ಬೆಂಗಳೂರು, ಜುಲೈ 22: ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನ ಎಲ್ಲಾ 6 ತಂಡಗಳು ತಾವು ಉಳಿಸಿಕೊಂಡ 2 ಆಟಗಾರರನ್ನು ಪ್ರಕಟಿಸಿದೆ. ಅಚ್ಚರಿ ಎಂಬಂತೆ ಬಳ್ಳಾರಿ ಟಸ್ಕರ್ಸ್ ತಂಡ ಸ್ಫೋಟಕ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಅವರನ್ನು ತಂಡದಿಂದ ಬಿಡುಗಡೆಗೊಳಿಸಿದೆ.
ಕಳೆದ ವರ್ಷ 5.3 ಲಕ್ಷ ರು ದಾಖಲೆ ಮೊತ್ತಕ್ಕೆ ರಾಬಿನ್ ಉತ್ತಪ್ಪ ಅವರನ್ನು ಬಳ್ಳಾರಿ ಟಸ್ಕರ್ಸ್ ತಂಡ ಖರೀದಿಸಿತ್ತು. ಕೆಪಿಎಲ್ ನ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದ ರಾಬಿನ್ ಉತ್ತಪ್ಪ ಅವರು ಈಗ ಎಲ್ಲರಂತೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಯಾವ ತಂಡ ಖರೀದಿಸುವುದೋ ಎಂದು ಕಾದು ಕುಳಿತುಕೊಳ್ಳಬೇಕಾಗಿದೆ.[ಕೆಪಿಎಲ್ 2015 ವೇಳಾಪಟ್ಟಿ ಪ್ರಕಟ, ಸುದೀಪ್ ಟೀಂ ಎಂಟ್ರಿ]
ಕೆಪಿಎಲ್ ನಿಯಮದ ಪ್ರಕಾರ ಹಾಲಿ ತಂಡದಲ್ಲಿರುವ ಇಬ್ಬರು ಆಟಗಾರರನ್ನು ಪ್ರತಿ ತಂಡ ಉಳಿಸಿಕೊಳ್ಳಬಹುದಾಗಿದೆ. ಈ ವರ್ಷದಿಂದ ಕಿಚ್ಚ ಸುದೀಪ್ ಒಡೆತನದ 'ನಮ್ಮ ಬೆಂಗಳೂರು' ಹಾಗೂ ಸುದೀಪ್ ನಾಯಕತ್ವದ ಆಲ್ ಸ್ಟಾರ್ಸ್ ಸೆಲೆಬ್ರಿಟಿ XI ಕೂಡಾ ಕೆಪಿಎಲ್ ನಲ್ಲಿ ಪಾಲ್ಗೊಳ್ಳುತ್ತಿದೆ.
ರಾಕ್ ಸ್ಟಾರ್ ತಂಡದಲ್ಲಿ ಮಾಜಿ ಟೆಸ್ಟ್ ಆಟಗಾರರಾದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ ಹಾಗೂ ಡೇವಿಡ್ ಜಾನ್ಸನ್ ಅವರು ಆಡುತ್ತಿರುವುದು ವಿಶೇಷ.
ನಿರೀಕ್ಷೆಯಂತೆ ಕರ್ನಾಟಕದ ರಣಜಿ ತಂಡದ ನಾಯಕ ವಿನಯ್ ಕುಮಾರ್ ಅವರನ್ನು ಬೆಳಗಾವಿ ಪ್ಯಾಂಥರ್ಸ್ ತಂಡ ಉಳಿಸಿಕೊಂಡಿದೆ. ಕಳೆದ ಬಾರಿ ಬೆಳಗಾವಿ ತಂಡ ಫೈನಲ್ ಹಂತ ತಲುಪಿ ಮೈಸೂರು ವಾರಿಯರ್ಸ್ ವಿರುದ್ಧ ಸೋಲು ಕಂಡಿತ್ತು. ಉಳಿದಂತೆ, ಇತ್ತೀಚೆಗೆ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟು ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲೇ ಉತ್ತಮ ಆಟ ಪ್ರದರ್ಶಿಸಿದ ಮನೀಶ್ ಪಾಂಡೆ ಅವರು ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡದಲ್ಲೇ ಆಡಲಿದ್ದಾರೆ. [ಮೈಸೂರು ವಾರಿಯರ್ಸ್ ಕೆಪಿಎಲ್ ಚಾಂಪಿಯನ್]
ಕೆಪಿಎಲ್ 2015ರಲ್ಲಿ 6 ತಂಡಗಳು ಉಳಿಸಿಕೊಂಡ ಆಟಗಾರರು:
ಮೈಸೂರು ವಾರಿಯರ್ಸ್ : ಮನೀಶ್ ಪಾಂಡೆ ಹಾಗೂ ಜೆ ಸುಚಿತ್
ಮಂಗಳೂರು ಯುನೈಟೆಡ್: ಕರುಣ್ ನಾಯರ್ ಹಾಗೂ ರೋನಿತ್ ಮೋರೆ.
ಹುಬ್ಬಳ್ಳಿ ಟೈಗರ್ಸ್: ಕೆಎಲ್ ರಾಹುಲ್ ಹಾಗೂ ಎಸ್ ಅರವಿಂದ್
ಬಿಜಾಪುರ್ ಬುಲ್ಸ್ : ಆರ್ ಸಮರ್ಥ್ ಹಾಗೂ ಕೆಸಿ ಕಾರ್ಯಪ್ಪ
ಬಳ್ಳಾರಿ ಟಸ್ಕರ್ಸ್: ದೇವರಾಜ್ ಪಾಟೀಲ್ ಹಾಗೂ ಡಿ ನಿಶ್ಚಲ್
ಬೆಳಗಾವಿ ಪ್ಯಾಂಥರ್ಸ್: ಆರ್ ವಿನಯ್ ಕುಮಾರ್ ಹಾಗೂ ಅಭಿಷೇಕ್ ರೆಡ್ಡಿ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜುಲೈ 25(ಶನಿವಾರ)ರಂದು ಸುಮಾರು 100 ಜನ ಕ್ರಿಕೆಟರ್ ಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ತಂಡದಲ್ಲೂ 20 ಸದಸ್ಯರನ್ನು ಹೊಂದಬಹುದಾಗಿದೆ.
( ಒನ್ ಇಂಡಿಯಾ ಸುದ್ದಿ)