ಉತ್ತಮ ಬ್ಯಾಟಿಂಗ್ ಪ್ರದರ್ಶನ
ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ರವಿಕುಮಾರ್ ಸಮರ್ಥ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಭದ್ರ ಬುನಾದಿ ಹಾಕಿದರು. ಈ ಜೋಡಿ ಮೊದಲನೇ ವಿಕೆಟ್ಗೆ 159 ರನ್ ಕಲೆಹಾಕಿತು. ಮಯಾಂಕ್ ಅಗರ್ವಾಲ್ 83 ರನ್ ಗಳಿಸಿದರೆ, ರವಿಕುಮಾರ್ ಸಮರ್ಥ್ 82 ರನ್ ಗಳಿಸಿ ಮಿಂಚಿದರು.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 69 ರನ್ ಗಳಿಸದರೆ, ನಿಕಿನ್ ಜೋಸ್ 62 ರನ್ ಗಳಿಸಿದರು. ಅನುಭವಿ ಬ್ಯಾಟರ್ ಮನಿಶ್ ಪಾಂಡೆ 39 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಬೃಹತ್ ಮುನ್ನಡೆ ಸಾಧಿಸಿದ ಕರ್ನಾಟಕ
ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 288 ಎಸೆತಗಳನ್ನು ಎದುರಿಸಿದ ಅವರು 16 ಬೌಂಡರಿ ಒಂದು ಭರ್ಜರಿ ಸಿಕ್ಸರ್ ಸಹಿತ ಅಜೇಯ 161 ರನ್ ಗಳಿಸಿ ಕರ್ನಾಟಕ ತಂಡ ಬೃಹತ್ ಮೊತ್ತ ಕಲೆ ಹಾಕಲು ಕಾರಣವಾದರು. ಶರತ್ ಬಿಆರ್ 33, ಕೃಷ್ಣಪ್ಪ ಗೌತಮ್ 39, ಮುರಳೀಧರ ವೆಂಕಟೇಶ್ 15 ರನ್ ಗಳಿಸುವ ಮೂಲಕ ಶ್ರೇಯಸ್ ಗೋಪಾಲ್ಗೆ ಉತ್ತಮವಾಗಿ ಜೊತೆಯಾದರು.
ಅಂತಿಮವಾಗಿ ಕರ್ನಾಟಕ 606 ರನ್ಗಳಿ ಆಲೌಟ್ ಆಗುವ ಮೂಲಕ ಮೊದಲನೇ ಇನ್ನಿಂಗ್ಸ್ನಲ್ಲಿ 490 ರನ್ಗಳ ಬೃಹತ್ ಮುನ್ನಡೆ ಪಡೆದುಕೊಂಡಿತ್ತು.
ಬೌಲಿಂಗ್ ದಾಳಿಗೆ ತತ್ತರಿಸಿ ಉತ್ತರಾಖಂಡ
490 ರನ್ಗಳ ಬೃಹತ್ ಹಿನ್ನಡೆಯನ್ನು ಅನುಭವಿಸಿದ ಉತ್ತರಾಖಂಡಕ್ಕೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಅವಕಾಶ ಇತ್ತು. ಆದರೆ, ಕರ್ನಾಟಕದ ಮಾರಕ ಬೌಲಿಂಗ್ ದಾಳಿ ಮುಂದೆ ಅವರು ಎರಡು ದಿನ ಬ್ಯಾಟಿಂಗ್ ಮಾಡುವುದು ಅಸಾಧ್ಯವಾಗಿತ್ತು. 3ನೇ ದಿನದ ಆಟ ಮುಕ್ತಾಯವಾದಾಗಲೇ ಉತ್ತರಾಖಂಡದ ಸೋಲು ಖಚಿತವಾಗಿತ್ತು.
ಎರಡನೇ ಇನ್ನಿಂಗ್ಸ್ನಲ್ಲಿ 209 ರನ್ಗಳಿಸುವಷ್ಟರಲ್ಲಿ ಉತ್ತರಾಖಂಡವನ್ನು ಆಲೌಟ್ ಮಾಡುವ ಮೂಲಕ ಕರ್ನಾಟಕ ಇನ್ನಿಂಗ್ಸ್ ಮತ್ತು 281 ರನ್ಗಳ ಭರ್ಜರಿ ಜಯ ಸಾಧಿಸಿದರು. ಶತಕ ಸಿಡಿಸಿ ಮಿಂಚಿದ್ದ ಶ್ರೇಯಸ್ ಗೋಪಾಲ್ 3 ವಿಕೆಟ್ ಪಡೆದರೆ, ವಿಜಯ್ ಕುಮಾರ್ ವೈಶಾಕ್ ಕೂಡ 3 ವಿಕೆಟ್ ಪಡೆದರು. ವಿಧ್ವತ್ ಕಾವೇರಪ್ಪ ಮತ್ತು ಮುರಳೀಧರ ವೆಂಕಟೇಶ್ ತಲಾ ಎರಡು ವಿಕೆಟ್ ಪಡೆದರು.
ಈ ಬಾರಿ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದಿರುವ ಕರ್ನಾಟಕ ತಂಡಕ್ಕೆ ಕಪ್ ಗೆಲ್ಲುವ ಉತ್ತಮ ಅವಕಾಶ ಸಿಕ್ಕಿದೆ. ಇದೇ ಪ್ರದರ್ಶವನ್ನು ಇನ್ನೆರಡು ಪಂದ್ಯಗಳಲ್ಲಿ ನೀಡಿದರೆ ಕರ್ನಾಟಕ ಈ ಬಾರಿ ಚಾಂಪಿಯನ್ ಆಗುವುದು ಖಚಿತವಾಗುತ್ತದೆ.