ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಎನ್ಸಿಎ ನಡೆಸಿದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಜಡೇಜಾ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ವಾಪಸಾಗುವ ಉತ್ಸಾಹದಲ್ಲಿದ್ದರು. ಆದರೆ, ಈಗ ಅವರು ತಂಡದಿಂದ ಹೊರಗುಳಿದಿದ್ದಾರೆ.
ಎನ್ಸಿಎ ನಡೆಸಿದ ಫಿಟ್ನೆಸ್ ಪರೀಕ್ಷೆಯಲ್ಲಿ ರವೀಂದ್ರ ಜಡೇಜಾ ಉತ್ತೀರ್ಣರಾಗಿದ್ದರೂ ಕೂಡ, ಎನ್ಸಿಯನಲ್ಲಿರುವ ಫಿಸಿಯೋ ತಜ್ಞರು ಅವರಿಗೆ ಕ್ಲಿಯರೆನ್ಸ್ ನೀಡಲಿಲ್ಲ. ಅವರು ತಂಡಕ್ಕೆ ಸೇರ್ಪಡೆಯಾಗಲು ಇನ್ನೂ 100 ಪ್ರತಿಶತ ಫಿಟ್ ಆಗಬೇಕು ಎಂದು ಆಯ್ಕೆದಾರರು ಕಾರಣ ನೀಡಿದ್ದಾರೆ.
BBL: ಮೇಲ್ಛಾವಣಿಗೆ ತಗುಲಿದ ಚೆಂಡು, ಸಿಕ್ಸ್ ಎಂದು ವಿಶಿಷ್ಠ ತೀರ್ಪು ಕೊಟ್ಟ ಅಂಪೈರ್ : ವಿಡಿಯೋ ನೋಡಿ
ಚೇತನ್ ಶರ್ಮಾ ನೇತೃತ್ವದ ಹೊಸ ಆಯ್ಕೆ ಸಮಿತಿ ನ್ಯೂಜಿಲೆಂಡ್ ವಿರುದ್ಧದ ಏಕದಿನ, ಟಿ20 ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಏಕಕಾಲದಲ್ಲಿ ಮೂರು ತಂಡಗಳನ್ನು ಘೋಷಣೆ ಮಾಡಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಜಡೇಜಾರನ್ನು ಆಯ್ಕೆಗೆ ಪರಿಗಣಿಸಿಲ್ಲ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಅವರು ಆಯ್ಕೆಯಾಗಿದ್ದಾರೆ. ಆದರೆ, ತಂಡವನ್ನು ಸೇರುವ ಮುನ್ನ ಅವರು ಫಿಟ್ನೆಸ್ ಸಾಬೀತು ಪಡಿಸಬೇಕಾಗುತ್ತದೆ.
ಸಂಪೂರ್ಣವಾಗಿಲ್ಲ ಫಿಟ್ ಆಗಿಲ್ಲ
"ರವೀಂದ್ರ ಜಡೇಜಾ ಆರಂಭಿಕ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ, ಎನ್ಸಿಎ ಹೇಳುವ ಪ್ರಕಾರ ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಬೇಕಿದೆ. ರವೀಂದ್ರ ಜಡೇಜಾರ ಗಾಯದ ಇತಿಹಾಸವನ್ನು ಗಮನಿಸಿ, ಆಯ್ಕೆದಾರರು ಜಡೇಜಾರ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಲು ಮುಂದಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ನ್ಯೂಜಿಲೆಂಡ್ ವಿರುದ್ಧದ ಸರಣಿಗಿಂತ ಮುಖ್ಯವಾಗಿರುವುದರಿಂದ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಏಕದಿನ, ಟಿ20 ಸರಣಿಯಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ರಣಜಿ ಆಡುವ ಬಗ್ಗೆ ಕೂಡ ಚಿಂತನೆ
ಸದ್ಯ ರವೀಂದ್ರ ಜಡೇಜಾ ವಿಶ್ರಾಂತಿ ಮತ್ತು ಅಭ್ಯಾಸವನ್ನು ಮುಂದುವರೆಸಲಿದ್ದಾರೆ. ಭಾರತ ಟೆಸ್ಟ್ ತಂಡಕ್ಕೆ ಮರಳುವ ಮುನ್ನ ಅವರು ಸೌರಾಷ್ಟ್ರ ಪರವಾಗಿ ರಣಜಿ ಟ್ರೋಫಿ ಪಂದ್ಯದಲ್ಲಿ ಆಡುವ ಬಗ್ಗೆ ಕೂಡ ಚಿಂತನೆ ನಡೆಯುತ್ತಿದೆ. ಜಡೇಜಾ ಫಿಟ್ನೆಸ್ ಆಧರಿಸಿ ಆಯ್ಕೆದಾರರು ಮುಂದಿನ ತೀರ್ಮಾನ ಮಾಡಲಿದ್ದಾರೆ.
"ಆಸ್ಟ್ರೇಲಿಯಾದಂತ ಬಲಿಷ್ಠ ತಂಡದ ವಿರುದ್ಧ ಆಡುವಾಗ ರವೀಂದ್ರ ಜಡೇಜಾ ತಂಡಕ್ಕೆ ಮುಖ್ಯವಾಗುತ್ತಾರೆ. ಇದೇ ಕಾರಣಕ್ಕೆ ಅವರ ವಿಚಾರದಲ್ಲಿ ಅವಸರದ ತೀರ್ಮಾನ ಮಾಡಿಲ್ಲ. ರಣಜಿಯಲ್ಲಿ ಜಡೇಜಾ ಆಡುವ ಬಗ್ಗೆ ಆಯ್ಕೆದಾರರು ಮತ್ತು ಎನ್ಸಿಎ ತೀರ್ಮಾನ ಮಾಡಲಿದೆ" ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ ಎಂದು ಇನ್ಸೈಡ್ ಸ್ಪೋರ್ಟ್ ವರದಿ ಮಾಡಿದೆ.
2022ರ ಏಷ್ಯಾ ಕಪ್ ವೇಳೆ ಯುಎಇಯಲ್ಲಿ ಗಾಯಗೊಂಡಿದ್ದ ಜಡೇಜಾ ಅಂದಿನಿಂದ ವಿಶ್ರಾಂತಿಯಲ್ಲಿದ್ದಾರೆ. ಮುಂಬೈನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಅವರು ಟಿ20 ವಿಶ್ವಕಪ್ನಿಂದ ಕೂಡ ಹೊರಗುಳಿಯಬೇಕಾಯಿತು.