ ಬದಲಾವಣೆಯ ಘೋಷಣೆಯನ್ನು ಹೊರಡಿಸುವುದರ ಮೂಲಕ ಐಪಿಎಲ್ ಪ್ರೇಕ್ಷಕರು ಹಾಗೂ ಎಂಎಸ್ ಧೋನಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಹೌದು, ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ತ್ಯಜಿಸಿದ್ದು, ರವೀಂದ್ರ ಜಡೇಜಾಗೆ ನಾಯಕತ್ವವನ್ನು ಹಸ್ತಾಂತರಿಸಿದ್ದಾರೆ.
ಇನ್ನು ಈ ಕುರಿತಾಗಿ ಸ್ವತಃ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್ ಮಾತನಾಡಿದ್ದು, ಈ ನಿರ್ಧಾರವನ್ನು ಸ್ವತಃ ಧೋನಿ ಅವರೇ ತೆಗೆದುಕೊಂಡಿದ್ದಾರೆ ಎಂಬ ಹೇಳಿಕೆಯನ್ನೂ ಸಹ ನೀಡಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಟ್ಟು ನಾಲ್ಕು ಬಾರಿ ಟ್ರೋಫಿಯನ್ನು ತಂದುಕೊಟ್ಟಿದ್ದ ನಾಯಕ ಎಂಬ ಕೀರ್ತಿಗೆ ಪಾತ್ರಾವಾಗಿದ್ದ ಎಂ ಎಸ್ ಧೋನಿ ತಮ್ಮ ನಾಯಕತ್ವದ ಪಯಣವನ್ನು ಮುಗಿಸಿದ್ದಾರೆ. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ತ್ಯಜಿಸಿದ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ನಿರ್ಮಿಸಿರುವ ದಾಖಲೆಗಳ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಅದರ ಜೊತೆಗೆ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಮಾಡಿಕೊಂಡಿರುವ ವಿವಾದಗಳ ಕುರಿತ ಚರ್ಚೆಗಳೂ ಸಹ ನಡೆಯುತ್ತಿವೆ. ಹಾಗಿದ್ದರೆ ಐಪಿಎಲ್ನಲ್ಲಿ ಎಂಎಸ್ ಧೋನಿ ಮಾಡಿಕೊಂಡಿರುವ ಆ ವಿವಾದಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ ಓದಿ.

1. ಅಂಪೈರ್ ಜತೆಗೆ ಜಗಳ
ಅದು 2019ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ. ಈ ಪಂದ್ಯದ ಅಂತಿಮ ಓವರ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 18 ರನ್ಗಳ ಅಗತ್ಯವಿತ್ತು ಹಾಗೂ ತಂಡದ ಮಿಚೆಲ್ ಸ್ಯಾಂಟ್ನರ್ ಹಾಗೂ ರವೀಂದ್ರ ಜಡೇಜಾ ಕಣದಲ್ಲಿದ್ದರು. ಇನ್ನು ಈ ಓವರ್ನ್ನು ರಾಜಸ್ಥಾನ್ ರಾಯಲ್ಸ್ ತಂಡದ ಬೆನ್ ಸ್ಟೋಕ್ಸ್ ಮಾಡಿ ಮೊದಲ ಮೂರು ಎಸೆತಗಳಲ್ಲಿ 10 ರನ್ ನೀಡಿದ್ದರು. ಇನ್ನು ಸ್ಟೋಕ್ಸ್ ಎಸೆದ ನಾಲ್ಕನೇ ಎಸೆತದಲ್ಲಿ ಮಿಚೆಲ್ ಸ್ಯಾಂಟ್ನರ್ 2 ರನ್ ಕಲೆಹಾಕಿದರು ಹಾಗೂ ಈ ಎಸೆತ ದೊಡ್ಡ ಬೌನ್ಸರ್ ಕೂಡ ಆಗಿತ್ತು. ಆದರೆ ಮೈದಾನದಲ್ಲಿದ್ದ ಅಂಪೈರ್ ಮಾತ್ರ ಈ ಎಸೆತವನ್ನು ನೋ ಬಾಲ್ ನೀಡಲಿಲ್ಲ ಹಾಗೂ ಕಣದಲ್ಲಿದ್ದ ರವೀಂದ್ರ ಜಡೇಜಾ ಹಾಗೂ ಮಿಚೆಲ್ ಸ್ಯಾಂಟ್ನರ್ ಆ ಎಸೆತ ನೋ ಬಾಲ್ ಎಂದು ಮನವಿಯನ್ನೂ ಸಹ ಮಾಡಿದರು. ಇಷ್ಟೆಲ್ಲಾ ಆದರೂ ನೋ ಬಾಲ್ ನೀಡದ ಅಂಪೈರ್ ನಡೆಯ ವಿರುದ್ಧ ಕೋಪಗೊಂಡ ಎಂಎಸ್ ಧೋನಿ ಆ ಕ್ಷಣವೇ ಡಗ್ಔಟ್ನಿಂದ ಮೈದಾನಕ್ಕೆ ನುಗ್ಗಿ ನೋ ಬಾಲ್ಗಾಗಿ ಅಂಪೈರ್ಗಳೊಡನೆ ಮಾತಿನ ಚಕಮಕಿ ನಡೆಸಿದ್ದರು. ಇದು ಎಂಎಸ್ ಧೋನಿ ಐಪಿಎಲ್ನಲ್ಲಿ ಮಾಡಿಕೊಂಡಿರುವ ಮೊದಲ ವಿವಾದವಾಗಿದೆ.

