ನವೆಂಬರ್ 13 : ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಯುವ ಸ್ಪಿನ್ನರ್ ಕುಲದೀಪ್ ಯಾದವ್ ಹಿಂದೊಮ್ಮೆ 15 ವರ್ಷದ ತಂಡಕ್ಕೆ ಆಯ್ಕೆ ಆಗಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದರಂತೆ.
ಹ್ಯಾಟ್ರಿಕ್ ಪಡೆದು ದಾಖಲೆ ಬರೆದ ಚೈನಾಮನ್ ಕುಲದೀಪ್
ಹೌದು ಆಗಿನ್ನೂ 13 ವರ್ಷದ ಕುಲದೀಪ್ ಯಾದವ್ 15 ವರ್ಷದ ಉತ್ತರ ಪ್ರದೇಶ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಲಿಲ್ಲ ಎಂದು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರಂತೆ.
'ತಂಡಕ್ಕೆ ಆಯ್ಕೆ ಆಗಲೇ ಬೇಕೆಂದು ಕಠಿಣ ಪರಿಶ್ರಮಪಟ್ಟಿದ್ದೆ, ಆದರೆ ಆಯ್ಕೆಗಾರರು ನನ್ನನ್ನು ತಂಡಕ್ಕೆ ಪರಿಗಣಿಸಲಿಲ್ಲ ಇದರಿಂದ ಹತಾಷೆಗೆ ಒಳಗಾಗಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದೆ. ಕೆಲವು ಹತಾಷ ಪರಿಸ್ಥಿತಿಗಳು ಇಂತಹಾ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿಬಿಡುತ್ತವೆ' ಎಂದು ಅವರು ಅಂದಿನ ದಿನದ ಬಗ್ಗೆ ಹೇಳಿದ್ದಾರೆ.
ಆದರೆ ಕ್ರೀಡೆಯ ಮೇಲಿನ ಪ್ರೀತಿ ಕಳೆದುಕೊಳ್ಳದೆ ಇದುದ್ದರಿಂದ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಒದಗಿಬಂದಿದೆ ಎಂದು ಅವರು ಹೇಳಿದ್ದಾರೆ. ಬಾಲ್ಯದಲ್ಲಿ ಸದಾ ಕ್ರಿಕೆಟ್ ನಲ್ಲೇ ಮುಳುಗಿರುತ್ತಿದ್ದ ಅವರು ವೇಗದ ಬೌಲರ್ ಆಗಬೇಕು ಎಂದುಕೊಂಡಿದ್ದರಂತೆ ಆದರೆ ಅವರ ತರಬೇತುದಾರರು ಅವರನ್ನು ಸ್ಪಿನ್ ಬೌಲರ್ ಆಗುವಂತೆ ಮಾಡಿದರಂತೆ.
ಕುಲದೀಪ್ ಯಾದವ್ ಅವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಮುಂಚೆ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಏಕದಿನ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಯಾದವ್ ನವೆಂಬರ್ 16ರಂದು ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಆಗಿದ್ದಾರೆ.