
ಹಾರ್ದಿಕ್ ಪಾಂಡ್ಯ ತಂಡದಲ್ಲಿರಬೇಕು ಎಂದು ಸೂಚಿಸಿದ್ದೇ ಎಂಎಸ್ ಧೋನಿ!
"ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೀರಸ ಪ್ರದರ್ಶನವನ್ನು ನೀಡಿದ ನಂತರ ಆತನನ್ನು ಭಾರತ ಕ್ರಿಕೆಟ್ ತಂಡದ ಆಯ್ಕೆಗಾರರು ಭಾರತಕ್ಕೆ ವಾಪಸ್ ಕಳುಹಿಸಲು ತೀರ್ಮಾನಿಸಿದ್ದರು. ಆದರೆ ಮಾರ್ಗದರ್ಶಕನಾಗಿ ಆಯ್ಕೆಯಾಗಿದ್ದ ಎಂ ಎಸ್ ಧೋನಿ ಹಾರ್ದಿಕ್ ಪಾಂಡ್ಯನನ್ನು ತಂಡದಲ್ಲಿಯೇ ಉಳಿಸಿಕೊಳ್ಳಬೇಕೆಂದು ಒತ್ತಡ ಹಾಕಿದರು" ಎಂದು ಬಲ್ಲ ಮೂಲಗಳು ತಿಳಿಸಿವೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡಲು ನಿರಾಕರಿಸಿದ್ದರು ಹಾರ್ದಿಕ್ ಪಾಂಡ್ಯ
ಕಳೆದ ಅಕ್ಟೋಬರ್ 24ರ ಭಾನುವಾರದಂದು ಪಾಕಿಸ್ತಾನ ವಿರುದ್ಧ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಆರಂಭಕ್ಕೂ ಮುನ್ನವೇ ಮಾತನಾಡಿದ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿಯೂ ಕೂಡ ನಾನು ಬೌಲಿಂಗ್ ಮಾಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಅಷ್ಟೇ ಅಲ್ಲದೆ ಬ್ಯಾಟಿಂಗ್ ವೇಳೆ ಮತ್ತೆ ಭುಜದ ಗಾಯಕ್ಕೆ ಒಳಗಾದ ಹಾರ್ದಿಕ್ ಪಾಂಡ್ಯ ಚಿಕಿತ್ಸೆಗೆ ಒಳಗಾಗಿ ಆ ಪಂದ್ಯದಲ್ಲಿ ಫೀಲ್ಡಿಂಗ್ ಕೂಡ ಮಾಡಿರಲಿಲ್ಲ.

ಮುಂದಿನ ಪಂದ್ಯವನ್ನಾಡಲು ಫಿಟ್ನೆಸ್ ಪರೀಕ್ಷೆ ತೇರ್ಗಡೆಯಾಗಬೇಕು ಹಾರ್ದಿಕ್ ಪಾಂಡ್ಯ
ಹೀಗೆ ಗಾಯದ ಸಮಸ್ಯೆಗೆ ಒಳಗಾಗಿ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಾ, ಬೌಲಿಂಗ್ ಕೂಡ ಮಾಡಲಾಗದೇ ಇದ್ದ ಹಾರ್ದಿಕ್ ಪಾಂಡ್ಯ ಕಳೆದ ಬುಧವಾರದಂದು ಅಭ್ಯಾಸದ ವೇಳೆ 15 ನಿಮಿಷಗಳ ಕಾಲ ಬೌಲಿಂಗ್ ಅಭ್ಯಾಸವನ್ನು ನಡೆಸಿದ್ದರು. ಹೀಗೆ ಮುಂಬರುವ ಭಾನುವಾರದಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾಗವಹಿಸಲು ಹಾರ್ದಿಕ್ ಪಾಂಡ್ಯ ಬೌಲಿಂಗ್ ಅಭ್ಯಾಸ ನಡೆಸಿದ್ದು ಇದೀಗ ಅದಕ್ಕೂ ಮುನ್ನ ಫಿಟ್ನೆಸ್ ಪರೀಕ್ಷೆಯೊಂದನ್ನು ಹಾರ್ದಿಕ್ ಪಾಂಡ್ಯ ಎದುರಿಸಲಿದ್ದಾರೆ. ಹೌದು, ಇಂದು ( ಅಕ್ಟೋಬರ್ 29 ) ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆಯನ್ನು ಎದುರಿಸಲಿದ್ದು ಇದರಲ್ಲಿ ಉತ್ತೀರ್ಣರಾದರೆ ಮಾತ್ರ ಮುಂದಿನ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.


Click it and Unblock the Notifications