2. ಸಹ ಆಟಗಾರರ ವಿರುದ್ಧವೇ ಮಾತನಾಡಿದ್ದ ಧೋನಿ
ಇನ್ನು ಎಂಎಸ್ ಧೋನಿ ತನ್ನ ತಂಡದ ಆಟಗಾರರ ಬೆಂಬಲಕ್ಕೆ ಸದಾ ನಿಲ್ಲುವ ಉತ್ತಮ ಗುಣವಿರುವ ಆಟಗಾರ. ಇಂತಹ ಎಂಎಸ್ ಧೋನಿ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ತಂಡದ ಯುವ ಆಟಗಾರರ ವಿರುದ್ಧವೇ ಮಾತನಾಡಿ ವಿವಾದಕ್ಕೀಡಾಗಿದ್ದರು. ಹೌದು, 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು. ಹೀಗೆ ಟೂರ್ನಿಯಲ್ಲಿ ಸಾಲು ಸಾಲು ಸೋಲು ಕಂಡದ್ದರ ಕುರಿತು ಮಾತನಾಡಿದ್ದ ಎಂಎಸ್ ಧೋನಿ ತಮ್ಮ ತಂಡದ ಯುವ ಆಟಗಾರರಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂಬ ಹಂಬಲವೇ ಇಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಅಂದು ಓರ್ವ ಅನುಭವಿ ಆಟಗಾರನಾಗಿ ಈ ರೀತಿಯ ಹೇಳಿಕೆ ನೀಡಿದ್ದ ಎಂ ಎಸ್ ಧೋನಿ ವಿವಾದಕ್ಕೀಡಾಗಿದ್ದಾರೆ.

3. ಮತ್ತೊಮ್ಮೆ ಅಂಪೈರ್ ಜೊತೆ ವಿವಾದ
ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಇದೇ ಟೂರ್ನಿಯಲ್ಲಿ ನಡೆದಿದ್ದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಶಾರ್ದೂಲ್ ಠಾಕೂರ್ ಎಸೆದ ಎಸೆತವೊಂದನ್ನು ಅಂಪೈರ್ ವೈಡ್ ಎಂದು ಘೋಷಿಸಲು ಮುಂದಾಗಿದ್ದರು. ಆದರೆ ಈ ಸಮಯಕ್ಕೆ ಸರಿಯಾಗಿ ಅಂಪೈರ್ನತ್ತ ನಾಯಕ ಎಂಎಸ್ ಧೋನಿ ದಿಟ್ಟಿಸಿ ನೋಡುವುದರ ಮೂಲಕ ಇದು ವೈಡ್ ಬಾಲ್ ಅಲ್ಲ ಎಂದು ಹೇಳಿದ್ದರು. ಧೋನಿ ಈ ರೀತಿ ದಿಟ್ಟಿಸಿ ನೋಡಿದ ಬೆನ್ನಲ್ಲೇ ವೈಡ್ ಬಾಲ್ ನೀಡಲು ಮುಂದಾಗಿದ್ದ ಅಂಪೈರ್ ವೈಡ್ ನೀಡದೇ ಅದನ್ನು ಒಳ್ಳೆಯ ಎಸೆತ ಎಂದು ತೀರ್ಮಾನಿಸಿದರು. ಹೀಗೆ ಎಂಎಸ ಧೋನಿ ಮೈದಾನದಲ್ಲಿಯೇ ಅಂಪೈರ್ನ್ನು ಬೆದರಿಸಿದ ವಿವಾದಕ್ಕೂ ಕೂಡ ಒಳಗಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications